Thursday, 7 March 2024

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

 ಮಂಜುನಾಥ ಗದಗಿನ

--
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು ಎಂದರೆ ಇಂದಿನ ದಿನಮಾನಗಳಲ್ಲಿ ತಪಸ್ಸು ಮಾಡಬೇಕು. ಆದರೆ, ಇಲ್ಲೊಬ್ಬರು ತಮ್ಮ ದೈಹಿಕ ನ್ಯೂನತೆಯ ನಡುವೆಯೂ ಆರು ಸರ್ಕಾರಿ ನೌಕರರಿಗೆ ಆಯ್ಕೆಯಾಗಿ ಎಲ್ಲರಿಗೂ ಮಾದರಿ ಆಗಿದ್ದಾರೆ.
ಹೌದು, ಅಥಣಿ ತಾಲ್ಲೂಕಿನ ಕೊಡಗಾನೂರು ಗ್ರಾಮದ ಪದ್ಮಾವತಿ ಹರಗೆ ಆ ಸಾಧಕಿ. ಎಲ್ಲವೂ ಇದ್ದು ಏನು ಇಲ್ಲದವರಂತೆ ಕಾಲ ಕಳೆಯುವ ಜನರ ಮಧ್ಯೆ ಇಂತಹ ಸಾಧಕರು ಇರುವುದು ಹೆಮ್ಮೆಯ ಸಂಗತಿ.
ಬಡತನದಲ್ಲೇ ಆರು ನೌಕರಿ:
ಪದ್ಮಾವತಿ ಅವರದ್ದು ತೀರಾ ಬಡತನದಿಂದ ಬಂದ ಕುಟುಂಬ. ಇವರ ತಂದೆ ತಾಯಿ ಕೂಲಿ ಮಾಡಿ ಮಕ್ಕಳನ್ನು ಸಾಕಿ ಸಲಹಿದ್ದಾರೆ. ಪದ್ಮಾವತಿ ಅವರಿಗೆ ಐವರು ಅಕ್ಕ-ತಂಗಿಯರು, ತಮ್ಮ ಇದ್ದಾನೆ. ಇವರೆಲ್ಲರಿಗೂ ಕೂಲಿ ಮಾಡಿಯೇ ಶಿಕ್ಷಣ ಕೊಡಿಸಿದ್ದಾರೆ ಪದ್ಮಾವತಿ ಪಾಲಕರು. ಪದ್ಮಾವತಿ ಅವರು ಐದು ವರ್ಷದವರು ಇದ್ದಾಗ ಇವರಿಗೆ ಪೋಲಿಯೋ ತಗುಲಿತು. ಇದರಿಂದ ವಿಚಲಿತರಾದ ಪದ್ಮಾವತಿ ಪಾಲಕರು ದೇವರನ್ನು ಶಪಿಸುತ್ತಾ ಕುಳಿತುಕೊಂಡರು. ಆದರೆ, ಪದ್ಮಾವತಿ ಶಾಲೆಯಲ್ಲಿ ಜಾಣೆ ಆಗಿದ್ದಾಳೆ ಮಗಳಿಗೆ ಶಿಕ್ಷಣ ಕೊಡಿ ಅವಳು ಮುಂದೆ ಇತರರಿಗೆ ಮಾದರಿ ಆಗುತ್ತಾ ಎಂದು ಜನರು ಅವರಿಗೆ ತಿಳಿ ಹೇಳಿದರು. ಹೀಗಾಗಿ ಪದ್ಮಾವತಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾದರು. ಪದ್ಮಾವತಿ ಹರಗೆ ಕೂಡ ತನ್ನ ನ್ಯೂನ್ಯತೆಯನ್ನೇ ಶಕ್ತಿಯನ್ನಾಗಿಸಿಕೊಂಡು ಮುನ್ನಡೆದಳು. ಹೀಗಾಗಿ ಡಿಎಡ್ ಶಿಕ್ಷಣಪಡೆದುಕೊಂಡರು.
ಆರು ಸರ್ಕಾರಿ ನೌಕರಿ ಪಡೆದು ಮಾದರಿ:
ಈಗಿನ ಒಂದು ಕಾಲದಲ್ಲಿ ಸರ್ಕಾರಿ ನೌಕರರು ಕಷ್ಟಸಾಧ್ಯವಾಗಿರುವಾಗ ಪದ್ಮಾವತಿ ಅವರು ತಮ್ಮ ಕಠಿಣ ಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆರು ಸರ್ಕಾರಿ ನೌಕರಿ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. 2017ರಲ್ಲೇ ಪ್ರಥಮ ದರ್ಜೆ ಸಹಾಯಕ(ಎಸ್‌ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ(ಎಫ್‌ಡಿಎ)ಗೆ ಆಯ್ಕೆ, 2018ರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಾಗೂ ಸೆಕ್ರೆಟ್ರಿ ಗ್ರೇಡ್-1 ಅಧಿಕಾರಿ, 2019ರಲ್ಲಿ ಹಾಸ್ಟೆಲ್ ವಾರ್ಡ್‌ನ, ಸುಪರ್ ಇಂಡೆಂಟ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಆದರೆ, ಇವರು PDO ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಕೆಇಎಸ್ ಮೇನ್ಸ್ ಆಯ್ಕೆ:
ಕರ್ನಾಟಕ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಒಂದಾದ ಕೆಎಎಸ್ ಪರೀಕ್ಷೆ 2017ರಲ್ಲಿ ಇವರು ಬರೆದಿದ್ದಾರೆ. ಮೊದಲ ಪ್ರಯತ್ನದಲ್ಲೇ ಇವರು ಕೆಎಸ್‌ಎಸ್‌ ಮೇನ್ಸ್‌ ಪರೀಕ್ಷೆಗೂ ಆಯ್ಕೆ ಆಗಿದ್ದರು. ಆದರೆ, ಕೆಲವೇ ಅಂಕಗಳಲ್ಲಿ ಅನುತೀರ್ಣ ಆದರು.
ಸಮಯ ಪಾಲನೆ ಮುಖ್ಯ:
ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಒಂದು ಸರ್ಕಾರಿ ನೌಕರರು ಪಡೆಯುವುದು ಕಷ್ಟಕರವಾದ ಇಂದಿನ ದಿನಮಾನಗಳಲ್ಲಿ ಇವರು ದೈಹಿಕ ನ್ಯೂನ್ಯತೆಯ ನಡುವೆ ಆರು ನೌಕರರು ಪಡೆದಿರುವ ಪದ್ಮಾವತಿ ಅವರು ಎಲ್ಲರಿಗೂ ಮಾದರಿ ಪದ್ಮಾವತಿ ಸಮಯ ಪಾಲನೆಗೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಇದಷ್ಟೇ ಅಲ್ಲದೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ ಮೊಬೈಲ್ ಬಳಕೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಸಮಯ ಪಾಲನೆ ಮಾಡಿಕೊಂಡು ಟೈಂ ಟೇಬಲ್ ಹಾಕಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶ್ ಕಂಡಿದ್ದಾರೆ. ( ಪದ್ಮಾವತಿ ಅವರ ಜೊತೆ ಮಾತನಾಡಲು ಕರೆ ಮಾಡಿ . ಮೊ . ನಂ . 9845796774
---
ಕೋಟ್
ನಾನು ಐದನೇ ಆದಾಗಲೇ ನನಗೆ ಪೋಲಿಯೋ ತಗುಲಿತು. ವರ್ಷಗಳು ಕಳೆದಂತೆ ನನಗೆ ಜನರ ಮಧ್ಯೆ ಹೋಗಲು ಮುಜುಗರ ಉಂಟಾಯಿತು. ಆದರೆ, ಇಂತಹ ಸಮಯದಲ್ಲಿ ನಾನು ಕೂಡ ಅಧಿಕಾರಿ ಆಗಬೇಕು. ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು ಎಂದುಕೊಂಡೆ ಇದೇ ಛಲದಲ್ಲೇ ಓದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸತತ ಪ್ರಯತ್ನ ಮಾಡಿದೆ. ಇದರ ಫಲವಾಗಿ ನಾನು ಇಂದು ಸರ್ಕಾರಿ ನೌಕರಳಾಗಿದ್ದೇನೆ.
-ಪದ್ಮಾವತಿ ಹರಗೆ. ವಿಕಲಚೇತನ ಸಾಧಕಿ.

