Sunday, 28 July 2019

ಅಂಗವೈಕಲ್ಯತೆ ಶಾಪವಲ್ಲ



ಮಂಜುನಾಥ ಗದಗಿನ
ಅಂಗವೈಕಲ್ಯತೆ ಶಾಪವಲ್ಲ, ಅದು ವರ ಎಂಬ ಮಾತು ಈ ಮಕ್ಕಳಿಗೆ ಅನ್ವಯಿಸುತ್ತದೆ. ಸಾಧಿಸುವ ಆತ್ಮಸ್ಥೈರ್ಯವೊಂದಿದ್ದರೆ ಎಂಬತಹ ಕಷ್ಟಗಳು ತಲೆಬಾಗುತ್ತವೆ. ಈ ಮಾತಿಗೆ ನಿದರ್ಶನ ಎಂಬಂತೆ ಈ ಅಂಧ ಮಕ್ಕಳು ನಮ್ಮ ಕಣ್ಮುಂದೆ ಸಾಧಿಸಿ ನಿಂತಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ನಾವ್ಯಾರಿಗೂ ಕಮ್ಮಿ ಇಲ್ಲ ಎಂಬಂತಹ ಸಾಧನೆ ಮಾಡಿ ತೋರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ದೇಶದ ಪ್ರಥಮ ಶಾಲೆ:
ಅದು ೨೦೧೦ನೇ ಇಸ್ವಿ. ಈ ವರ್ಷದಲ್ಲೆ ದೇಶದ ಪ್ರಥಮ ಅಂಧ ಮಕ್ಕಳ ಯೋಗ ಶಾಲೆ ಆರಂಭವಾಯಿತು. ಸ್ಥಳೀಯ ಯಚ್ಚರೇಶ್ವರ ಮಠದ ಸ್ವಾಮೀಜಿ ಪ್ರೇರಣೆ ಹಾಗೂ ಬೆಂಗಳೂರಿನ ನೆಸ್ಟ್ ಸಂಸ್ಥೆಯ ನೆರವಿನಿಂದ ಕೆಲೂರ ಕುಟುಂಬದಿಂದ ಆರಂಭಗೊಂಡಿತು. ಈ ಶಾಲೆ ಆರಂಭಕ್ಕೆ ಯೋಗಪಟು ಶಿವಾನಂದ ಕೆಲೂರ, ಅವರ ತಾಯಿ ತುಳಸಮ್ಮ ಸೇವೆ ಸ್ಮರಣೀಯ. ಶಾಲೆ ಆರಂಭಿಸಿದಾಗ ೫ ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಈಗ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ೧೪ ಬೋಧಕ ಸಿಬ್ಬಂದಿ ಇದ್ದಾರೆ. ಎಲ್ಲ ಅಂಧ ಮಕ್ಕಳ ಶಾಲೆಯಲ್ಲಿರುವಂತೆಯೇ ಇಲ್ಲೂ ಮಕ್ಕಳಿಗೆ ಬ್ರೈಲ್ ಆಧಾರಿತ ಓದು-ಬರಹ, ಕಂಪ್ಯೂಟರ್ ತರಬೇತಿ, ಚಲನವಲನ ತರಬೇತಿ, ಕರಕುಶಲ, ಕ್ರೀಡೆ, ಸಂಗೀತ ಶಿಕ್ಷಣದ ಜೊತೆಗೆ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ೬ರಿಂದ ೧೮ ವರ್ಷ ವಯಸ್ಸಿನ ವಿಕಲಚೇನ ಮಕ್ಕಳು ಈ ಶಾಲೆಯಲ್ಲಿ ಇದ್ದಾರೆ. ೧ರಿಂದ ೯ನೇ ತರಗತಿಗಳು ಇಲ್ಲಿ ನಡೆಯುತ್ತಿವೆ. ಶಾಲೆಯಲ್ಲಿ ಮಕ್ಕಳಿಗೆ ಸ್ಪರ್ಶಾನುಭವದ ಮೂಲಕ ಯೋಗ ಹಾಗೂ ಮಲ್ಲಕಂಬ ತರಬೇತಿ ಕೊಡುತ್ತಿದ್ದಾರೆ.
ಉತ್ತಮ ಸಾಧನೆ:
