Saturday, 3 March 2018

ರಂಗೇರಿದ ರಂಗಿನ ನೆನಪು..


ಪ್ರಕೃತಿ ಸಂಪೂರ್ಣ ಸೊರಗಿರುತ್ತದೆ, ಉದುರಿದ ಎಲೆಗಳು, ಬಾಡಿದ ಬಳ್ಳಿಗಳು, ಬೆತ್ತಲಾಗಿ ನಿಂತ ಮರಗಳು ಮತ್ತೆ ಮರು ಜೀವ ಪಡೆಯಲು ಕಾತರಿಸುತ್ತಿರುತ್ತವೆ. ಇಂತಹ ಸಮಯದಲ್ಲೆ ಬಣ್ಣಗುಂದಿದ ನಮ್ಮ ಬದುಕಿನಲ್ಲಿ ಬಣ್ಣ ತುಂಬಲು ರಂಗನ್ನು ಹೋದ್ದು, ಬಂದೇ ಬೀಡುತ್ತದೆ, ರಂಗಿನ ಹಬ್ಬ ಹೋಳಿ. ಇಂತಹ ರಂಗಿನ ನೆನಪುಗಳು ರಂಗಾಗಿ ರಂಗೇರಿ ಗರಿ ಬಿಚ್ಚಿ ನಲಿದಾಡುತ್ತಿವೆ.
ಮಹಾ ಶಿವರಾತ್ರಿ ಮುಗಿದ ಕೂಡಲೇ, ನಮ್ಮ ರಂಗಿನಾಟಗಳು ಶುರುವಾಗುತ್ತಿದ್ದವು. ಅಟ್ಟದ ಮೇಲೆ ಬೆಚ್ಚಗೆ ಮಲಗಿದ್ದ ಹಲಗೆಗಳು ಈ ವೇಳೆ ಧೂಳಗೊಡವಿ ಮೇಲೆಲುತ್ತಿದ್ದವು. ಓಣಿ ತುಂಡಹೈಕ್ಳುಗಳು ಒಂದು ಕಡೆ ಹಲಗೆ ಬಾರಿಸುತ್ತಿದ್ದರೆ, ಹೋಗೋ,ಬರೋರು ಹಾ..ಹಾ..ಶುರುವಾಯಿತ್ತಪ್ಪ ಈ ಕಪ್ಪಿಯಾಟಗಳು ಎಂದು ಗೋಣಗುತ್ತಾ ಹೋಗುತ್ತಿದ್ದರು. ಮತ್ತೊಂದಿಷ್ಟು ಜನರು ಅಯ್ಯೋ..!ಪಾಪಾ ಕಣ್ರಿ ಮಕ್ಳಾದ್ರು ಯಾವಾಗ ಹಲಗೆ ಬಾರಿಸ್ಬೇಕು ಎಂದು ಕನಿಕರ ಪಟ್ಟುಕೊಳ್ಳುತ್ತಿದ್ದರು.
ಹೀಗೆ ಶುರುವಾದ ನಮ್ಮ ಹೋಳಿಯ ಸಂಭ್ರಮ, ದಿನದಿಂದ ದಿನಕ್ಕೆ ವಿಭಿನ್ನ ಆಯಾಮಗಳನ್ನು ಪಡೆದುಕೊಂಡು ರಂಗೆರುತ್ತಿತ್ತು. ಕೆಲವೊಂದಿಷ್ಟು ಸಾರಿ ನಮ್ಮ ಹಲಗೆಯ ಸದ್ದಿಗೆ ಓಣಿಯ ಹಿರಿಯರು ಮಂಗಳಾರತಿ ಮಾಡುತ್ತಿದ್ದರು. ಈ ಹೋಳಿ ಹುಣ್ಣಿಮೆಯ ಹೈಲೈಟ್ಸ್‌ಗಳಾದ ತಮಟೆ ಪಡೆಯುವುದು, ಬಣ್ಣದಲ್ಲಿ ಮಿಂದೆಳುವು ಇದರೊಟ್ಟಿಗೆ ಹೊಯ್ಕೋಳೋದು. ಹೌದು! ಹೋಳಿ ಶುರುವಾದ್ರೆ ಹೊಯ್ಕೋಂಡವರ ಬಾಯಿಗೆ ಹೋಳಿಗೆ ಎನ್ನುತ್ತಾ, ಸಾಮೂಹಿಕವಾಗಿ ನಾಲ್ಕು ಮಂದಿಗೆ ಕಿರಿಕಿರಿಯಾಗುವ ಹಾಗೆ ಹೊಯ್ಕೋಳ್ತಾಯಿದ್ವಿ.