Saturday, 29 July 2023

ಜಂತಿ ಮನೆ ಮತ್ತು ಮಳೆ-೧


ಮಳೆಗಾಲ ಬರೈತಿ ಅನ್ನೋ ತಿಂಗ್ಲ ಮುಂಚಿತವಾಗಿಯೇ ಜಂತಿ ಮನೆ ರಿಪೇರಿ ಕಾಮಗಾರಿ ಚಾಲೋ ಆಗತಿತ್ತ. ಯಾಕಂದ್ರ ನೆಮ್ಮದಿಯಿಂದ ಮಳೆಗಾಲ ಮುಗಿಸಬೇಕಲ್ಲ ಅದ್ಕ. ಮಳೆ ಆರಂಭಕ್ಕೂ ಮುನ್ನ ಜಂತಿ ಮನಿ ಮಾಳಿಗಿಗೆ ಮಣ್ಣ ಹಾಕಿ ಮನೆಯನ್ನ ಸದೃಢವನ್ನಾಗಿಸುವುದು ಮೊದಲ ಕಾರ್ಯ. ಹೀಗಾಗಿ ಅಪ್ಪ ಮಟ್ಟಿ ಮಣ್ಣು ಅಥವಾ ಹೆಂಟಿ ಮಣ್ಣು ಹಾಕಿಸಲು ಆಡರ್ರ್ ಕೊಡ್ತಾ ಇದ್ದ. ಅದು ಒಂದು ಎತ್ತಿ ಬಂಡಿ ಎಷ್ಟು ಮಣ್ಣು. ಈ ಮಣ್ಷು ಹಾಕಿಸಲು ಅದೇಷ್ಟೋ ಬಾರೀ ಚೌಕಾಸಿ ಬೇರೆ. ಕೊನೆಗೆ ೧೦, ೨೦ ರುಪಾಯಿ ಕಡಿಮೆ ಮಾಡಿ ಮನೆಯ ಅಂಗಳಕ್ಕೆ ಮಣ್ಣು ಬಿದ್ದಿರುತಿತ್ತು. 

ಹೀಗೆ ಬಿದ್ದ ಮಣ್ಣಮ್ನ ಜಂತಿ ಮನಿಯ ಮಾಳಿಗೆ ಕಾಣಿಸುವುದೇ ಹರ ಸಾಹಸವಾಗಿತ್ತು. ಯಾಕಂದ್ರೆ ನಮ್ಮ ಮನೆಗೆ ಮಾಳಿಗೆಗೆ ಹೋಗಲು ಮೆಟ್ಟಿಲು ಇರಲಿಲ್ಲ. ಇದರ ಬದಲಾಗಿ ಏಣಿ ಸಹಾಯದಿಂದ ಮಾಳಿಗೆಗೆ ಮಣ್ಣು ಹಾಕುವ ಕಾರ್ಯ ಮಾಡಬೇಕಾಗಿತ್ತು. ಅದೊಂದು ವರ್ಷ ನಾನು, ಅವ್ವ, ಅಪ್ಪ ಮೂವರೇ ಮಾಳಿಗೆಗೆ ಮಣ್ಣು ಹಾಕುತಿದ್ದೇವು. ಏಕಾಏಕಿ ಏಣಿಯ ಹಲ್ಲು ಮುರಿದು ಅಪ್ಪನ ಕಾಲಿಗೆ ಗಾಯವಾಗಿತ್ತು. ಇದಾದ ನಂತರದ ಏಣಿಯ ಕಾಲು ಹಿಡಿದು ಮಾಳಿಗೆಗೆ ಮಣ್ಣು ಹಾಕುತಿದ್ದೇವು. ಇನ್ನು ಕೆಲವು ಸಾರಿ ಓಣಿಯ ಎರಡ್ಮೂರು ಜನರನ್ಮು ಕರೆದು ಮಾಳಿಗಿಗೆ ಮಣ್ಣು ಹಾಕುತಿದ್ದೇವು.

ಮಾಳಿಗೆ ಮಣ್ಣು ಕಂಡರೆ ಮುಗಿತು ಎನ್ನುವಂತಿಲ್ಲ. ಅದರ ಅಸಲಿಯತ್ತು ನಂತರ ತಿಳಿತಾಯಿತ್ತು. ಯಾಕಂದ್ರ ಹಾಕಿದ ಮಣ್ಣು ಸರಿ ಇದ್ರ ಮಾಳಗಿ ಗಟ್ಟಿ ಆಗ್ತಾ ಇತ್ತು. ಇಲ್ಲಂದ್ರ ಮಾಳಿಗಿ ತುಂಬ ಕಾಂಗ್ರೆಸ ಕಸ ಬೆಳೆದು ಅದನ್ನು ಕೀಳುವುದೇ ಕಾಯಕವಾಗಿ ಬಿಡುತಿತ್ತು. ಒಂದು ವೇಳೆ ಮಣ್ಣು ಸರಿ ಇಲ್ಲದೇ ಮಾಳಿಗೆ ಮೇಲೆ ಕಸ ಬೆಳೆದರೆ ಆ ವರ್ಷದ ಮಳೆಗಾಲ ಆ ದೇವರಿಗೆ ಪ್ರೀತಿ ಅನ್ನುವಂತಾಗುತಿತ್ತು. ಯಾಕಂದ್ರೆ, ಕಸ ಕಿತ್ತು ವಾರದಲ್ಲೇ ಮತ್ತೆ ಕಸ ಬೆಳೆಯಲು ಆರಂಭಿಸುತಿತ್ತು. ಹೀಗೆ ಕಸ ಕಿತ್ತು ಕಿತ್ತು ಮಾಳಿಗೆ ಸಡಿಲಗೊಂಡು ಮಳೆಯಾದರೆ ಮನೆಯಲ್ಲ ಸೂರಿ ಜೀವನ ನರಕವಾಗಿ ಬಿಡುತಿತ್ತು. ಮಾಳಿಗೆ ಹತ್ತಿ ಆ ಮಣ್ಣನ್ನು ಕಾಲಿಲೇ ತುಳಿದು ಭದ್ರ ಮಾಡುವುದರಲ್ಲೇ ಕಣ್ಣಿರೇ ಮಳೆಯಾಗಿ ಸುರಿದು ಬಿಡುತಿದ್ದವು..

ಮಳೆಗಾಲ ಆರಂಭವಾದೊಡನೆ ಮನೆಗೆ ಗೋಡೆ, ಜಂತಿಗಳು ಕಣ್ಣೀರು ಸುರಿಸಲು ಆರಂಭ ಮಾಡುತಿದ್ದವು.....


-ಮಂಜುನಾಥ ಗದಗಿನ

ಮುಂದುವರೆಯುವುದು...

Tuesday, 11 July 2023

ಜಂತಿಮನೆ ಮತ್ತು ಇಲಿ...



ಗಾಗ ಉದುರಿ ಬೀಳುವ ಮಣ್ಣಿನ ನಡುವೆ ಬದುಕು ಸಾಗಿವುದು ಅದೇಷ್ಟು ಕಷ್ಟ. ಆದರೆ, ಹಳ್ಳಿಗರಿಗೆ ಇದೇ ಜೀವನ. ಯಾಕಂದರೆ ಹಳ್ಳಿಗಳಲ್ಲಿ ಈಗಲೂ ಬಹುತೇಕ ನಾವುಗಳು ಜಂತಿಮನೆಗಳನ್ನೇ ಕಾಣುತ್ತಿವೆ. ಇವುಗಳಿಗೆ ಜಂತಿಮನೆಗಳು ಎಂದರೆ ಕರೆಯಲು ಕಾರಣವು ಇದೆ. ಇವುಗಳನ್ನು ನಮ್ಮ ಹಿರಿಕರು ಜಂತಿ ಕಟ್ಟಿಗೆಯಿಂದ ಮನೆಗಳನ್ನು ಕಟ್ಟುತ್ತಿದ್ದರು. ಈ ಜಂತಿ ಕಟ್ಟಿಗೆಯಲ್ಲೇ ಮನೆಗಳನ್ನು ಕಟ್ಟಲು ಒಂದು ಸಕಾರಣವೂ ಇತ್ತು. ಜಂತಿ ಕಟ್ಟಿಗೆಗಳಿಗೆ ಹುಳು ಹಿಡಿಯುವುದಿಲ್ಲ. ಹೀಗಾಗಿ ಅವುಗಳು ಹೆಚ್ಚುಕಾಲ ಬಾಳಿಕೆ ಬರುತ್ತವೆ ಎಂಬ ಒಂದು ವೈಜ್ಞಾನಿಕ ಕಾರಣಗಳನ್ನು ಹಿನ್ನೆಲೆಯಲ್ಲೇ ನಮ್ಮ ಹಿರಿಯರು ಮನೆಗಳನ್ನು ಕಟ್ಟುವಾಗ ಈ ಜಂತಿ ಕಟ್ಟಿಗೆಗಳನ್ನು ಬಳಕೆ ಮಾಡಿದ್ದಾರೆ. ಹೀಗಾಗಿ ನಾವುಗಳು ಇಂದು ಈ ಮನೆಗಳನ್ನು ಜಂತಿ ಮನೆಗಳನು ಎಂದು ಕರೆಯುತ್ತಿವೆ. 