೨೦೧೦, ೨೦೧೧ ಮತ್ತು ೨೦೧೨ರಲ್ಲಿ ನಿರಂತರವಾಗಿ ಮೂರು ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡ ಗರಿಮೆ ಈ ಮಕ್ಕಳದ್ದು,  ೨೦೧೪ ಮತ್ತು ೨೦೧೫ರಲ್ಲಿ ಚಾಲುಕ್ಯ ಉತ್ಸವದಲ್ಲಿ, ೨೦೧೨ರಲ್ಲಿ ರನ್ನ ಉತ್ಸವದಲ್ಲಿ, ೨೦೧೬ರಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ೨೦೧೫ರಲ್ಲಿ ಮತ್ತು ೨೦೧೭ರಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಸಾಧಕ ವಿದ್ಯಾರ್ಥಿಗಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರಿಸಿದ್ದರು. ದೆಹಲಿಯಲ್ಲಿ ವಿಶ್ವ ಯೋಗ ದಿನ, ಯೋಗ ಸಪ್ತಾಹ ಮತ್ತು ಅಂತಾರಾಷ್ಟ್ರೀಯ ಯೋಗ ಹಬ್ಬದಲ್ಲಿ ಈ ಶಾಲೆ ಮಕ್ಕಳು ಪ್ರದರ್ಶನ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಹೊರ ನಾಡು ಕನ್ನಡಿಗರ ಸಮ್ಮೇಳನ, ಯೋಗ ಒಲಿಂಪಿಯಾಡ, ೨೦೧೭ರಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಗೂ ಉದಯ ವಾಹಿನಿಯ ಲಿಟಲ್ ಚಾಂಪ್ಸ್ ವೇದಿಕೆಯಲ್ಲಿ ಶಾಲೆಯ ಮಕ್ಕಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿದ್ದಾರೆ. ೨೦೧೨ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಾಲೆಯ ಮಕ್ಕಳು ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ೪೦ ದೇಶಗಳಿಂದ ಬಂದಿದ್ದ ಸಾಮಾನ್ಯ (ಕಣ್ಣು ಕಾಣುವ) ಸ್ಪರ್ಧಾಳುಗಳುಗಳ ಎದುರು ಜ್ಞಾನಸಿಂಧು ಶಾಲೆಯ ೮ ಅಂಧ ವಿದ್ಯಾರ್ಥಿಗಳು ಈ ಸಾಧನೆ ಮೆಚ್ಚುವಂತಹದ್ದು.
ಪ್ರಶಸ್ತಿಗಳ ಗರಿ:
೨೦೧೦ರಲ್ಲಿ ವಿದ್ಯಾರ್ಥಿಗಳಾದ ಸರಸ್ವತಿ ಕಬಾಡರ, ಭೀಮಸಿ ಕಬಾಡರ, ಅಯ್ಯಪ್ಪ ಅಂತಕನವರಗೆ ಯೋಗ ಸಿರಿ’ ಪ್ರಶಸ್ತಿ ಲಭಿಸಿದೆ. ೨೦೧೧ರಲ್ಲಿ ಶಿರಡಿ ಸಾಯಿಬಾಬಾ ಟ್ರಸ್ಟ್ ರಾಷ್ಟ್ರೀಯ ಪ್ರಶಸ್ತಿ, ಬಾಗಲಕೋಟೆ ಹಬ್ಬ ಉತ್ಸವ ಸಮಿತಿಯಿಂದ ಕಲಾ ಭೂಷಣ ಪ್ರಶಸ್ತಿ ಹಾಗೂ ಬಸವರಾಜ ಹೊರಟ್ಟಿ ಅವರ ಅವ್ವ ಟ್ರಸ್ಟ್ ಪ್ರಶಸ್ತಿಗಳು ಸಂದಿವೆ. ೨೦೧೬ರಲ್ಲಿ ಶಾಲೆಯ ಸಂಚಾಲಕಿ ತುಳಸಮ್ಮ ಕೆಲೂರ ಅವರಿಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೬ರಲ್ಲಿ ಕಲಬುರ್ಗಿಯ ದಿಗ್ಗಾಂವಿ ಸ್ಮರಣಾರ್ಥ ಟ್ರಸ್ಟ್‌ನ ₹೫ ಲಕ್ಷ ಮೊತ್ತದ ರಾಷ್ಟ್ರೀಯ ಕಾಯಕ ಸಿರಿ ಪ್ರಶಸ್ತಿ. ₹೫೦ ಸಾವಿರ ಮೊತ್ತದ ಕಾಯಕ ಯೋಗಿ ಪ್ರಶಸ್ತಿ ಶಾಲೆಯ ಸಂಚಾಲಕಿ ತುಳಸಮ್ಮ ಅವರಿಗೆ ಲಭಿಸಿದೆ. ವಿದ್ಯಾರ್ಥಿ ಮಣಿಕಂಠನಿಗೆ ೨೦೧೭ರ ಮಕ್ಕಳ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸ್ಥಾನ ನೀಡಿ, ಚಿಣ್ಣರ ಚಿನ್ನ ಪ್ರಶಸ್ತಿ, ೨೦೧೭ರ ಜುಲೈನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಮಣಿಕಂಠನಿಗೆ ಒಲಿದಿದೆ. ದೆಹಲಿಯಲ್ಲಿರುವ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ೨೦೧೮ರಲ್ಲಿ ಈ ಶಾಲೆಗೆ ಪ್ರಶಂಸಾ ಪತ್ರ ನೀಡಿದೆ. ಈಚೆಗೆ ಪುಟ್ಟಪತಿ ಶಿರಡಿ ಸಾಯಿ ಬಾಬಾ ಸಂಸ್ಥೆಯಿಂದ ಪ್ರಶಸ್ತಿ ಕೂಡಾ ದೊರೆತಿದೆ.
ಕರೆ ತರುತ್ತಾರೆ:
ಈ ಶಾಲೆ ವತಿಯಿಂದ ಹಳ್ಳಿ ಹಳ್ಳಿಗಳಿಗೆ ಹೋಗಿ ನಿಮ್ಮಲ್ಲಿ ಅಂಧ ಮಕ್ಕಳು ಇದ್ದರೆ ಅವರನ್ನು ನಮ್ಮ ಶಾಲೆಗೆ ಕರೆದುಕೊಂಡು ಬನ್ನಿ ನಾವು ವಿದ್ಯಾಭ್ಯಾಸ ಕೊಡುತ್ತೇವೆ ಎಂದು ಪ್ರಚಾರ ಮಾಡಿ ಮಕ್ಕಳನ್ನು ಕರೆತರುವ ಕೆಲಸವನ್ನು ಈ ಶಾಲೆಯ ಸಿಬ್ಬಂದಿ ಮಾಡುತ್ತಿದೆ. ಅಷ್ಟೇ ಅಲ್ಲದೇ ಜಾತ್ರೆ, ಮತ್ತೀತ್ತರ ಸಭೆ ಸಮಾರಂಭಗಳಲ್ಲೂ ಪ್ರಚಾರ ಮಾಡಿ ಅಂಧ ಮಕ್ಕಳನ್ನು ಕರೆ ತಂದು ಉಚಿತ ಶಿಕ್ಷಣ ನೀಡಿ ಸಾಧಕ ಮಕ್ಕಳನ್ನಾಗಿ ಮಾಡುತ್ತಿದ್ದಾರೆ. ಇಲ್ಲಿ ಕಲಿತ ಅದೇಷ್ಟೋ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿ ಸೈ ಅನಿಕೊಂಡಿದ್ದಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುವುದು ವಿಶೇಷ.
ನಿಮ್ಮ ಕಾರ್ಯಕ್ರಮಗಳಿಗೆ ಸ್ಟಾರ್ ನಟರನ್ನು ಕರೆ ತರುವ ಬದಲು, ಈ ಮಕ್ಕಳನ್ನು ಕರೆಸಿ ಪ್ರದರ್ಶನ ನೀಡಿ, ಆ ಮಕ್ಕಳಿಗೆ ಆರ್ಥಿಕ ಸಹಾಯವೂ ಆಗುತ್ತದೆ. ಮಕ್ಕಳ ಕಲೆ ಪ್ರದರ್ಶನಕ್ಕೆ ಒಂದು ವೇದಿಕೆಯೂ ದೊರೆಯುತ್ತವೆ ಎಂಬ ಮಾತು ಜನ ಸಾಮಾನ್ಯರದ್ದು.

