Sunday, 21 January 2018

ಎಣ್ಣೆ ಪುರಾಣ..!

 ಮಂಜುನಾಥ ಗದಗಿನ

     ಎಣ್ಣೆ ಎಂದರೇ ಸಾಕು, ಅದೆಷ್ಟೋ..ಮುಖಗಳಲ್ಲಿ ವಧುವಿನ ಕಳೆ ಬಂದು ಬಿಡುತ್ತದೆ. ಮತ್ತೊಂದಿಷ್ಟು ಮುಖಗಳು ಶಿಂಗೆ ಎಣ್ಣೆ ಕುಡಿದರವ ಹಾಗಾಗಿರುತ್ತವೆ. ಈ ಎಣ್ಣೆ ಮಹಿಮೆನೆ ಹಾಗೆ, ಅದು ಕಾಲಿಟ್ಟಲೆಲ್ಲಾ ಧೂಳ್ ಎಬ್ಬಿಸಿರುತ್ತದೆ. ಅದರ ಮರ್ಮವೆನೆಂಬುವದು ಆ ದೇವರೇ ಬಲ್ಲ.  ಹ್ಞೂ! ಮೊನ್ನೆ ಕ್ಲಾಸ್‌ನಲ್ಲು ಎಣ್ಣೆಯದ್ದೆ ಸಮಾಚಾರ, ಹುಡಗ-ಹುಡುಗಿಯರು ಎನ್ನದೇ ಎಲ್ಲರ ಬಾಯಿಯಲ್ಲೂ ಎಣ್ಣೆಯದ್ದೆ ಮಾತು.
   ಅವತ್ತು ಎಡಮಗ್ಗಲಲ್ಲಿ ಎದ್ದಿರ‌್ಬೇಕು. ಕಾಲೇಜಿಗೆ ಹೋಗುವ ದಾರಿಯಲ್ಲಿ ಬಸ್ ಕೆಟ್ಟು ಹೋಯಿತು. ಇದರಿಂದ ಕ್ಲಾಸ್‌ಗೆ ಹೋಗುವದು ತುಂಬಾ ಲೇಟ್ ಆಯಿತು. ಅದರಲ್ಲೂ ನಮ್ಮ ವಿಭಾಗಕ್ಕೆ ಹೋಗ್ಬೇಕಾದ್ರೆ, ಅರ್ಧ ಜೀವವೇ ಕೈ ಬಂದಿರುತ್ತದೆ. ಇಂತಹದ್ರಲ್ಲಿ ದಡಬಡಾಯಿಸಿಕೊಂಡು ಕ್ಲಾಸ್‌ಗೆ ಎಂಟ್ರಿಕೊಟ್ಟೆ, ಎಲ್ಲ ಸಹಪಾಠಿಗಳು ಹರಟುತ್ತಾ ಕುಳಿತಿದ್ರು. ಇದನ್ನು ನೋಡಿದಾಕ್ಷಣ ನಿಟ್ಟುಸಿರು ಬಿಟ್ಟು, ಸ್ವಲ್ಪ ಸಾವರಿಸಿಕೊಂಡು, ಕ್ಲಾಸ್ ರೋಮ್‌ಗೆ ಹೋದೆ.
   ಲೇಕ್ಚರ್ ಇಲ್ಲದ ಕ್ಲಾಸುಗಳಲ್ಲಿ ಸ್ಟೂಡೆಂಟ್‌ಗಳದ್ದೇ ದರ್ಬಾರು. ಅವರಲ್ಲೇ ಕೆಲವೊಂದಿಷ್ಟು ಮಹಾನುಭಾವರು ವಿಶಿಷ್ಟ! ಕ್ಲಾಸ್‌ಗಳನ್ನು ತೆಗೆದುಕೊಂಡು, ಅವರಿವರ ಕಾಲು ಎಳೆಯುತ್ತಾ ರೇಗಿಸುತ್ತಿರುತ್ತಾರೆ. ಹೀಗೆ ಕಾಡು ಹರಟೆಯ ಮಧ್ಯ ಒಬ್ಬನನ್ನು ಟಾರ್ಗೇಟ ಮಾಡಿ ಕಾಡಿಸುವದು ವಿದ್ಯಾರ್ಥಿ ಗುಂಪುಗಳಲ್ಲಿ ಸರ್ವೇಸಾಮಾನ್ಯ ಇದೇ ರೀತಿ ಅವತ್ತಿನ ದಿನದ ಟಾರ್ಗೇಟ ಆಗಿದ್ದು ನಮ್ಮೆಲ್ಲರ ಕುಚುಕು ಮೌನೇಶ ಅಲಿಯಾಸ ಸಿಂಹ. ಹೌದು! ಅವನನ್ನು ನಾವು ಪ್ರೀತಿಯಿಂದ ಸಿಂಹ
ಎಂದು ಕರೆಯುತ್ತೇವೆ.
