- ಮಂಜುನಾಥ ಗದಗಿನ
ಹೂಲಿ. ಹೆಸರು ಕೇಳಿದರನೇ ಅದೇನೋ ರೋಮಾಂಚನ. ಇತಿಹಾಸ ಪುಟಗಳಲ್ಲಿ ತನ್ನದೇ ವೈಶಿಷ್ಟತೆಗಳ ಮೂಲಕ ನಾಡಿನ ಮನೆ-ಮನದ ಮಾತಾಗಿದ್ದ ಪುಟ್ಟ ಹಳ್ಳಿ.
ನೂರಾರು ದೇವಾಲಗಳು, ನೂರಾರು ಬಾವಿಗಳನ್ನು ತನ್ನೊಡಲಲ್ಲಿ ಅವಿತುಗೊಂಡು ನಾಡಿನ ಗಮನ ಸೆಳೆದ ಹಳ್ಳಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ. ಯಲ್ಲಮ್ಮನ ನಾಡು ಸವದತ್ತಿಯಿಂದ ೧೦ ಕಿಮೀ ದೂರದಲ್ಲಿದೆ ಈ ಐತಿಹಾಸಿಕ ಸ್ಥಳ. ಶಿಲ್ಪಕಲೆ, ವಾಸ್ತುಶಿಲ್ಪ, ಶಾಸನಗಳನ್ನು ಹೊಂದುವ ಮೂಲಕ ಸರ್ವಧರ್ಮ ಸಮನ್ವಯತೆ ಸಾರುವ ಇಂತಹ ಒಂದು ಸ್ಥಳ ಅದೆಷ್ಟೋ ಜನರಿಗೆ ಗೋಚರವಾಗಿಲ್ಲ. ಈ ಗ್ರಾಮದಲ್ಲಿ ಮಧನೇಶ್ವರ, ಅಂಧಕೇಶ್ವರ, ತಾರಕೇಶ್ವರ, ಬನಶಂಕರಿ, ರಾಮೇಶ್ವರ, ನಾರಾಯಣ, ವೀರಭದ್ರ, ಕಲ್ಮೇಶ್ವರ, ಕರಿಸಿದ್ಧೇಶ್ವರ, ಪಂಚಲಿಂಗೇಶ್ವರ ಸೇರಿದಂತೆ ವಾಸ್ತುಶಿಲ್ಪಗಳಿಂದ ಕೂಡಿದ ಹಲವಾರು ಪ್ರಾಚೀನ ದೇವಾಲಯಗಳನ್ನು ಕಾಣಬಹುದು.
ಹಲವು ಹೆಸರುಗಳು:
ಹೂಲಿ ಗ್ರಾಮ ಪ್ರಾಚೀನ ಕಾಲದಲ್ಲಿ ಬೆಳವುಲ ದೇಶದ ಮಹಾರಾಜರು ಆಡಳಿತ ನಡೆಸುತ್ತಿದ್ದ ಕೇಂದ್ರವಾಗಿದ್ದು, ಹದಿನೆಂಟು ಅಗ್ರಹಾರಗಳ ಮುಕುಟ ರತ್ನದಂತಿತ್ತು ಎಂದು ವರ್ಣಿಸಲಾಗಿದೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ಗುಡ್ಡದ ಪಕ್ಕದಲ್ಲಿ ಅನೇಕ ವಿರೂಪಗೊಂಡ ದೇವಾಲಯಗಳಿವೆ. ಋಷಿಮುನಿಗಳು ಇಲ್ಲಿ ಯಜ್ಞ- ಯಾಗಾದಿಗಳನ್ನು ನಡೆಸಿದ್ದಾರೆ ಎಂಬುದಕ್ಕೆ ಕುರುಹಾಗಿ ಹಾಳಾದ ಅನೇಕ ಯಜ್ಞಕುಂಡ ಸ್ತಂಭಗಳಿವೆ. ಇದನ್ನು ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಲಚೂರಿ ರಾಜರು, ವಿಜಯನಗರದ ಅರಸರು, ಮರಾಠರು ಕಾಲಕಾಲಕ್ಕೆ ತಮ್ಮ ಆಡಳಿತಕ್ಕೆ ಬಳಸಿಕೊಂಡಿರುವುದನ್ನು ಇಲ್ಲಿ ಲಭ್ಯವಾದ ಶಾಸನಗಳು ತಿಳಿಸುತ್ತವೆ.