Monday, 22 July 2019

ಕರ್ ನಾಟಕಾ ಡ್ರಾಮಾ

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..
ಸರ್ಕಾರ ಉಳಿಸೋಣು..ಮೇಲೆ ಕುಂತವನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು...
ಲಗಾಮು ಸ್ಪೀಕರ್ ಕೈಲಿ..ನಾವೇನ ಮಾಡೋಣ..
ಎಲ್ಲಾರು ಕಿವಿ ಮುಚ್ಕೊಂಡ ಟಿವಿ ನೋಡೋಣ...😀

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ವಿಪಗೆ ರೂಲಯಾವುದು ಯಾವ್ದು, ಸದನಕ್ಕೆ ಮಿತಿಯಾವ್ದು..
ಆರೋಪದಲ್ಲಿ ನಿಜ ಯಾವ್ದು..ಮಾತಾಡೋದ್ರಲ್ಲಿ ಕರೇ ಯಾವ್ದು..
ಅತೃಪ್ತರು ಮನೆಮಾತು..ವಿಪ್ ಕಾರಾಬಾತು..
ಸದನ ಕುರುಕ್ಷೇತ್ರ ಆಯ್ತು?
ಆರೋಪ ಮಾಡಿದ ಮೇಲೆ ಬಿಪಿ ಬರ್ದೇ ಇರ್ತದ..
ನಮ್ಮ ಶಾಕರು ಹಿಂಗೆ ಅಂತ ಅವ್ನ ಕೈ ಬಿಡೋಕಾಯ್ತದ..
ನಾಲಿಗೆನ ಅವರ ಕೈಲಿಲ್ಲ ನಾವೇನ್ ಮಾಡೋಣ..
ಸ್ಪೀಕರು ಹೇಳಿದಾಕ್ಷಣ ಡ್ರಾಮಾ ಆಡೋರ ಡ್ರಾಮಾ ನೋಡೋಣ....

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ಒಂದು ಬಾಯಲ್ಲೂ ನೂರೆಂಟು ಸುಳ್ಲೂ...
ಇಲ್ಲೊಬ್ಬ ಸೂಪರ್ರು, ಅಲ್ಲೊಬ್ಬ ಪಾಪಲ್ರು..
ವಿಧಾನಸೌಧದ ಮೆಟಾಡೋರ್ರು..ಚಾನೆಲೂ ಓಡಿಸುತ್ತಾವ್ರು..ನೋಡಿ ಸುಸ್ತಾಗಿ ಮಲ್ಗವ್ನೆ..
ಯಾರಪ್ಪ ಎಬ್ಸೋರು..?
ಕೆಂಗಲ್ಲ ಹನಮಂತಯ್ಯ ಕಟ್ಸಿದ ಹಳೇ ವಿಧಾನಸೌಧದಲ್ಲೇ ಈ ಕಾರಬಾರು...
ಏನಾರೂ ನೋಡ್ಕೊಂಡ ಹೋಗು ಮತದಾರನೇ..ನಿಲ್ಲ ನಿನೆಲ್ಲೂ..
ಅತೃಪ್ತರು ರಾಜೀನಾಮೆ ಕೊಟ್ರೆ ನಾವೇನ್ ಮಾಡಾಣ..
ಅವರಿಗೂ ಅನರ್ಹತೆ ಬಣ್ಣ ಹಚ್ಚಿ ಆಟಾ ಆಡೋಣ...