ಜಂತಿಮನೆಗಳಿಗೆ ಜಂತಿಕಟ್ಟಿಗೆ ಒಂದಿಷ್ಟು ಗಿಡದ ತಪ್ಪಲು ಹಾಕಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಹೀಗೆ ನಿರ್ಮಾಣ ಮಾಡಿದ ಮನೆಗಳು ನೂರಾರು ವರ್ಷಗಳು ಕಳೆದರೂ ಹಾಗೇ ಇವೆ. ಅದೇಷ್ಟೋ ತಲೆಮಾರುಗಳಿಗೆ ಆಶ್ರಯಗಳನ್ನು ನೀಡಿವೆ. ಆದರೆ, ಈ ಜಂತಿಮನೆಗಳಲ್ಲಿ ವಾಸ ಮಾಡುವುದೇ ಒಂದು ರಣರೋಚಕ.

ಹೌದು, ಜಂತಿಮನೆಗಳು ಮನುಷ್ಯರಿಗೆ ಮಾತ್ರ ಆಶ್ರಯ ನೀಡುತಿರಲಿಲ್ಲ. ಮೇಲಿನ ಜಂತಿಯಲ್ಲಿ ಹಾವು, ಹೆಗ್ಗಣ್ಣ, ಚೇಳು, ಇಲಿ ಹೀಗೆ ಅನೇಕ ಪ್ರಾಣಿಗಳಿಗೂ ಪಾಲಕನಾಗಿತ್ತು ಜಂತಿಮನೆ. ಹೀಗಾಗಿ ಈ ಮನೆಗಳಲ್ಲಿ ವಾಸ ಮಾಡಿದವರು ಗಟ್ಟಿಗರೇ ಸೈ. ನಾನು ಕೂಡಾ ಜಂತಿಮನೆಯಲ್ಲೇ ಹುಟ್ಟಿ ಬೆಳೆದವ. ರಾತ್ರಿ ಆಯಿತು ಎಂದರೆ ಸಾಕು ಮನೆಯ ಮೇಲಿಂದ ಅದೇನೋ ಒಂದು ತರಹ ಸದ್ದು ಸದಾ ಕೇಳಿಬರುತಿತ್ತು. ಅದೇಷ್ಟೇ ಪ್ರಯತ್ನ ಮಾಡಿದರೂ ಆ ಸದ್ದಿನ ದಾರಿ ಕಂಡು ಹಿಡಿಯಲು ಅಸಾಧ್ಯವಾಗಿತ್ತು. ಒಂದು ಸಾರಿ ಈ ಕಡೆ ಕೇಳಿದರೆ ಮತ್ತೊಂದು ಸಾರಿ ಆ ಕಡೆ ಕೇಳಿ ಬರುತ್ತಿತ್ತು. ಹೀಗಾಗಿ ನಾನು ಆಗ ಚಿಕ್ಕವನಿಂದ ಕಾರಣಕ್ಕೆ ಇದು ದೆವ್ವದ ಇರಬಹುದು ಎಂದು ಭಾವಿ ಅರ್ಧ ಹೊದ್ದ ಚಾದರನ್ನು ಪೂರ್ಣ ಹೊದ್ದು ಮಲಗಿದ ರಾತ್ರಿಗಳಿಗೆ ಲೆಕ್ಕವೇ ಇಲ್ಲ. ಇದಕ್ಕೆ ಕಾರಣವೂ ಇತ್ತು. ನಮ್ಮ ಮನೆಯ ಹಿಂದೆ ಒಂದು ದೊಡ್ಡದಾದ ಹುಣಸೆ ಮರ ಇದೆ. ಆ ಮರದಲ್ಲಿ ದೆವ್ವಗಳು ಕುಳಿತುಕೊಂಡಿರುತ್ತವೆ ಎಂಬ ಮಾತು ಆಗಾಗ ಕೇಳಿ ಬರುತ್ತಿದ್ದವು. ನಾನು ಕೂಡಾ ಅದೇ ದೆವ್ವಗಳು ಬಂದು ನಮ್ಮ ಮನೆಯ ಮೇಲೆ ಓಡಾಡುತ್ತವೆ ಎಂದು ಭಾವಿಸಿದ್ದೆ. ಆದರೆ, ಅದೊಂದು ದಿನ ಅಪ್ಪ ಇಲಿ ಹಿಡಿಯುವ ಯಂತ್ರ ತಂದು ಅದರಲ್ಲಿ ಒಂದು ಫೀಸ್ ಬಜ್ಜೆಯನ್ನು ಹಾಕಿ ಜಂತಿಯ ಮೇಲೆ ಇಟ್ಟು ಮಲಗಿದ. ನಾನು ಯಾಕೆಂದು ಕೇಳಿದ್ದಕ್ಕೆ ನಾಳೆ ಗೊತ್ತಾಗುತ್ತದೆ ಎಂದು ಸುಮ್ಮನಾಗಿಸಿದ. ಆದರೆ, ಮರುದಿನ ಬೆಳಗಾಗುವಷ್ಟರಲ್ಲಿ ಅಪ್ಪ ಆ ಇಲಿ ಹಿಡಿಯುವ ಯಂತ್ರವನ್ನು ಹೊರಗೆ ತೆಗೆದಾಗ ಅದಲ್ಲಿ ಬರೋಬ್ಬರಿ ನಾಲ್ಕು ಇಲಿಗಳು ಒಂದೇ ಚಾಳಿಗೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದವು. ಅದು ಆ ಬಜ್ಜಿ ಆಸೆಗಾಗಿ ಎಂಬ ವಿಷಯ ಬೇರೆ. ಆದರೆ, ಅಪ್ಪ ಆಗಾ ಹೇಳಿದ ರಾತ್ರಿ ಈ ಇಲಿಗಳೇ ರಾತ್ರಿಯಲ್ಲ ಸದ್ದು ಮಾಡಿ ನಿದ್ದೆ ಹಾಳು ಮಾಡುತ್ತಿದ್ದವು ಎಂದು. ನಾನು ಅರೇಕ್ಷಣ ನಿಟ್ಟುಸಿರು ಬಿಟ್ಟು ದೆವ್ವ ಎಂಬ ಭ್ರಮೆಯಿಂದ ಹೊರ ಬಂದು ನೆಮ್ಮದಿಯಿಂದ ನಿದ್ದೆ ಮಾಡಲು ಆರಂಭಿಸಿದೆ. 

-ಮಂಜುನಾಥ ಗದಗಿನ.

ಮುಂದುವರೆಯುವುದು....

(ಜಂತಿಮನೆ ಮತ್ತು ಮಳೆ)

Tuesday, 16 August 2022

ಶಿಕ್ಷಣಕ್ಕೆ ವಿದಾಯ ಹೇಳಿದ್ದೆ...

 ಬಡತನಕ್ಕೆ ಮೂರು ಬಾರಿ ಶಿಕ್ಷಣ ನಿಲ್ಲಿಸಿದ್ದೆ > ಮತ್ತೆ ಮೇಲೆದ್ದು ಬಂದೆ



ಸದಾ ಸಿಂಡರಿಸಿಕೊಂಡುತ್ತಿದ್ದ ಅಪ್ಪನನ್ನು ಏನು ಕೇಳುವುದು ಎಂಬ ಮನೋಭಾವಕ್ಕಿಂತ ದುಡಿದ ದುಡ್ಡು ಬದುಕಿಗೆ ಸಾಕಾಗುತ್ತಿಲ್ಲ ಎಂಬ ಬಡತನವೇ ನನ್ನ ಬಾಲ್ಯದ ಅದೇಷ್ಟೋ ಕನಸು, ಆಸೆಗಳನ್ನ ಕಿತ್ತುಕೊಂಡು ಬಿಟ್ಟಿತ್ತು. ಈ ಬಡತನ ನನ್ನ ಶಿಕ್ಷಣವನ್ನೇ ಕಸಿದುಕೊಂಡು ದುಡಿಮೆಗೆ ಹಚ್ಚಿದ್ದು ನೆನೆಸಿಕೊಂಡರೇ ಭಯವಾಗುತ್ತದೆ. “ಸಾಲಿ ಕಲ್ತ ಏನ ಮಾಡ್ತಿ ಮಗ್ಗಾ ನೇಯ್ಯಾಕ ಹೋಗ ಇನ್ನ’ ಎಂಬ ಅಪ್ಪನ ಆ ಮಾತುಗಳು ನನ್ನಲ್ಲಿ ಇನ್ನು ಮಾರ್ದನಿಸುತ್ತಿವೆ. ಹೀಗೆ ಅಪ್ಪನ ಹಠಕ್ಕೆ ಶಿಕ್ಷಣಕ್ಕೆ ವಿದಾಯ ಹೇಳಿ ಮಗ್ಗ ನೇಯಲೂ ಆರಂಭಿಸಿದೆ. 