   ನಮ್ಮ ಕ್ಲಾಸ್ನ ಸನ್ಯಾಸಿ ಎಂದೆ ಕರೆಯಲ್ಪಡುವ ದಿನೇಶ, ಅವತ್ತು ಅದೊಂದು ಮೂಲೆಯಲ್ಲಿ ಕುಳಿತಿದ್ದ. ಅದೇನೋ, ಸಡನಾಗಿ ಎದ್ದು  ಮೌನೇಶ ಗೋದ್ರೆಜ್ ಆಯಿಲ್ ನಿಮ್ಮ ಕೂದಲುಗಳು ಊದುರುತ್ತಿವೆಯೇ? ಹಾಗಾದ್ರೆ ಬಳಸಿ  ಮೌನೇಶ ಗೋದ್ರೆಜ್ ಆಯಿಲ್ ಎಂದು ಪಕ್ಕದಲ್ಲೆ ಕುಳಿತಿದ್ದ ಮಿಲನನ್ನು ಕೇಳಿದ. ಅದಕ್ಕೆ ಮಿಲನ ಕೂಡಾ ಧ್ವನಿಗೂಡಿಸಿದ್ದರಿಂದ, ಮೌನೇಶನ ಪಿತ್ತ ನೇತ್ತಿಗೇರಿತು.  ಲೋ.. ದಿನ್ಯಾ ಸುಮ್ಮನ ಕುಂದ್ರೂ, ಇಲ್ಲಾಂದ್ರ ನೋಡ ಮತ್ತ ಎಂದು ದಬಾಯಿಸಿದ. ಆದ್ರೆ ದಿನೇಶ ಇದಾವುದಕ್ಕೂ ಕೇರ್ ಮಾಡದೇ, ತನ್ನ ಘನಕಾರ್ಯವನ್ನು ಮುಂದುವರೆಸಿದ್ದ. ಇದನ್ನು ನೋಡಿ ಉಳಿದವರು ತಮ್ಮಂತಮ್ಮಲ್ಲೇ  ನಿಮ್ಮ ತಲೆಯಲ್ಲಿ ಹೊಟ್ಟು ಆಗಿದೇಯೇ? ಹಾಗಾದ್ರೆ ಬಳಸಿ  ಮೌನೇಶ ಗೋದ್ರೆಜ್ ಆಯಿಲ್ ಎಂದು ತಮಾಸೆ ಮಾಡಲು ಶುರುವಿಟ್ಟುಕೊಂಡರು.
  ಇನ್ನೂ ಹೊರಗಿನಿಂದ, ಯಾರಾದ್ರು? ಒಳಗಡೆ ಬಂದ್ರೆ ಸಾಕು ಎಲ್ಲರೂ ಎಕಸ್ವರದಲ್ಲಿ  ನಿಮ್ಮ ತಲೆಯಲ್ಲಿ ಕೂದಲುಗಳು ಬೆಳೆಯಬೇಕೆ? ಹಾಗಾದ್ರೆ ಬಳಲಿ, ಮೌನೇಶ ಗೋದ್ರಜ್ ಆಯಿಲ್ ಎಂದು ಕೂಗುತ್ತಿದ್ದೇವು. ಅವರೂ ಇದನ್ನು ಅರ್ಥ ಮಾಡಿಕೊಂಡು, ಮೌನೇಶ ಹತ್ರ ಹೋಗಿ  ಎಣ್ಣೆ  ಕೊಡೋ.. ಎಂದು ಕಾಡಿಸುತ್ತಿದ್ದರು. ಇದನ್ನು ನೋಡಿ ಪಾಪಾ! ಮೌನೇಶ ಸಹಿತಿ ನಮ್ಮ ಧ್ವನಿಗೆ ಧ್ವನಿಯಾಗಿ ಬಿಟ್ಟ. ನಮ್ಮ ಎಣ್ಣೆ ಪುರಾಣ ಇಷ್ಟಕ್ಕೆ ನಿಲ್ಲದೇ, ಕ್ಲಾಸ್ ನಡೆದಾಗ್ಲೂ ಶುರುವಿತ್ತು. ಕೇಲವರಂತು ಅನ್ನೋದು, ನಗೋದು ಮಾಡ್ತಾಯಿದ್ರು ಇದನ್ನು ನೋಡಿ, ನಮ್ಮ ಸರ್ ಯಾಕೆ? ನಗ್ತಾಯಿದ್ದಿರಾ? ಎಂದು ಕೇಳಿಯೇಬಿಟ್ರು. ಅದಕ್ಕೆ, ಏನಿಲ್ಲ ಸರ್ ಎಂದು, ಮತ್ತೆ ಪಾಠ ಕೇಳಲು ಶುರು ಮಾಡಿದ್ವಿ.
   ಕ್ಲಾಸ್ ಮುಗಿದ ಮೇಲೆ ಮತ್ತದೇ ಎಣ್ಣೆ ಮಾತು ಶುರುವಾಯಿ, ಕ್ಯಾಂಪಸ್ ಬಂದ್ರು ಈ ಮ್ಯಾಟರ್ ಮಾತ್ರ ನಿಂತಿರಲಿಲ್ಲ. ಅಷ್ಟೋತ್ತಿಗಾಗಲೇ ಬಸ್ ಬಂದಿದ್ದರಿಂದ ನಾನು, ಶ್ರೀ, ಬಸ್ ಹತ್ತಿ ಹೊರಟೆವು. ಆದ್ರೆ ಅವರ ಮಧ್ಯೆ ಎಣ್ಣೆ ಪುರಾಣದ ಮಾತು ಸದ್ದಿಲ್ಲದೆ ಗದ್ದಲ ಎಬ್ಬಿಸಿತ್ತು.



No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...