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ಶಾಸಕ ಸ್ಥಾನಾನೆ ಟೆಂಪರ್ವರಿ ನಾವೇನ ಮಾಡಾಣ..ನಮ್ದೆ ಸರ್ಕಾರ ಉಳಿಯುಗಂಟ..ಡ್ರಾಮಾ ಆಡಾಣ...

*ಮಂಜು ಗದಗಿನ*❤

Sunday, 14 July 2019

ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ!

ಮಂಜನಾಥ ಗದಗಿನ

ಸರ್ಕಾರಿ ಕನ್ನಡ ಶಾಲೆಗಳೋ, ಅಲ್ಲೇನ ಕಲ್ಸ್ತಾರ, ಮಾಸ್ತಗೊಳಗೆ ಏನು ಬರಂಗಿಲ್ಲ, ಇನ್ನ ನಮ್ಮ ಮಕ್ಕಳಿಗೆ ಕಲ್ಸೋದ್ರಾಗ ಅಷ್ಟ ಐತಿ ಎಂದು ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಮೂಗು ಮುರಿದು ಮಾತನಾಡುವ ಜನರೇ ಹೆಚ್ಚು. ಆದರೆ, ಇಲ್ಲೊಂದು ಶಾಲೆ ಮಾತ್ರ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಸ್ಮಾರ್ಟ್ ಆಗಿ, ರಾಜ್ಯದ ಮನೆ, ಮನದ ಮಾತಾಗಿದೆ.
ಹೌದು! ಅದೇ ರಾಯಬಾಗದ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಇಡೀ ರಾಜ್ಯದಲ್ಲೇ ಗಮನ ಸೆಳೆಯುವಂತೆ ಮಾಡಿದ ಕೀತಿ ಸಾಹಿತಿ ಹಾಗೂ ಶಾಲೆಯ ಶಿಕ್ಷಕ ವೀರಣ್ಣ ಮಡಿವಾಳರ ಎಂಬ ಅಸಾಧಾರಣ ವ್ಯಕ್ತಿ ಸಲ್ಲುತ್ತದೆ.
ಶಾಲೆಯೊಂದು ಭಾಷಾ ಪ್ರಯೋಗಾಲಯವಾಗಬೇಕು ಎಂಬ ಅಭಿಲಾಸೆಯಿಂದ ಮಡಿವಾಳ ಅವರು ಹಲವು ವರ್ಷಗಳಿಂದ ಶ್ರಮಿಸುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳೂ ಖಾಸಗಿ ಪಬ್ಲಿಕ್ ಶಾಲೆಗಳಿಗೆ ಪೈಪೋಟಿ ನೀಡಬೇಕು ಎಂಬ ಮಹತ್ತ ಕನಸನ್ನು ಕಟ್ಟಿಕೊಂಡು ಅದೊಂದು ದಿನ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡರು. ಇದನ್ನು ನೋಡಿದ ಸಹೃದಯಿಗಳು ಮಡಿವಾಳರ ಕನಸಿನ ಶಾಲೆಯ ಆರಂಭಕ್ಕೆ ಕೈ ಜೋಡಿಸಿದರು. ನಂತರ ಮಡಿವಾಳ ಅವರಿಂದ ನಡೆದದ್ದು ಸ್ಮಾರ್ಟ್ ಪ್ಲಸ್ ಕ್ಲಾಸ್ ಎಂಬ ಹೊಸ ಕಲ್ಪನೆಯ ಶಾಲೆಯ ಆರಂಭ.