“ಒಬ್ಬ ಮಗಾ ಅದಾನ ಅವನರ ಚಲೋತಂಗ ಸಾಲಿ ಕಲ್ಸಬಾರದಾ’ ಎಂಬ ಜನರ ಮಾತು ಅಪ್ಪನಿಗೆ ನಾಟಿದ್ದವು ಅನ್ಸುತ್ತೆ. ಮತ್ತೆ ಶಾಲೆಗೆ ಕಳುಹಿಸಲು ಅಣಿಯಾದ. ಆದರೆ, ಅದಾಗಲೇ ಒಂದು ವರ್ಷದ ನನ್ನ ಶಿಕ್ಷಣ ಇತಿಹಾಸದ ಗರ್ಭ ಸೇರಿ ಆಗಿತ್ತು. ಮತ್ತೆ ಶಾಲೆಗೆ ಹೋಗಲು ಮನಸು ಚಡಪಡಿಸುತ್ತಿತ್ತು. ಮತ್ತೆ ಶಾಲೆ ಆರಂಭವಾಯಿತು. ಮತ್ತದೇ ಕಾಯಿಪಲ್ಲೆ ತರುವ ಚೀಲ, ಪಾಠಿ ಜೊತೆಯಾಗಿ ಹೆಜ್ಜೆ ಹಾಕಿದವು. ಅದಾಗಲೇ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಹೆಜ್ಜೆ ಇಟ್ಟಿದ್ದೆ. ಆಗ ಗೊತ್ತಾಗಿದ್ದು ಓಡುವ ಕಾಲದ ಎದುರು ನಾವೇಷ್ಟು ಸಣ್ಣವರು ಎಂದು. ನೂರೆಂಟು ವಿಚಾರ, ಚಿಂತೆ, ವೈದ್ಯರ ಮಾತಿನ ನಿರ್ಲಕ್ಷ್ಯ ಮಾಡಿದ್ದರಿಂದ ಅಪ್ಪನಿಗೆ ಪಾರ್ಶ್ವವಾಯು ಹೊಡೆಯಿತು. ಆಗ ನಾನು ಏಂಟನೇ ತರಗತಿ ಪ್ರವೇಶ ಪಡೆದುಕೊಂಡಿದ್ದೇ ಅಷ್ಟೇ. ಅಪ್ಪನಿಗೆ ಹೀಗಾಗಿದ್ದರಿಂದ ನಾನು ಒಬ್ಬನೇ ಮಗ. ಮನೆಯ ಜವಾಬ್ದಾರಿ ನನ್ನ ಮೇಲೆ ಬಿತ್ತು. ಮತ್ತೆ ಶಿಕ್ಷಣಕ್ಕೆ ವಿದಾಯ ಹೇಳಿ ಮನೆಯ ನೊಗ ಹೊರಬೇಕು ಎಂದು ನಿರ್ಧರಿಸಿದೆ. ಹೀಗಾಗಿ ಒಂದೆರೆಡು ತಿಂಗಳು ಶಾಲೆಯನ್ನು ಬಿಟ್ಟು ಮಗ್ಗದ ಕಡೆ ಮುಖ ಮಾಡಿದೆ. ಆದರೆ, ಅಕ್ಕ “ನಾನು ನೇಯುತ್ತೇನೆ ನೀನು ಶಾಲೆಗೆ ಹೋಗು’ ಎಂದು ಹೇಳಿದ್ಲು. ಮನಸ್ಸು ಸುತಾರಾಮ ಒಪ್ಪಲಿಲ್ಲ. ಆದರೆ, ಓದಬೇಕು ಎಂಬ ಆಸೆ ಮತ್ತೆ ಶಾಲೆ ಕಡೆಗೆ ಕರೆದುಕೊಂಡು ಹೋಯಿತು. ಬೆಳಿಗ್ಗೆ ಬೇಗ ಎದ್ದು ಮಗ್ಗ ನೇಯ್ದು ಮತ್ತೆ ಶಾಲೆಗೆ ಹೋಗುತ್ತಿದೆ. ಮತ್ತೆ ಶಾಲೆಯಿಂದ ಬಂದ ಮೇಲೆ ನೇಯುತ್ತಿದೆ. ಹಾಗೋ ಹೀಗೋ ಮಾಡಿ ಪ್ರೌಢ ಶಿಕ್ಷಣ ಮುಗಿಸುವ ಹಂತಕ್ಕೆ ಬಂದು ನಿಂತೆ. ಆಗ ಅಕ್ಕನ ಮದುವೆ ಕೂಡಾ ಆಗಿ ಹೋಯಿತು. ಇದೀಗ ನಾನು, ಪಾರ್ಶ್ವವಾಯು ಪೀಡಿತ ಅಪ್ಪ, ಮತ್ತ ಅವ್ವ್ಪ ಅಷ್ಟೇ ಬದುಕಾಯಿತು. 

       ಪ್ರಾಪಂಚಿಕ ಜ್ಞಾನವಿಲ್ಲದ ಅವ್ವ, ಮಾತು ಬಾರದ ಅಪ್ಪ. ನಾನು ಹೇಗೆ ಕಾಲೇಜಿಗೆ ಹೋಗಲಿ ಎಂದು ಮನಸ್ಸು ಚಿಂತಿಸಲು ಆರಂಭಿಸಿತು. ಮತ್ತೆ ಶಿಕ್ಷಣಕ್ಕೆ ವಿದಾಯ ಹೇಳಬೇಕು ಎಂದುಕೊಂಡು ಸಂಪೂರ್ಣವಾಗಿ ಮಗ್ಗದ ಕಡೆ ವಾಲಿದೆ. ಆದರೆ, ಕೆಲವು ಜನರ ಮಾತು ಮತ್ತೆ ಮನಸ್ಸು ಬದಲಿಸಿತು. ಖಾಸಗಿ ಕಾಲೇಜಿಗೆ ದುಡ್ಡು ಕಟ್ಟಲು ಆಗದ ಕಾರಣ ಆಗ ತಾನೇ ಊರಿನಲ್ಲಿ ಸ್ಥಾಪನೆಯಾಗಿದ್ದ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದುಕೊಂಡೆ. ಆಗ ಕಾಲೇಜಿನಲ್ಲಿ ಶಿಕ್ಷಕರು ಇಬ್ಬರೇ, ಅವರು ಎರವಲು ಬೇರೆ. ಊರಿಂದ ಬಂದು ವಾರದಲ್ಲಿ ಎರಡು ಸಾರಿ ಪಾಠ ಮಾಡುತ್ತಿದ್ದರು. ಕಾಲೇಜು ಹಂತದಲ್ಲಿಯೂ ಅದೇ ಮಗ್ಗ ಮತ್ತು ಪಾಠವೇ ನನ್ನ ಬದುಕಾಗಿತ್ತು. ಆಟಕ್ಕೆ ವಿದಾಯ ಹೇಳಿ ಅದೇಷ್ಟೋ ವರ್ಷಗಳೆ ಗತಿಸಿ ಹೋಗಿದ್ದವು. ನಿರೀಕ್ಷೆಗಳು ಹೆಚ್ಚಾದಂತೆ ಪರೀಕ್ಷೆಗಳು ಹೆಚ್ಚಾಗುತ್ತವೆ ಎಂಬುವುದನ್ನು ಅರಿತುಕೊಂಡೆ. ಅದಕ್ಕೆ ಬದುಕಿನಲ್ಲಿ ಹೆಚ್ಚು ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡು ಪರೀಕ್ಷೆಗಳನ್ನು ಪಾಸು ಮಾಡುತ್ತಾ ಸಾಗಿದೆ. ಓದಿದೆ. ಇದೇ ಕಾರಣಕ್ಕೆ ಕಾಲೇಜಿಗೆ ಪ್ರಥಮ ಬಂದೆ. ಆಗ ಪೇಪರ್‌ನಲ್ಲಿ ಪೋಟೋ ಬಂದದ್ದು ನೋಡಿ, ಅಪ್ಪ, ಅವ್ವ ಸಂತಸಕೊಂಡರು.

ಮುಂದೆ....ನಡೆದದ್ದು ಬದುಕು ಕಟ್ಟಿಕೊಳ್ಳುವ ದೊಡ್ಡ ಹೋರಾಟ. ಅಪ್ಪ-ಅವ್ವನನ್ನು ಬಿಟ್ಟು ದೂರದ ಹುಬ್ಬಳಿಯತ್ತ ಪಯಣ.....

