Saturday, 7 April 2018

ಹೊಟ್ಟೆಯ ಹಿಟ್ಟಿಗಾಗಿ ಕಟ್ಟಿಗೆ ಹೊರುವ ಕಸರತ್ತು.


ಮಂಜುನಾಥ ಗದಗಿನ

  ಆಧುನಿಕ ಜೀವನ ಶೈಲಿಗೆ ಕಾಲಿಕಟ್ಟಿಕೊಂಡು ಯಾವ ದಿಕ್ಕು ದೆಸೆಯು ಗೊತ್ತಿಲ್ಲದೆ ಕೇವಲ ದುಡ್ಡು ಸಂಪಾದನೆಗಾಗಿ, ಜೀವನದ ಅಮೂಲ್ಯ ಕ್ಷಣಗಳನ್ನು ಯಾಂತ್ರಿಕ ವಸ್ತುಗಳೊಂದಿಗೆ ನಮ್ಮದೇ ಹಮ್ಮು-ಬಿಮ್ಮಿನಲ್ಲಿ ಕಳೆಯುತ್ತಿದ್ದೇವೆ. ಆದರೆ ಕೆಲವೊಂದಿಷ್ಟು ಜನರು ಯಾಂತ್ರಿಕ ಬದುಕಿನಿಂದ ದೂರವೇ ಇದ್ದು ತಮ್ಮದೇ ಪುಟ್ಟ ಪ್ರಪಂಚದಲ್ಲಿ ಆಸೆ, ಆಕಾಂಕ್ಷೆಗಳೊಂದಿಗೆ ಹೊಟ್ಟೆಯ ಹಿಟ್ಟಿಗಾಗಿ, ದಿನನಿತ್ಯ ಕಟ್ಟಿಗೆ ಹೊರುವ ಕೆಲಸವನ್ನು ಮಾಡುತ್ತಿದ್ದಾರೆ.
  ಸೂರ್ಯ ಹುಟ್ಟುವುದಕ್ಕೂ ಮುನ್ನ, ಎದ್ದು ಮನೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಟ್ಟು. ತಮ್ಮ ಹೊಟ್ಟೆಗೆ ಸ್ಪಲ್ಪ ಬುತ್ತಿಕಟ್ಟಿಕೊಂಡು ಹೋಗುವ ಈ ಮಹಿಳೆಯರು ಮತ್ತೆ ಮನೆ ಸೇರುವುದು ಅದೇ ಸೂರ್ಯನೊಂದಿಗೆ. ಈ ಮಹಿಳೆಯರದ್ದು ದಿನನಿತ್ಯದ ಕಾಯಕವೇ ಇದು.
 ಬದುಕಿನ ಬಡತನ ಎಂತಹ ಕೆಲಸಕ್ಕಾದರು ಪ್ರೇರೆಪಿಸುತ್ತದೆ ಎಂಬುದಕ್ಕೆ ಅಂದು ದಾರಿಯಲ್ಲಿ ಕಂಡ ಈ ಮಹಿಳೆಯರೇ ಜ್ವಲಂತ ಸಾಕ್ಷಿಯಾಗಿದ್ದರು. ತುತ್ತು ಅನ್ನಕ್ಕಾಗಿ ಸುಡು ಬಿಸಿಲನ್ನು ಲೆಕ್ಕಿಸದೇ ಕಾಣದ ಯಾವುದೋ ಒಂದು ದಾರಿಗುಂಟ ಅದೇಷ್ಟೋ ಕೀ.ಮಿಗಳನ್ನು ನಡೆದುಕೊಂಡು ಕಟ್ಟಿಗೆ ತರುತ್ತಿದ್ದರು. ಮಾಸಿದ ಬಟ್ಟೆ, ಅವರ ಕಾಲಲ್ಲಿನ ಚಪ್ಪಲಿಗಳು ಅವರ ಬದುಕಿನ ಬಡತನವನ್ನು ಅಣಕಿಸುತ್ತಿದ್ದವು.
ಇವರ ಆ ಗಟ್ಟಿತನ ಅದೆಂತಹ ಗಂಡೆದೆಯನ್ನು ಗದರಿಸುವಂತಿತ್ತು.