ಏನುದು ಸ್ಮಾರ್ಟ್ ಪ್ಲಸ್ ಕ್ಲಾಸ್:

ನಾವೇಲ್ಲ ಸ್ಮಾರ್ಟ್ ಕ್ಲಾಸ್‌ಗಳ ಬಗ್ಗೆ ಕೇಳಿದ್ದೇವೆ. ಆದರೆ, ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ಪರಿಕ್ಪನೆ ಮಡಿವಾಳ ಅವರದ್ದು. ಸ್ಮಾರ್ಟ್ ಕ್ಲಾಸ್‌ನಲ್ಲಿ ಮಕ್ಕಳಿಗೆ ಪಿಪಿಟಿ(ಪ್ರಜಂಟೆಶನ್ ಪವರ್ ಪಾಯಿಂಟ್) ಮೂಲಕ ಮಕ್ಕಳಿಗೆ ಪಾಠ ಭೋದನೆ ಮಾಡಲಾಗುತ್ತಿದೆ. ಆದರೆ, ಸ್ಮಾರ್ಟ್ ಪ್ಲಸ್ ಕ್ಲಾಸ್‌ನಲ್ಲಿ ಒಂದು ಟಿವಿ ಹಾಗೂ ವೈರಲೇಸ್ ಇಂಟರ್ನೆಟ್ ಬಳಕೆ ಮಾಡಲಾಗುತ್ತಿದೆ. ಅಂದರೆ, ನಿಡಗುಂದಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೪೦ ಇಂಚಿನ ಟಿವಿಯನ್ನು ಹಾಕಲಾಗಿದೆ. ಇದಕ್ಕೆ ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ಟಿವಿಯಲ್ಲಿ ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಯ್ಯೂಟೂಬ್ ನಲ್ಲಿ ಮಕ್ಕಳಿಗೆ ಬೇಕಾಗ ಪಠ್ಯಗಳನ್ನು ತೋರಿಸಿ ಪಾಠ ಭೋದನೆ ಮಾಡಲಾಗುತ್ತಿದೆ. ಇದು ಪರಿಣಾಮಕಾರಿ ಕೂಡಾ ಆಗಿದೆ. ಇದೇ ಕಾರಣಕ್ಕೆ ಮಕ್ಕಳು ಬೇಸರ, ಆಯಾಸ ಮಾಡಿಕೊಳ್ಳದೇ ಉತ್ಸಾಹದಿಂದ ಕಲಿಯುತ್ತಿದ್ದಾರೆ.


ಗ್ರೀನ್ ಬೋರ್ಡ್:


ಈ ಶಾಲೆಯಲ್ಲಿ ೧ರಿಂದ ೫ನೇ ತರಗತಿ ಇದೆ. ಇಬ್ಬರೇ ಶಿಕ್ಷಕರು ಇದ್ದು, ೧೨೦ ಮಕ್ಕಳು ಕಲಿಯುತ್ತಿದ್ದಾರೆ. ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಎಲ್ಲ ಮಕ್ಕಳಿಗೂ ಗ್ರೀನ್ ಬೋರ್ಡ್‌ಗಳನ್ನು ಒದಗಿಸಲಾಗಿದೆ. ಈ ಸ್ಮಾಟ್ ಬೋರ್ಡ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಹೆಚ್ಚಾಗುತ್ತಿದೆ. ಈ ಶಾಲೆಯ ಮಕ್ಕಳು ಪಾಠಿ, ಪೆನ್ಸಿಲ್ ತರದೇ ಇದ್ದರೂ ನಡೆಯುತ್ತಿದೆ. ಏಕೆಂದರೆ ಗ್ರೀನ್ ಬೋರ್ಡ್ ಬಳಕೆ ಇದೆ.
ಪ್ರತಿ ಮಕ್ಕಳಿಗೂ ಖುರ್ಚಿ:
ಸರ್ಕಾರಿ ಶಾಲೆಗಳು ಯಾವುದೇ ವಿಷಯಗಳಲ್ಲೂ ಹಿಂದೆ ಬಿದ್ದಿಲ್ಲ ಎಂಬುವುದಕ್ಕೆ ಈ ಶಾಲೆ ನಿದರ್ಶನವಾಗಿದೆ. ಕನ್ನಡಾಭಿವೃದ್ಧಿ ಪ್ರಾಧಿಕಾರದವರು ನೀಡಿದ ೧ ಲಕ್ಷ ಹಣದಿಂದ ಈ ಶಾಲೆಯ ಮಕ್ಕಳಿಗೆ ಖುರ್ಚಿ ಹಾಗೂ ರೌಂಡ್ ಟೇಬಲ್‌ಗಳನ್ನು ತರಲಾಗಿದೆ. ಮಕ್ಕಳು ಈ ಖುರ್ಚಿ ಮೇಲೆ ಕುಳಿತು ಆರಾಮಾಗಿ ಪಾಠ ನೋಡಿ ಕಲಿಬಹುದಾಗಿದೆ. ಇದಷ್ಟೇ ಅಲ್ಲದೇ, ಶಾಲೆಯಲ್ಲಿ ಮಕ್ಕಳಿಗೆ ಆಗಾಗ ಚರ್ಚಾ ಸ್ಪರ್ಧೆಗಳನ್ನು ಏರ್ಪಾಡು ಮಾಡಿದಾಗ ಈ ರೌಂಡ್ ಟೇಬಲ್ ಸುತ್ತಲೂ ಖುರ್ಚಿ ಹಾಕಿ ಸುಂದವಾರ ಚರ್ಚೆಗಳು ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಇದಷ್ಟೇ ಅಲ್ಲೇ ಈ ಶಾಲೆ ಮುಖ್ಯೋಪಾಧ್ಯಾಯ ಕೊಠಡಿ ಕೂಡಾ ಹೈಟೆಕ್ ಮಾಡಲಾಗಿದೆ.
ಮನರಂಜನೆಯೊಂದಿಗೆ ಭೋದನೆ:
ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಈ ಶಾಲೆಯಲ್ಲಿ ಮನರಂಜನೆಗೂ ಅವಕಾಶ ಇದೆ. ಪಾಠ ಬೋಧನೆ ಆರಂಭಕ್ಕೂ ಮುನ್ನ ೧೦ರಿಂದ ೧೫ ನಿಮಿಷಗಳ ಕಾಲ ಮಕ್ಕಳಿಗೆ ಇಷ್ಟವಾದ ಹಾಡುಗಳನ್ನು ಟಿವಿಯಲ್ಲಿ ಹಾಕಿ ಅವರಿಂದ ನೃತ್ಯ ಮತ್ತೀತ್ತರ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳ ಮನಸ್ಸನ್ನು ಸಂತಸ ಪಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಈ ಮೂಲಕ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದುತ್ತಿದ್ದಾರೆ. ನಂತರ ಕಲಿನಲಿ-ನಲಿಕಲಿ ಯೋಜನೆ ಮೂಲಕ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಇನ್ನೂ ತಿಂಗಳಿಗೆ ಮಕ್ಕಳ ಚಿತ್ರಗಳನ್ನು ಇಲ್ಲಿ ತೋರಿಸಲಾಗುತ್ತಿದೆ. ಹೀಗಾಗಿ ಈ ಶಾಲೆಯಲ್ಲಿ ಜಾಗತಿಕ ಮಕ್ಕಳ ಶಿಕ್ಷಣ ನೀಡಲಾಗುತ್ತಿದೆ.ಇದರಿಂದ ಈ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಹೊರ ಹೊಮ್ಮಿದೆ.
ಎರಡನೇ ಯೂನಿಟ್ ಆರಂಭ:
ಸ್ಮಾರ್ಟ್ ಪ್ಲಸ್ ಕ್ಲಾಸ್‌ನಡಿಯಲ್ಲಿ ಎರಡು ಯೂನಿಟ್‌ಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಬೆಂಗಳೂರಿನ ಶಶಿಧರ ಟಿ.ಎಂ ಹಾಗೂ ಚನ್ನಪಟ್ಟಣದ ಯತೀಶ ಚಂದ್ರ ಅವರು ಕೊಟ್ಟ ಆರ್ಥಿಕ ನೆರವಿನಿಂದ ಪ್ರಥಮ ಯೂನಿಟ್ ಕ್ಲಾಸ್‌ನಡಿಯಲ್ಲಿ ಡಿಜಿಟಲ್ ಪಾಠ ಬೋಧನೆ ಮಾಡಲಾಗುತ್ತಿದೆ. ಒಂದನೆ ಯೂನಿಟ್‌ನಲ್ಲಿ ೪೦ ಇಂಚಿನ ಟಿವಿ ಹೊಂದಲಾಗಿದ್ದು, ಎರಡನೇ ಯುನಿಟ್‌ನಲ್ಲಿ ೫೦ ಇಂಚಿನ ಟಿವಿ ತರಲಾಗುತ್ತಿದೆ. ಈ ಟಿವಿಯಲ್ಲಿ ಇನ್ನಷ್ಟು ಹೆಚ್ಚಿ ಎಚಡಿ ಹಾಗೂ ಬಹು ಆಯ್ಕೆಗಳು ಇರಲಿದ್ದು, ಮತ್ತಷ್ಟು ಸ್ಮಾರ್ಟ್ ಪ್ಲಸ್ ಕ್ಲಾಸ್ ನಡೆಸಲು ಅನುಕೂಲವಾಗಲಿದೆ ಎನ್ನುತ್ತಾರೆ ವೀರಣ್ಣ ಮಡಿವಾಳ ಅವರು. ಇದಷ್ಟೇ ಅಲ್ಲದೇ ಈ ಶಾಲೆ ಮೂರು ವರ್ಷದಲ್ಲಿ ಅದ್ಭುತ್‌ವಾಗಿ ಬೆಳೆದು ಖಾಸಗಿ ಶಾಲೆಗಳ ಮಕ್ಕಳು ಈ ಶಾಲೆಗೆ ಬರುವಂತಾಗಿದೆ. ವರ್ಷದಿಂದ ವರ್ಷಕ್ಕೆ ಈ ಶಾಲೆಗಳ ಮಕ್ಕಳ ಸಂಖ್ಯೆ ಕೂಡಾ ವೃದ್ಧಿಸುತ್ತಿದೆ. ಇಂತಹ ಶಾಲೆಗಳನ್ನು ರಾಜ್ಯದಲ್ಲೇ ಎಲ್ಲೆಡೆ ನಿರ್ಮಾಣವಾದರೆ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂಬ ಮಾತು ತಾನಾಗಿಯೇ ಮಾಯವಾಗಿ, ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚುವುದು ಎಂಬುವುದು ಶಿಕ್ಷಣ ಪ್ರೇಮಿಗಳ ಆಶಯ.
--