ನಿರೀಕ್ಷಿಸಿ......!                                        -ಮಂಜುನಾಥ ಗದಗಿನ


Sunday, 14 August 2022

ಹೋರಾಟಗಾರಲ್ಲಿ ಜಾಗೃತಿ ಮೂಡಿಸಿದ ನಾಟಕ ಕಂಪನಿ

ಮಹಾದೇವಪ್ಪ ಪಟ್ಟಣ ಸ್ಥಾಪಿಸಿದ್ದ ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ



-ಮಂಜುನಾಥ ಗದಗಿನ
ಸ್ವಾತಂತ್ರ್ಯ ಹೋರಾಟ ತೀವ್ರಗತಿಯಲ್ಲಿ ಸಾಗಿದ್ದ ಸಮಯ. ಈ ವೇಳೆ ಬ್ರಿಟಿಷರು ಹೆಚ್ಚಿಸಿದ್ದ ಕಂದಾಯಕ್ಕಿಂತ ಜನರ ಮೇಲೆ ಹೆಚ್ಚಿನ ಕಂದಾಯ ಹೇರಿದ್ದ ಸಂಸ್ಥಾನಿಕರ ವಿರುದ್ಧ ಜನರನ್ನು ಒಗ್ಗೂಡಿಸಿ ಬ್ರಿಟಿಷರಿಗೆ ಪರೋಕ್ಷವಾಗಿ ನಡುಕ ಹುಟ್ಟಿಸಲು ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ಸ್ಥಾಪನೆ ಮಾಡಿ ಜನರ ಮನಪರಿವರ್ತನೆ ಮಾಡಿ ಜನರಿಗೆ ಮನರಂಜನೆಯ ಜತೆಗೆ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿದ್ದು ರಾಮದುರ್ಗದ ಮಹಾದೇವಪ್ಪ ಪಟ್ಟಣ.
ಮಹಾದೇವಪ್ಪ ಪಟ್ಟಣನವರು ಬಾಯಿಯಲ್ಲಿ ಬಂಗಾರ ಚಮಕ ಇಟ್ಟುಕೊಂಡು ಹುಟ್ಟಿದರು. ಮನೆಯಲ್ಲಿ ಸಾಕಷ್ಟು ಆಸ್ತಿ ಇತ್ತು. ಕುಳಿತು ಉಂಡರೂ ಕರಗದಷ್ಟು ಶ್ರೀಮಂತಿಕೆ ಅವರ ಬಳಿ ಇತ್ತು. ಆದರೆ, ಇದ್ಯಾವುದಕ್ಕೂ ಪಟ್ಟಣ ಅವರು ಮಾರು ಹೋಗದೇ ದೇಶಕ್ಕಾಗಿ, ತಮ್ಮ ಜನರಿಗೆ ಒಳಿತಾದರೆ ಸಾಕು ಎಂಬ ಒಂದೇ ಒಂದು ಮನೋಭಾವ ಅಲ್ಲರಲ್ಲಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಶ್ರೀಮಂತಿಕೆ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.
೧೯೩೪ ರಿಂದ ೧೯೩೭ರ ಅವಧಿಯಲ್ಲಿ ತೀವ್ರ ಬರಗಾಲ ತಲೆದೋರಿತ್ತು. ದುಡಿದು ಹೊಟ್ಟೆ ತುಂಬಿಸಿಕೊಳ್ಳುವುದೇ ದುಸ್ತರವಾಗಿತ್ತು. ಇಂತಹ ಸನ್ನಿವೇಶದಲ್ಲಿ ಜನರ ಕಷ್ಟಗಳಿಗೆ ಮುಂದಾಗುವುದು ಬಿಟ್ಟು ಸಂಸ್ಥಾನದ ರಾಜ ಬ್ರಿಟಿಷ್ ಹದ್ದಿಗಿಂತ ಒಂದೂವರೆ ಪಟ್ಟು ಹೆಚ್ಚಿಗೆ ಭೂಕಂದಾಯ ವಸೂಲಿ ಮಾಡುತ್ತಿದ್ದ. ಸಂಸ್ಥಾನಿಕರ ಹಾಗೂ ಜನರ ಹೋರಾಟಕ್ಕೆ ಹಾದಿ ಮಾಡಿಕೊಟ್ಟಿತು.
ಇಂತಹ ಸಂದರ್ಭದಲ್ಲಿ ಸಂಸ್ಥಾನಿಕರ ವಿರುದ್ಧ ಹೋರಾಟ ನಡೆಸಲು ಜನರು ಮುಂದಾದರು. ಈ ವೇಳೆ ಮಹಾದೇವಪ್ಪ ಪಟ್ಟಣ ಅವರು ಮುಂಚೂಣಿಗೆ ಬಂದು ಬಂಡಾಯದ ನಾಯಕತ್ವ ವಹಿಸಿಕೊಂಡರು. ಇದಾದ ನಂತರ ಪಟ್ಟಣ ಅವರು ಸಂಸ್ಥಾನಿಕ ರಾಜನ ಕೆಂಗಣ್ಣಿಗೆ ಗುರಿಯಾದರು. ಈ ವೇಳೆ ಪಟ್ಟಣ ಅವರನ್ನು ರಾಜ ಬಗ್ಗು ಬಡಿಯಲು ನೋಡಿದ. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಮಹಾದೇವಪ್ಪನವರು ನ್ಯಾಯವಾದಿ ಬಿ.ಎನ್.ಮುನವಳ್ಳಿ ಅವರ ಜತೆಗೂಡಿ ಜನಜಾಗೃತಿ ಮಾಡಿದರು.
ಸ್ಫೂರ್ತಿಗಾಗಿ ರಾಜ ಬೀದಿಯಲ್ಲಿ ಕಾಂಗ್ರೆಸ್ ಧ್ವಜ ಕಂಬ ನೆಟ್ಟರು. ಸ್ವಯಂ ಸೇವಕರ ಪಡೆ ಕಟ್ಟಿದರು. ಬಂಡಾಯದಲ್ಲಿ ಪಾಲ್ಗೊಂಡ ಹೋರಾಟಗಾರರ ಖರ್ಚು-ವೆಚ್ಚ ನೋಡಿಕೊಂಡರು. ಇದೇ ವೇಳೆ ಜನರನ್ನು ಒಂದುಗೂಡಿಸಲು ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ರಚಿಸುವ ಮೂಲಕ ಜನರಲ್ಲಿ ಬಂಡಾಯ ಹಾಗೂ ಸ್ವಾತಂತ್ರ್ಯ ಹೋರಾಟ ಬಗ್ಗೆ ಜಾಗೃತಿ ಮೂಡಿಸಿ ಜನರು ಹೋರಾಟಕ್ಕೆ ಕರೆತಂದರು. ಏನಾದರೂ ನಿರ್ಧಾರಗಳನ್ನು ಮಾಡಲು, ಚರ್ಚಿಸಲು ಈ ನಾಟಕ ಕಂಪನಿ ಬಳಸಿಕೊಂಡರು. ನಾಟಕ ನೋಡಲು ಬರುವ ಜನರಿಗೆ ಅರಿವು ಮೂಡಿಸಿದರು.