  ನಾವುಗಳು ಮನೆಯಲ್ಲಿ ಇದ್ದಾಗ ಒಂದು ಕಡ್ಡಿಯನ್ನು ತೆಗೆದು ಈ ಕಡೆಯಿಂದ ಆ ಕಡೆಗೆ ಹಾಕುವುದಿಲ್ಲ. ಒಂದು ವೇಳೆ ಹಾಕಿದ್ರು ಆ ಮೇಲೆ ಸೊಂಟನೋವು ಎಂದು ಹಾಸಿಗೆ ಹಿಡಿಯುವುದು ಗ್ಯಾರಂಟಿ. ಹೌದು! ಇದು ನಮ್ಮ ಆಧುನಿಕ ಜೀವನ ಶೈಲಿಯ ಯಾಂತ್ರಿಕ ಬದುಕಿನ ಬಹು ದೊಡ್ಡ ಉಡುಗರೆ ಎಂದರೆ ತಪ್ಪಾಗಲಾರದು. ಇಂತಹ ಪರಸ್ಥಿಯಲ್ಲಿ ಈ ಮಹಿಳೆಯರು ದಿನ ನಿತ್ಯ ತಮಗೆ ತಿಳಿಯದಷ್ಟು ದೂರವನ್ನು ಸಾಗಿ, ಭಾರವಾದ ಕಟ್ಟಿಗಳನ್ನು ಕಡೆದುಕೊಂಡು, ಅವುಗಳನ್ನು ವ್ಯವಸ್ಥಿತವಾಗಿ ಕಟ್ಟಿಕೊಂಡು, ತಲೆಯ ಮೇಲೆ ಹೊತ್ತುಕೊಂಡು ಬರುತ್ತಾರಲ್ಲಾ! ಅವರ ಗಟ್ಟಿತನಕ್ಕೆ ಗಟ್ಟಿಯಾಗಿ ಕೂಗಿ ಹೇಳಲೇ ಬೇಕು ಶಬ್ಬಾಸ್ ಎಂದು.
   ನಾವ್ ಏನ ಮಾಡೋನ್ರಿ, ಈಗಿನ್ ಸಿಲಿಂಡರ ತಗೋಳಾಕ್ ನಮ್ಮ ಹತ್ರ ದುಡ್ಡಿಲ್ಲ. ತುತ್ತು ಅನ್ನ ತಿನ್ನಬೇಕಂದ್ರೆ ದಿನನಿತ್ಯ ಕಟ್ಟಿಗೆ ಹೊರಲೇ ಬೇಕು. ಇದನ್ನ ಮಾಡದೇ ಹೋದ್ರ ಹೊಟ್ಟೆಗೆ ತಣ್ಣಿರ ಬಟ್ಟೆನೆಗತಿ. ಇನ್ನ ಸರಕಾರ ನಮ್ಗ ಚುಮಣಿ ಎಣ್ಣೆ ಬಂದ್ ಮಾಡಿದೆ. ಹೀಂಗಾದ್ರ ನಮ್ಮ ಜೀವನ ಹೇಂಗ್ ನಡೆಸೋದು ಎಂದು ಮಲ್ಲವ್ವ ತನ್ನ ಅಳಲನ್ನು ತೊಡಿಕೊಂಡಳು.
  ಅಷ್ಟೂ ದೂರ ಹೋಗಿ, ತ್ರಾಸಪಟ್ಟು ತಂದರು ಒಂದು ಹೋರೆಗೆ ಸಿಗುವುದು ಕೇವಲ್ 30-40 ರೂ.ಗಳು ಮಾತ್ರ. ಇನ್ನೂ ಕೆಲವೊಂದಿಷ್ಟು ಸಾರಿ ಆ ಕಟ್ಟಿಗಳು ಮಾರದೇ ಹೋದ್ರೆ ಅವರು ಪಟ್ಟ ಶ್ರಮ ಹೋಳೆಯಲ್ಲಿ ಹುಣಸೆ ಹಣ್ಣು ತೋಳೆದ ಹಾಗೆ ಆಗುತ್ತೆ. ಇದರ ಜತೆ ಅವರ ಮನೆಯ ಒಲೆಗೂ ಇದೇ ಕಟ್ಟಿಯನ್ನು ಒಳಸುತ್ತಾರೆ. ಈ ದೃಶ ನೋಡಿದಾಕ್ಷಣ ನಮ್ಮ ಊರು ನನ್ಗೆ ನೆನಪಾಯಿತು. ನಮ್ಮ ಅವ್ವ ಕೂಡಾ ಕಟ್ಟಿಗೆ ತರಲು ಗುಡ್ಡಕ್ಕೆ ಹೋಗುತ್ತಿದದ್ದು ನೆನೆದು ಜೀವ ಹಿಂಡಿದಾಂತಾಯಿತು. ಇವರ ಈ ಕಾಯಕಕ್ಕೆ ಬೆಲೆ ಸಿಗುವುದು ಯಾವಾಗ? ಇವರ ಬದುಕು ಹಸನಾಗುವುದು ಯಾವಾಗ? ಎಂಬುದು ನಮ್ಮೆಲ್ಲರ ಪ್ರಶ್ನೆ.



No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...