ಮಹಾಶಿವರಾತ್ರಿ ಮುಗಿತಾ, ಇದ್ದಂತೆ ನಮ್ಮ ಓಣಿಯ ಮಾಸ್ಟರ ಮೈಂಡಗಳು ಕಾರ್ಯಪ್ರವೃತ್ತವಾಗುತ್ತಿದ್ದವು. ಓಣಿಯಲ್ಲಿ ಯಾವ ರೀತಿಯಾಗಿ ಕಟ್ಟಿಯನ್ನು ಕಳ್ಳತನ ಮಾಡ್ಬೇಕು, ಯಾರು ಮಾಡಬೇಕು, ಹೇಗೆ ಮಾಡ್ಬೇಕೆಂಬ ಗುಸು-ಗುಸು,ಪಿಸು,ಪಿಸು ಮಾತುಗಳ ಭರಾಟೆ ಜೋರಾಗಿ ನಡೆಯುತ್ತಿದ್ದವು. ನಮ್ಮ ಮಾಸ್ಟರ ಪ್ಲಾನಗಳಿಗೆ ಸಂಧಿ,ಗೊಂದಿಯಲ್ಲಿ ಬಚ್ಚಿಟ ಕಟ್ಟಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಕಾಮಣ್ಣನ ಬೀದಿ ಸೇರುತ್ತಿದ್ದವು. ಅವತ್ತೊಂದು ದಿನ ನಮ್ಮ ಓಣಿಯ ಹುಡುಗರೆಲ್ಲ ಸೇರಿ ರಾತ್ರಿ ವೇಳೆಯಲ್ಲಿ ಕಟ್ಟಿಗೆ ಕಳ್ಳತನ ಮಾಡಲು ಹೋದಾಗ, ಸಿಕ್ಕಿ ಹಾಕಿಕೊಂಡು, ಹೊಡೆತ ತಿಂದಿದ್ವಿ, ನಮ್ಮ ಓಣಿಯಲ್ಲಿ ನಾವೆಲ್ಲರೂ ಕಟ್ಟಿಗೆ ಕಳ್ಳರೆಂದೆ ರಾತ್ರೋ ರಾತ್ರಿ ಪ್ರಸಿದ್ದಿ ಪಡೆದುಕೊಂಡಿದ್ದೆವು.
ಬೀದಿ ಕಾಮಣ್ಣನನ್ನು ಸುಡುವುದಕ್ಕೂ ಮುನ್ನಾದಿನ, ನಮ್ಮ ಕಡೆ ಮನೆ ಕಾಮಣ್ಣನನ್ನು ಸುಡುವುದು ವಾಡಿಕೆ ಇದೆ. ಈ ಸಮಯದಲ್ಲಿ ಓಣಿಯ ಹುಡುಗರೆಲ್ಲ ತಮ್ಮ ಹಲಗೆಯನ್ನು ತಂದು ಬಾರಿಸುತ್ತಿದ್ದರು. ಈ ಸಮಯದಲ್ಲಿ ಗೊಬ್ಬರಿ ಚೂರೊಂದನ್ನು ಕಾಮಣ್ಣನಿಗೆ ಹಾಕಲಾಗುತ್ತದೆ. ಈ ಗೊಬ್ಬರಿ ಚೂರಿಗಾಗಿ ನಮ್ಮ ಹುಡುಗರು ಜಿದ್ದಿಗೆ ಬಿದ್ದು ಅದನ್ನು ಪಡೆದುಕೊಳ್ಳುತ್ತಿದ್ದರು. ಯಾರಿಗೆ ಆ ಗೊಬ್ಬರಿ ಸಿಗುತ್ತದೆಯೋ..ಅವರು ಗೊಬ್ಬರಿಯ ಕರಿ ಮಸಿಯಿಂದ ಇತರೆ ಹುಡುಗರಿಗೆ ಮೀಸೆ ಕೊರೆಯುತ್ತಿದ್ದರು. ಹೀಗೆ ಮಾಡುವುದರಿಂದ ಬೇಗ ಮೀಸೆ ಚಿಗುರತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.
ಕಾಮಣ್ಣನ ದಹನದ ದಿನ  ಅಪ್ಪ, ನೀರ ಬಣ್ಣ ಮಾಡಿ ಕೊಡುತ್ತಿದ್ದ. ನಾ ಅದನ್ನು ತುಂಬಿಕೊಂಡು ಹೋಗೋ,ಬರೋರಗೆ ಮಾರುದ್ಧ ದೂರದಿಂದಲೇ ಪಿಚಕಾರಿಯಿಂದ ಹೊಡೆಯುತ್ತಿದೆ. ಈ ಸಂದರ್ಭದಲ್ಲಿ ಯಾರಾದ್ರು ನನಗೆ ಬಣ್ಣ ಹಚ್ಚಲು ಬಂದ್ರೆ, ನಮ್ಮಪ್ಪ ಅವರನ್ನು ಗದರಿಸಿ ಕಳುಹಿಸುತ್ತಿದ್ದ. ರಂಗಿನಾಟ ಮುಗಿದ ಮೇಲೆ ಅವ್ವ ಮೂರು ಗುಂಡೆ ನೀರು ಕಾಯಿಸಿ, ಬಣ್ಣ ಹೋಗೋವರೆಗೂ ಸ್ನಾನ ಮಾಡಿಸುತ್ತಿದ್ಳು. ನಂತರ ಬಿಸಿ ಬಿಸಿ ಹೋಳಿಗೆ ಮಾಡಿ ತಿನ್ನಿಸುತ್ತಿದ್ದಳು.
ಈ ರೀತಿಯಾಗಿ ಬಾಲದ್ಯ ರಂಗಿನಾಟ ಬಲು ಮೋಜಿನಿಂದ ಕೂಡಿತ್ತು.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...