ಹೋರಾಟದ ಕಾವು ಹೆಚ್ಚಾದಂತೆ ಇವರನ್ನೆಲ್ಲ ಮಟ್ಟ ಹಾಕಲು ರಾಜ ಕೊಲ್ಲಾಪುರದಲ್ಲಿದ್ದ ಬ್ರಿಟಿಷ್ ಪೊಲಿಟಿಕಲ್ ಏಜೆಂಟ್‌ನನ್ನು ಸಂಪರ್ಕಿಸಿ ಸೈನ್ಯ ಕಳುಹಿಸಲು ಕೇಳಿಕೊಂಡ. ಆದರೆ, ಚಳವಳಿ ತೀವ್ರ ಸ್ವರೂಪ ಕಂಡ ಬ್ರಿಟಿಷರು ರಾಜನಿಗೆ ಬುದ್ಧಿವಾದ ಹೇಳಿ ಕಳಹಿಸಿದರು. ಇನ್ನು ಪಟ್ಟಣ ಹಾಗೂ ಮುನವಳ್ಳಿ ಅವರನ್ನು ಕೊಂದರೆ ಬಂಡಾಯ ಶಮನವಾಗುವುದು ಎಂದು ಯೋಚಿಸಿದ್ದ ರಾಜ ಅವರನ್ನು ಕೊಲ್ಲಲು ೧೯೩೯ರಲ್ಲಿ ತೇರ ಬಜಾರದಲ್ಲಿದ್ದ ಕಾಂಗ್ರೆಸ್ ಧ್ವಜ ಸ್ತಂಭ ತೆರವುಗೊಳಿಸಿದ.
ಇದು ಸಂಘರ್ಷಕ್ಕೆ ಕಾರಣವಾಗಿ ಲಾಠಿ ಜಾರ್ಜ್, ಕಲ್ಲು ತೂರಾಟಕ್ಕೆ ಕಾರಣವಾಯಿತು. ಈ ವೇಳೆ ಪರಿಸ್ಥಿತಿ ಗಂಭೀರತೆ ಅರಿತ ಪಟ್ಟಣ ಅವರು ಮನೆಗೆ ಬಂದು ಮನೆಯಲ್ಲಿದ್ದ ಹಣ ತೆಗೆದುಕೊಂಡು ಊರು ಬಿಟ್ಟು ಭೂಗತರಾದರು. ತದನಂತರ ಮುನವಳ್ಳಿ ಅವರ ಬಂಧನವಾಗಿ ಅದು ಹಿಂಸಾಚಾರಕ್ಕೆ ತಿರುಗಿ ಪೊಲೀಸರು, ಹೋರಾಟಗಾರರ ಹತ್ಯೆಯಾಯಿತು. ಈ ಸುದ್ದಿ ತಿಳಿದ ಮಹಾದೇವಪ್ಪ ಪಟ್ಟಣ ಅವರು ನೊಂದುಕೊಂಡರು. ಪಟ್ಟಣ ಅವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ಕೂಡವಾಯಿತು. ಅಲ್ಲದೆ, ಹಿಡಿದು ಕೊಟ್ಟವರಿಗೆ ₹೧೦ ಸಾವಿರ ಕೊಡುವುದಾಗಿ ತಿಳಿಸಲಾಯಿತು. ಇದರಿಂದ ಪಟ್ಟಣ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದರು. ತಮ್ಮ ಸ್ಥಳಗಳನ್ನು ಬದಲಿಸುತ್ತಾ ಅಲೆದಾಡಿದರು. ಇದೇ ವೇಳೆ ಪಟ್ಟಣ ಅವರು ಶರಣಾಗಬೇಕು. ಇಲ್ಲದಿದ್ದರೆ ಅವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಫರ್ಮಾನು ಹೊರಡಿಸಲಾಯಿತು. ಆದರೆ, ಪಟ್ಟಣ ಅವರು ಶರಣಾಗದೇ ಇದ್ದ ಕಾರಣ ಅವರ ೪೦೦ ಎಕರೆ ಜಮೀನನ್ನು ಸಂಸ್ಥಾನಿಕರು ವಶಪಡಿಸಿಕೊಂಡರು. ನಂತರ ದೇಶದ ವಿವಿಧೆಡೆ ಭೂಗತರಾಗಿ ಚಲೇಚಾವ್ ಚಳವಳಿಯಲ್ಲಿ ಪಾಲ್ಗೊಂಡರು.
ಜೈಲು ಸುಟ್ಟು, ಪೊಲೀಸರ ಹತ್ಯೆ ಮಾಡಿದ ಕಾರಣಕ್ಕೆ ಅನೇಕರಿಗೆ ಶಿಕ್ಷೆಯಾಯಿತು. ಈ ವೇಳೆ ಶಿಕ್ಷೆಗೊಳಗಾಗಿದ್ದ ಎಲಿಗಾರ ಬಸಪ್ಪ ನೇಣಿಗೇರುವ ಮುನ್ನ ಕೊನೆಯ ಆಸೆ ಕೇಳಿದಾಗ, ಮಹಾದೇವಪ್ಪ ಹೋರಾಟ ಮುಂದುವರಿಸುತ್ತಾನೆ. ಗುರಿ ಸಾಧಿಸಿ ನಮ್ಮೆಲ್ಲರ ಸಾವಿನ ಸೇಡು ತೀರಿಸಿಕೊಳ್ಳುತ್ತಾನೆ’ ಎಂದು ರಣೋತ್ಸಾಹ ಹೊರಗೆಡವಿದ್ದ. ಅದು ಜನರ ಹೋರಾಟವನ್ನು ಜೀವಂತವಾಗಿ ಇಟ್ಟಿತ್ತು. ಮಹಾತ್ಮ ಗಾಂಧೀಜಿ ಈ ಗಲ್ಲು ಶಿಕ್ಷೆ ರದ್ದುಪಡಿಸಲು ಕೇಳಿದ್ದರು. ರಾಜ ಮನ್ನಿಸಲಿಲ್ಲ. ೧೯೪೬ರಲ್ಲಿ ಮಹಾದೇವಪ್ಪ ಪಟ್ಟಣ ಅವರ ಮೇಲಿದ್ದ ವಾರೆಂಟ್ ಅನ್ನು ಹಿಂಪಡೆಯಲಾಯಿತು. ನಂತರ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಮಹಾದೇವಪ್ಪ ಪಟ್ಟಣವರು ಬಂಡಾಯವೆದ್ದು ಸಂಸ್ಥಾನಿಕರಿಗೆ ಸಿಂಹಸ್ವಪ್ನವಾಗಿ ಪರಿಣಿಮಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇವರ ಕಿಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ನೀಡಿತ್ತು. ಅವರು ಸ್ಥಾಪಿಸಿದ್ದ ನಾಟಕ ಕಂಪನಿ ಕೂಡಾ ಬಂಡಾಯದಲ್ಲಿ ಅನನ್ಯ ಪಾತ್ರ ನಿರ್ವಹಿಸಿತ್ತು.

