Saturday, 6 August 2022

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ ಹಿಂಡಲಗಾ ಜೈಲ್

೧೯೨೩ರಲ್ಲಿ ಬ್ರಿಟಿಷರಿಂದ ಸ್ಥಾಪನೆಗೊಂಡ ಜೈಲು | ಕರ್ನಾಟಕದ ಅನೇಕ ಹೋರಾಟಗಾರರು ಇಲ್ಲಿ ಬಂಧಿಸಿ ಇಡಲಾಗಿತ್ತು



-ಮಂಜುನಾಥ ಗದಗಿನ 

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡುತ್ತಿದ್ದ ಹೋರಾಟಗಾರರನ್ನು ಹತ್ತಿಕ್ಕಲು ಅವರನ್ನು ಬಂಧಿಸಿ ಸೆರೆವಾಸ ನೀಡುತ್ತಿದ್ದರು. ಆದರೆ, ಇದಕ್ಕೂ ಬಗ್ಗದೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲೇಬೇಕು ಎಂದು ಹೋರಾಡಿ ಪ್ರಾಣಬಿಟ್ಟ ವೀರರು ನಮ್ಮ ರಾಜ್ಯದಲ್ಲಿ ಅನೇಕರಿದ್ದಾರೆ. ಹೀಗೆ ಬಂಧಿಸಲ್ಪಟ್ಟ ಹೋರಾಟಗಾರರನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಹಾಗೂ ಕರ್ನಾಟಕದ ನೆರೆಯ ರಾಜ್ಯ ಮಹಾರಾಷ್ಟ್ರದ ಪುಣೆಯ ಯರವಾಡ ಜೈಲಿನಲ್ಲಿ ಇಡುತ್ತಿದ್ದರು.

ಬಂಧನ, ಸೆರೆವಾಸ ಇವು ಭಾರತದ ಸ್ವಾತಂತ್ರ್ಯ ಹೋರಾಟವನ್ನು ನಿಯಂತ್ರಿಸಲು ಬ್ರಿಟಿಷರು ಅನುಸರಿಸಿದ ಅಸ್ತ್ರಗಳು. ದೇಶದಲ್ಲಿ ಆಂಗ್ಲರು ತಮ್ಮ ಅಧಿಪತ್ಯ ವಿಸ್ತರಿಸಬೇಕು ಎಂಬ ಉದ್ದೇಶದಿಂದ ತಮಗೆ ತಿಳಿದಂತೆ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದು ಜನರ ಮೇಲೆ ಹೇರಲು ಆರಂಭಿಸಿದರು. ಹೀಗೆ ಜನರ ಮೇಲೆ ವಿಧಿಸಲ್ಪಟ್ಟ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಅಟ್ಟಿ, ಅವರಿಗೆ ದಂಡ ವಿಧಿಸುತ್ತಿದ್ದರು. ಆದರೆ, ನಮ್ಮ ಹೋರಾಟಗಾರರು ಮಾತ್ರ ಇದ್ಯಾವುಕ್ಕೂ ಜಗ್ಗದೇ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು.

ಹಿಂಡಲಗಾ ಜೈಲು:

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು. ಹೀಗಾಗಿ ಜೈಲಿಗೆ ಸೇರುವವರ ಸಂಖ್ಯೆ ಕೂಡ ಹೆಚ್ಚಾಯಿತು. ಹೀಗಾಗಿ ೧೯೨೩ರಲ್ಲಿ ಬೆಳಗಾವಿಯ ಹಿಂಡಲಗಾದಲ್ಲಿ ಜೈಲು ನಿರ್ಮಾಣ ಮಾಡಿದರು. ಈ ಸಮಯದಲ್ಲಿ ಭಾರತದಲ್ಲಿ ಅಸಹಕಾರ ಹಾಗೂ ಉಪ್ಪಿನ ಸತ್ಯಾಗ್ರಹ ಚಳವಳಿಗಳ ಕಾವು ಜೋರಾಗಿತ್ತು. ಈ ವೇಳೆಯಲ್ಲಿ ಬ್ರಿಟಿಷರ ಸರ್ಕಾರಿ ಕಚೇರಿಗಳ ಲೂಟಿ, ಪಿಕೆಟಿಂಗ್, ರೈಲ್ವೆ ಹಳಿಗಳನ್ನು ಕೀಳುವುದು ಹೀಗೆ ನಾನಾ ಬಗೆಯ ಹೋರಾಟಗಳು ನಡೆದಿದ್ದವು. ಹೀಗೆ ಬ್ರಿಟಿಷರ ವಿರೋಧದಿಂದ ರಾಜ್ಯದ ಮೈಲಾರ ಮಹಾದೇವಪ್ಪ, ಅಂದಾನೆಪ್ಪ ದೊಡ್ಡಮೇಟಿ, ಮಹಾತ್ಮ ಗಾಂಧೀಜಿ ಅವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿ, ಕೊಟ್ಟೂರಿನ ಭದ್ರಶೆಟ್ಟಿಸಣ್ಣ ರುದ್ರಪ್ಪ, ಅಡವಿ ಬಸಪ್ಪ, ಅಣ್ಣು ಗುರೂಜಿ, ವೆಂಕೋಸಾ ಭಾಂಡಗೆ, ಹಳೇ ಹಗರಿಬೊಮ್ಮನಹಳ್ಳಿ ಹಾಲ್ದಾಳ್ ಕೊಟ್ರಪ್ಪ, ತಮ್ಮಾಜಿ ಮಿರಜಕರ, ವಾಲಿ ಚೆನ್ನಬಸಪ್ಪ ಹೀಗೆ ರಾಜ್ಯದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಿಂಡಲಗಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದ್ದಾರೆ. ಸ್ವಾತಂತ್ರ್ಯ ನಂತರ ವೀರ ಸಾರ್ವಕರ್ ಅವರನ್ನು ಇದೇ ಜೈಲಿನಲ್ಲಿ ಬಂಧಿಯಾಗಿಸಿದ್ದರು. ಗಲ್ಲು ಶಿಕ್ಷೆ ವಿಧಿಸುವ ರಾಜ್ಯದ ಏಕೈಕ ಜೈಲು ಎಂಬ ಖ್ಯಾತಿಗೆ ಈ ಕಾರಾಗೃಹ ಪಾತ್ರವಾಗಿದೆ. ಈ ಜೈಲು ಅಂದಾಜು ೯೯ ಎಕರೆ ಇದ್ದು, ೧೧೬೨ ಕೈದಿಗಳನ್ನು ಇಲ್ಲಿ ಇಡಬಹುದಾಗಿದೆ. ೧೯೨೩ರಿಂದ ಇಲ್ಲಿವರೆಗೂ ೧೩೭ ಜನರನ್ನು ಇಲ್ಲಿ ಗಲ್ಲಿಗೇರಿಸಲಾಗಿದೆ. ಇದೀಗ ಈ ಜೈಲು ಶತಮಾನೋತ್ಸವದ ಸಂಭ್ರಮದಲ್ಲಿದೆ.

ಇನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶ ಹಾಗೂ ಕರ್ನಾಟಕ ಅನೇಕ ಹೋರಾಟಗಾರರನ್ನು ಮಹಾರಾಷ್ಟ್ರದ ಯರವಾಡ ಜೈಲಿನಲ್ಲೂ ಇರಿಸಲಾಗಿತ್ತು. ಇದು ೧೮೭೧ರಲ್ಲಿ ಬ್ರಿಟಿಷರು ಈ ಕಾರಾಗೃಹವನ್ನು ಸ್ಥಾಪನೆ ಮಾಡಿದ್ದರು. ಕರ್ನಾಟಕ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಜೈಲಿನಲ್ಲಿ ಬಂಧಿಯಾಗಿ ಇಡಲಾಗಿತ್ತು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಬಾಲಗಂಗಾಧರ ತಿಲಕ, ಸುಭಾಷಚಂದ್ರ ಭೋಸ್, ವೀರ ಸಾರ್ವಕರ ಹೀಗೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಈ ಕಾಗಾಗೃಹದಲ್ಲಿ ಬಂಧಿಯಾಗಿದ್ದಿರು. ಈ ಜೈಲಿನಲ್ಲಿ ಐದು ಸಾವಿರಕ್ಕೂ ಅಧಿಕ ಕೈದಿಗಳನ್ನು ಇಡಬಹುದಾಗಿದೆ. 

---

ತಲುಪುವುದು ಹೇಗೆ?

ಹಿಂಡಗಾ ಕಾಗಾಗೃಹ ಬೆಳಗಾವಿ ನಗರದಿಂದ ೭ ಕಿಮೀ ಇದೆ. ಬೆಳಗಾವಿ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಇದೆ.

---

ಪೋಟೋ 

ಹಿಂಡಲಗಾ ಜೈಲ್

 

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...