ಸರ್ಕಾರಿ ಶಾಳೆಗಳಲೂ ಕೂಡಾ ಖಾಸಗಿ ಶಾಲೆಗಳನ್ನು ಮೀರಿಸಬೇಕು ಎಂಬ ಕನಸು ನನ್ನದಾಗಿತ್ತು. ಈ ಕನಸಿನಡಿಯಲ್ಲೇ ನಾನು ಸ್ಮಾರ್ಟ್ ಪ್ಲಸ್ ಕ್ಲಾಸ್ ಆರಂಭಿಸಿದ್ದೇನೆ. ನನ್ನ ಈ ಪರಿಕ್ಪನೆ ನೋಡಿ ನಾಲ್ಕು ಸರ್ಕಾರಿ ಶಾಲೆಗಳು ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ನಿರ್ಮಾಣಕ್ಕೆ ಮುಂದಾಗಿವೆ. ರಾಜ್ಯದಲ್ಲ ಎಲ್ಲ ಶಾಲೆಗಳು ಈ ರೀತಿ ನಿರ್ಮಾಣವಾಗಬೇಕು ಎಂಬ ಆಶಯ ನನ್ನದು.
-ವೀರಣ್ಣ ಮಡಿವಾಳರ, ಶಿಕ್ಷಕ.

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...