Saturday, 6 August 2022

 ಕರ ಹೆಚ್ಚಳ ವಿರೋಧಿಸಿ ಹೋರಾಟ | ಜೈಲು ಸುಟ್ಟು, ಎಂಟು ಪೊಲೀಸರ ಹತ್ಯೆ| ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಬಂಡಾಯ


-ಮಂಜುನಾಥ ಗದಗಿನ 
ಜೈಲು ಧ್ವಂಸ ಮಾಡಿ, ಎಂಟು ಜನ ಪೊಲೀಸರನ್ನು ಕೊಚ್ಚಿಕೊಂದರು. ನಂತರ ಪೊಲೀಸರ ಗೋಲಿಬಾರ್‌ಗೆ ನಾಲ್ಕು ಜನ ಹೋರಾಟಗಾರರು ಪ್ರಾಣ ತ್ಯಾಗ ಮಾಡಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ, ಚಳವಳಿಗಾರರಿಗೆ ಹುಮ್ಮಸ್ಸು, ಕಿಚ್ಚು ತುಂಬಿದ್ದು ರಾಮದುರ್ಗ ಸಂಸ್ಥಾನದ ಬಂಡಾಯ. ಈ ಬಂಡಾಯ ನಡೆದದ್ದು ಪ್ರಜಾಸಂಘದ ನೇತೃತ್ವದಲ್ಲಿ ಎನ್ನುವುದು ಸ್ವಾರಸ್ಯಕರ.
ದೇಶದಲ್ಲಿ ಬ್ರಿಟಿಷರು ವಿಧಿಸಿದ ಕರ ನಿರಾಕಣೆ ಸತ್ಯಾಗ್ರಹ ನಂತರ ಸಂಸ್ಥಾನವೊಂದರ ಕರನಿರಾಕಣೆ ಬಂಡಾಯ ಸ್ವಾತಂತ್ರ್ಯ ಹೋರಾಟದ ಕಾವಿಗೆ ಮತ್ತಷ್ಟು ಇಂಬು ನೀಡಿತ್ತು. ಅದು ೧೯೩೭ರ ಸಮಯ. ದೇಶದಲ್ಲಿ ಕಾನೂನು ಭಂಗ ಚಳವಳಿ ನಡೆಯುತ್ತಿತ್ತು. ಈ ವೇಳೆ ರಾಮದುರ್ಗ ಸಂಸ್ಥಾನದ ಆಳ್ವಿಕೆ ಮಾಡುತ್ತಿದ್ದ ರಾಜಾಸಾಹೇಬರು ದೇಶದಲ್ಲಿದ್ದ ತೆರಿಗೆಗಿಂತ ಹೆಚ್ಚಿನ ತೆರಿಗೆಯನ್ನು ಸಂಸ್ಥಾನದ ಜನರ ಮೇಲೆ ಹೇರಿದ್ದರು. ಆಗ ಬರಗಾಲ ಎದುರಾಗಿತ್ತು. ಹೀಗಾಗಿ ಜನರು ತೆರಿಗೆ ಕಡಿತಗೊಳಿಸಿ ಎಂದು ರಾಜಾಸಾಹೇಬರ ಹತ್ತಿರ ವಿನಂತಿಸಿಕೊಂಡರು. ಇದಕ್ಕೆ ರಾಜಾಸಾಹೇಬರು ಸೊಪ್ಪು ಹಾಕಲಿಲ್ಲ. ಹೀಗಾಗಿ ರಾಮದುರ್ಗ ಸಂಸ್ಥಾನದಲ್ಲಿ ಕರನಿರಾಕರಣೆ ಸತ್ಯಾಗ್ರಹ ಆರಂಭಗೊಂಡಿತು. ಈ ವೇಳೆ ಪ್ರಜಾಸಂಘ ಹುಟ್ಟಿಕೊಂಡಿತು. ಇದರ ಅಧ್ಯಕ್ಷರಾಗಿ ವಕೀಲ ಬಿ.ಎನ್.ಮುನವಳ್ಳಿಯವರು ಆಯ್ಕೆಯಾದರು.
ಪ್ರಜಾಸಂಘ ಸ್ಥಾಪನೆಯಾದ ನಂತರ ರಾಮದುರ್ಗ ಗ್ರೂಪ್, ಸುರೇಬಾನ ಗ್ರೂಪ್, ಮೆಣಸಗಿ ಗ್ರೂಪ್ ಎಂದು ಮೂರು ಸ್ವಯಂ ಸೇವಕರ ಸಂಘಟನೆಗಳನ್ನು ಮಾಡಿಕೊಂಡು ಒಂದೊಂದು ಸಂಘಟನೆ ವಸ್ತ್ರಸಂಹಿತೆ ಮಾಡಿಕೊಂಡು ಹಳ್ಳಿಹಳ್ಳಿಗಳಲ್ಲಿ ತಿರುಗಾಡಿ ಪೊಲೀಸರು ಊರೊಳಗೆ ಹೋಗದಂತೆ ಬಹಿಷ್ಕಾರ ಹಾಕಿದರು. ಪೊಲೀಸರು ಊರಲ್ಲಿ ಬಂದರೆ ಚಹ ಸಹ ನೀಡದಂತೆ ತಿಳಿಸಿ ತಡೆದು ಬಂದರು. ಹಳ್ಳಿಗಳಲ್ಲಿಯ ಸಮಸ್ಯೆಗಳನ್ನು ಪ್ರಜಾಸಂಘದ ಸ್ವಯಂ ಸೇವಕರೇ ಪರಿಹರಿಸುತ್ತಿದ್ದರು. ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ಕೂಡ ನೀಡುತ್ತಿದ್ದರು. ಈ ಹೋರಾಟ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿತು. ನಾ.ಸು.ಹರ್ಡಿಕರ, ಗಂಗಾಧರರಾವ್ ದೇಶಪಾಂಡೆ ಅವರು ಇಲ್ಲಿಗೆ ಬಂದು ಅವಲೋಕನ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿಯೂ ಇದನ್ನು ಅನುಸರಿಸುತ್ತಿದ್ದರು.
ಸಂಸ್ಥಾನವೂ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸದಿದ್ದಾಗ ಪ್ರಜಾಸಂಘ ಉಗ್ರ ಹೋರಾಟಕ್ಕೆ ಅಣಿಯಾಯಿತು. ಈ ವೇಳೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿತು. ಭೂ ಕಂದಾಯವನ್ನು ಅರ್ಧದಷ್ಟು ಹಿಂದಕ್ಕೆ ಪಡೆಯಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಬಳಸಬೇಕು. ಕನ್ನಡ ಬಾರದ ಅಧಿಕಾರಿಗಳನ್ನು ಕಿತ್ತುಹಾಕಬೇಕು. ವರಮಾನ ತೆರಿಗೆ ತಗ್ಗಿಸಬೇಕು. ಅನವಶ್ಯಕ ತೆರಿಗೆ ಹಿಂಪಡೆಯಬೇಕೆಂದು ಷರತ್ತು ಹಾಕಿತು. ಇದಕ್ಕೆ ಸಂಸ್ಥಾನಿಕರು ಒಪ್ಪಲಿಲ್ಲ. ಸಂಸ್ಥಾನದಲ್ಲಿ ೧೪೪ ಸೆಕ್ಷನ್ ಜಾರಿ ಮಾಡಿದರು. ಇದನ್ನು ಉಲ್ಲಂಘಿಸಿ ಪ್ರಜಾಸಂಘದವರು ಜೈಲು ಸೇರಿದರು.
ಅದೊಂದು ದಿನ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರನ್ನು ಪೊಲೀಸರು ಬಂಧಿಸಿದರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟಗಾರರು ಜೈಲಿಗೆ ಮುತ್ತಿಗೆ ಹಾಕಿದರು. ಆದರೆ, ಪೊಲೀಸರು ಮಾತ್ರ ಮುನವಳ್ಳಿ ಅವರನ್ನು ನೋಡುವುದಕ್ಕೂ ಅವಕಾಶ ಕೊಡಲಿಲ್ಲ. ಇದರಿಂದ ರೊಚ್ಚಿಗೆದ್ದ ಹೋರಾಟಗಾರರು ಜೈಲಿಗೆ ಬೆಂಕಿ ಇಟ್ಟು, ಅಲ್ಲಿದ್ದ ಎಂಟು ಜನ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದರು. ಇದರಿಂದ ರೊಚ್ಚಿಗೆದ್ದ ಪೊಲೀಸರು ಗೋಲಿಬಾರ್ ಮಾಡಿದರು. ಈ ವೇಳೆ ನಾಲ್ಕು ಜನ ಹೋರಾಟಗಾರರು ಅಸುನೀಗಿದರು. ಆನಂತರ ಈ ಸಂಬಂಧ ವಿಚಾರಣೆ ನಡೆಯಲ್ಪಟ್ಟು ಎಂಟು ಜನಕ್ಕೆ ಫಾಶಿ (ಗಲ್ಲು) ಶಿಕ್ಷೆಯಾಗಿ, ಅನೇಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇನ್ನೂ ಕೆಲವರು ಜೈಲಿನಲ್ಲೇ ಸಾವನ್ನಪ್ಪಿದರು.
ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಸ್ಫೂರ್ತಿ ತುಂಬಿದ ಪ್ರಜಾಸಂಘದ ಹೋರಾಟದಲ್ಲಿ ಮಹಾದೇವಪ್ಪ ಪಟ್ಟಣ, ಲಿಂಗನಗೌಡ ಪಾಟೀಲ, ಮರುಳಾರಾಧ್ಯ ಶಾಸ್ತ್ರಿಗಳು, ಮಹಾದೇವಪ್ಪ ಬಡಕಲಿ, ಗಿರಿಧರಲಾಲ ಲಾಠಿ, ಸಿದ್ಧಪ್ಪ ಮೇಟಿ, ರಾಮಪ್ಪ ಶಾಡ್ಲಗೇರಿ, ಈರಪ್ಪ ಡೋಣಿ, ನಿಂಗಪ್ಪ ಮೇಟಿ, ಮರಿಯಪ್ಪ ಪೂಜಾರಿ, ಟೀಕಪ್ಪ ಜಾಲೋಜಿ, ಫಕೀರಸಾಬ ಅಗಸರ, ಮಾನಪ್ಪ ಕೊಳ್ಳಿ, ಲಕ್ಕಪ್ಪ ಮುರುಡಿ, ಮಲ್ಲಪ್ಪ ಕುಂಬಾರ, ಮಹಾಲಿಂಗಯ್ಯ ಹಿರೇಮಠ ಹೀಗೆ ಅನೇಕ ಜನರು ಪಾಲ್ಗೊಂಡು ಸಂಸ್ಥಾನ ನಡುಗಿಸಿದ್ದು ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರಿಗೆ ಧೈಯ, ಸ್ಥೈರ್ಯ, ಕಿಚ್ಚು ತುಂಬಿದರು. ಇವರೆಲ್ಲರ ಸ್ಮರಣೆ ನಿಮಿತ್ತವಾಗಿ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರ ಪುತ್ಥಳಿಯನ್ನು ರಾಮದುರ್ಗದ ತೇರು ಬಜಾರ್‌ನಲ್ಲಿ ಪುತ್ಥಳಿಯನ್ನು ನಿರ್ಮಿಸಲಾಗಿದೆ.
---
ಹೋಗುವುದು ಹೇಗೆ?
ಬೆಳಗಾವಿಯಿಂದ ರಾಮದುರ್ಗ ೧೧೦ ಕಿಮೀ ಇದೆ. ಬೆಳಗಾವಿಯಿಂದ ನೇರವಾಗಿ ರಾಮದುರ್ಗಕ್ಕೆ ಬಸ್ ಸೌಲಭ್ಯವಿದೆ. ರಾಮದುರ್ಗ ಬಸ್ ನಿಲ್ದಾಣದಿಂದ ೨ ಕಿಮೀ ದೂರದಲ್ಲಿ ಈ ಪುತ್ಥಳಿ ಇದೆ.

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ ಹಿಂಡಲಗಾ ಜೈಲ್

೧೯೨೩ರಲ್ಲಿ ಬ್ರಿಟಿಷರಿಂದ ಸ್ಥಾಪನೆಗೊಂಡ ಜೈಲು | ಕರ್ನಾಟಕದ ಅನೇಕ ಹೋರಾಟಗಾರರು ಇಲ್ಲಿ ಬಂಧಿಸಿ ಇಡಲಾಗಿತ್ತು



-ಮಂಜುನಾಥ ಗದಗಿನ 

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡುತ್ತಿದ್ದ ಹೋರಾಟಗಾರರನ್ನು ಹತ್ತಿಕ್ಕಲು ಅವರನ್ನು ಬಂಧಿಸಿ ಸೆರೆವಾಸ ನೀಡುತ್ತಿದ್ದರು. ಆದರೆ, ಇದಕ್ಕೂ ಬಗ್ಗದೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲೇಬೇಕು ಎಂದು ಹೋರಾಡಿ ಪ್ರಾಣಬಿಟ್ಟ ವೀರರು ನಮ್ಮ ರಾಜ್ಯದಲ್ಲಿ ಅನೇಕರಿದ್ದಾರೆ. ಹೀಗೆ ಬಂಧಿಸಲ್ಪಟ್ಟ ಹೋರಾಟಗಾರರನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಹಾಗೂ ಕರ್ನಾಟಕದ ನೆರೆಯ ರಾಜ್ಯ ಮಹಾರಾಷ್ಟ್ರದ ಪುಣೆಯ ಯರವಾಡ ಜೈಲಿನಲ್ಲಿ ಇಡುತ್ತಿದ್ದರು.

ಬಂಧನ, ಸೆರೆವಾಸ ಇವು ಭಾರತದ ಸ್ವಾತಂತ್ರ್ಯ ಹೋರಾಟವನ್ನು ನಿಯಂತ್ರಿಸಲು ಬ್ರಿಟಿಷರು ಅನುಸರಿಸಿದ ಅಸ್ತ್ರಗಳು. ದೇಶದಲ್ಲಿ ಆಂಗ್ಲರು ತಮ್ಮ ಅಧಿಪತ್ಯ ವಿಸ್ತರಿಸಬೇಕು ಎಂಬ ಉದ್ದೇಶದಿಂದ ತಮಗೆ ತಿಳಿದಂತೆ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದು ಜನರ ಮೇಲೆ ಹೇರಲು ಆರಂಭಿಸಿದರು. ಹೀಗೆ ಜನರ ಮೇಲೆ ವಿಧಿಸಲ್ಪಟ್ಟ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಅಟ್ಟಿ, ಅವರಿಗೆ ದಂಡ ವಿಧಿಸುತ್ತಿದ್ದರು. ಆದರೆ, ನಮ್ಮ ಹೋರಾಟಗಾರರು ಮಾತ್ರ ಇದ್ಯಾವುಕ್ಕೂ ಜಗ್ಗದೇ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು.

ಹಿಂಡಲಗಾ ಜೈಲು:

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು. ಹೀಗಾಗಿ ಜೈಲಿಗೆ ಸೇರುವವರ ಸಂಖ್ಯೆ ಕೂಡ ಹೆಚ್ಚಾಯಿತು. ಹೀಗಾಗಿ ೧೯೨೩ರಲ್ಲಿ ಬೆಳಗಾವಿಯ ಹಿಂಡಲಗಾದಲ್ಲಿ ಜೈಲು ನಿರ್ಮಾಣ ಮಾಡಿದರು. ಈ ಸಮಯದಲ್ಲಿ ಭಾರತದಲ್ಲಿ ಅಸಹಕಾರ ಹಾಗೂ ಉಪ್ಪಿನ ಸತ್ಯಾಗ್ರಹ ಚಳವಳಿಗಳ ಕಾವು ಜೋರಾಗಿತ್ತು. ಈ ವೇಳೆಯಲ್ಲಿ ಬ್ರಿಟಿಷರ ಸರ್ಕಾರಿ ಕಚೇರಿಗಳ ಲೂಟಿ, ಪಿಕೆಟಿಂಗ್, ರೈಲ್ವೆ ಹಳಿಗಳನ್ನು ಕೀಳುವುದು ಹೀಗೆ ನಾನಾ ಬಗೆಯ ಹೋರಾಟಗಳು ನಡೆದಿದ್ದವು. ಹೀಗೆ ಬ್ರಿಟಿಷರ ವಿರೋಧದಿಂದ ರಾಜ್ಯದ ಮೈಲಾರ ಮಹಾದೇವಪ್ಪ, ಅಂದಾನೆಪ್ಪ ದೊಡ್ಡಮೇಟಿ, ಮಹಾತ್ಮ ಗಾಂಧೀಜಿ ಅವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿ, ಕೊಟ್ಟೂರಿನ ಭದ್ರಶೆಟ್ಟಿಸಣ್ಣ ರುದ್ರಪ್ಪ, ಅಡವಿ ಬಸಪ್ಪ, ಅಣ್ಣು ಗುರೂಜಿ, ವೆಂಕೋಸಾ ಭಾಂಡಗೆ, ಹಳೇ ಹಗರಿಬೊಮ್ಮನಹಳ್ಳಿ ಹಾಲ್ದಾಳ್ ಕೊಟ್ರಪ್ಪ, ತಮ್ಮಾಜಿ ಮಿರಜಕರ, ವಾಲಿ ಚೆನ್ನಬಸಪ್ಪ ಹೀಗೆ ರಾಜ್ಯದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಿಂಡಲಗಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದ್ದಾರೆ. ಸ್ವಾತಂತ್ರ್ಯ ನಂತರ ವೀರ ಸಾರ್ವಕರ್ ಅವರನ್ನು ಇದೇ ಜೈಲಿನಲ್ಲಿ ಬಂಧಿಯಾಗಿಸಿದ್ದರು. ಗಲ್ಲು ಶಿಕ್ಷೆ ವಿಧಿಸುವ ರಾಜ್ಯದ ಏಕೈಕ ಜೈಲು ಎಂಬ ಖ್ಯಾತಿಗೆ ಈ ಕಾರಾಗೃಹ ಪಾತ್ರವಾಗಿದೆ. ಈ ಜೈಲು ಅಂದಾಜು ೯೯ ಎಕರೆ ಇದ್ದು, ೧೧೬೨ ಕೈದಿಗಳನ್ನು ಇಲ್ಲಿ ಇಡಬಹುದಾಗಿದೆ. ೧೯೨೩ರಿಂದ ಇಲ್ಲಿವರೆಗೂ ೧೩೭ ಜನರನ್ನು ಇಲ್ಲಿ ಗಲ್ಲಿಗೇರಿಸಲಾಗಿದೆ. ಇದೀಗ ಈ ಜೈಲು ಶತಮಾನೋತ್ಸವದ ಸಂಭ್ರಮದಲ್ಲಿದೆ.

ಇನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶ ಹಾಗೂ ಕರ್ನಾಟಕ ಅನೇಕ ಹೋರಾಟಗಾರರನ್ನು ಮಹಾರಾಷ್ಟ್ರದ ಯರವಾಡ ಜೈಲಿನಲ್ಲೂ ಇರಿಸಲಾಗಿತ್ತು. ಇದು ೧೮೭೧ರಲ್ಲಿ ಬ್ರಿಟಿಷರು ಈ ಕಾರಾಗೃಹವನ್ನು ಸ್ಥಾಪನೆ ಮಾಡಿದ್ದರು. ಕರ್ನಾಟಕ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಜೈಲಿನಲ್ಲಿ ಬಂಧಿಯಾಗಿ ಇಡಲಾಗಿತ್ತು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಬಾಲಗಂಗಾಧರ ತಿಲಕ, ಸುಭಾಷಚಂದ್ರ ಭೋಸ್, ವೀರ ಸಾರ್ವಕರ ಹೀಗೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಈ ಕಾಗಾಗೃಹದಲ್ಲಿ ಬಂಧಿಯಾಗಿದ್ದಿರು. ಈ ಜೈಲಿನಲ್ಲಿ ಐದು ಸಾವಿರಕ್ಕೂ ಅಧಿಕ ಕೈದಿಗಳನ್ನು ಇಡಬಹುದಾಗಿದೆ. 

---

ತಲುಪುವುದು ಹೇಗೆ?

ಹಿಂಡಗಾ ಕಾಗಾಗೃಹ ಬೆಳಗಾವಿ ನಗರದಿಂದ ೭ ಕಿಮೀ ಇದೆ. ಬೆಳಗಾವಿ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಇದೆ.

---

ಪೋಟೋ 

ಹಿಂಡಲಗಾ ಜೈಲ್

 

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...