ರಾಜನಾದ ಕಾರ್ತವೀರ್ಯಾರ್ಜುನ ಕಾಲಾವಧಿಯಲ್ಲಿ ಇದು ರಾಜಧಾನಿಯಾಗಿತ್ತು ಎಂದು ಯಲ್ಲಮ್ಮದೇವಿ ಚರಿತ್ರೆಯಲ್ಲಿ ಉಲ್ಲೇಖಿತವಾಗಿದೆ. ಹೂಲಿಯನ್ನು ಇಲ್ಲಿ ಲಭ್ಯವಾದ ಹಲವಾರು ಶಾಸನಗಳಲ್ಲಿ ಮಹಿಸ್ಪತಿ ನಗರ, ದಕ್ಷಿಣ ಕಾಶಿ, ಪೂವಲ್ಲಿ, ಪುಲಿಪುರ, ಪುಲಿಗ್ರಾಮ, ಚೂಡಾಮಣಿ ಪೂಲಿ, ಹೂಲಿ ಎಂದೆಲ್ಲ ಕರೆಯಲಾಗಿದೆ. ಯಲ್ಲಮ್ಮನ ಚರಿತ್ರೆಯಲ್ಲಿ ಧರ್ಮವರ್ಧನ ಎಂಬ ರಾಜ ಇಲ್ಲಿ ಆಳುತ್ತಿದ್ದನಂತೆ. ಜಮದಗ್ನಿಯು ರೇಣುಕಾದೇವಿಗೆ ಅಕ್ಕಿ ಕಾಳಿನ ತೂಕದ ಬಂಗಾರ ತರಲು ಈ ರಾಜನಲ್ಲಿಗೆ ಕಳಿಸುತ್ತಾನೆ ಎಂಬ ದುಷ್ಟಾಂತವು, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಹಲವು ಪ್ರಸಂಗಗಳು ಹೂಲಿ ಮತ್ತು ಸುತ್ತ ಮುತ್ತಲಿನ ಸ್ಥಳಗಳ ಕೆಲವು ಘಟನೆಗಳ ದುಷ್ಟಾಂತಗಳಲ್ಲಿ ಉಲ್ಲೇಖಿತವಾಗುವ ಮೂಲಕ ಪುರಾಣ ಚರಿತ್ರೆಯಿಂದಲೂ ಪ್ರಸಿದ್ಧಿ ಹೊಂದಿದ ಗ್ರಾಮವಾಗಿತ್ತು ಹೂಲಿ.
ಆಕರ್ಷಕ ಪಂಚಲಿಂಗೇಶ್ವರ ದೇವಾಲಯ:
ಪಂಚಲಿಂಗೇಶ್ವರ ದೇವಾಲಯವನ್ನು ಪುರಾತತ್ವ ಇಲಾಖೆ ಸಂರಕ್ಷಿಸಿದ್ದು, ಇದೊಂದು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು ಇನ್ನುಳಿದ ದೇವಾಲಯಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಐದು ವಿಶಿಷ್ಟ ಗೋಪುರಗಳನ್ನು ಒಳಗೊಂಡ ಈ ದೇವಾಲಯವನ್ನು ಕ್ರಿ.ಶ.೧೦೪೪ರಲ್ಲಿ ಲಚ್ಚಿಯಬ್ಬರಸಿಯು ಕಟ್ಟಿಸಿದ್ದು ಪೂರ್ವಾಭಿಮುಖವಾಗಿ ಮೂರು. ದಕ್ಷಿಣ ಮತ್ತು ಉತ್ತರಕ್ಕೆ ಮುಖಮಾಡಿದ ಒಂದೊಂದು ಗರ್ಭಗೃಹಗಳನ್ನು ಈ ದೇವಾಲಯ ಒಳಗೊಂಡಿದೆ. ಈ ದೇವಾಲಯದಲ್ಲಿ ೨೦ ವಿಶಾಲವಾದ ಕಂಬಗಳ ಅಂತರಾಳವಿದೆ. ಚಾವಣಿಯಲ್ಲಿ ಕಮಲಗಳನ್ನು ಬಿಡಿಸಲಾಗಿದ್ದು ಎದುರಿನ ವಿಶಾಲವಾದ ಮುಖಮಂಟಪದಲ್ಲಿ ೫೦ ಕಂಬಗಳಿದ್ದು ಇದು ಮೂರು ದಿಕ್ಕಿನಲ್ಲಿ ಪ್ರವೇಶದ್ವಾರಗಳಿಂದ ಕೂಡಿದ ಭವ್ಯವಾದ ಮುಖ ಮಂಟಪ ಹೊಂದಿರುವುದು. ಸುಂದರ ವಿನ್ಯಾಸದ ಆಕರ್ಷಕ ಕೆತ್ತನೆ ಇದರ ವಿಶೇಷ, ಗರ್ಭಗೃಹಕ್ಕೆ ಎದುರಾಗಿ ನಂದಿ, ಅದರ ಬಲಕ್ಕೆ ವಿಷ್ಣು ಎಡಕ್ಕೆ ಗಣೇಶ ವಿಗ್ರಹಗಳಿವೆ.
ಚಿಕ್ಕನಂದೇಶನ ಹುಟ್ಟೂರು:
ಹೂಲಿ ಗ್ರಾಮವನ್ನು ಪ್ರವೇಶಿಸಿದರೆ ಇದು ಶಿಲ್ಪಕಲಾವಶೇಷಗಳ ಸಮುಚ್ಛಯವೆನೋ ಎನಿಸುತ್ತದೆ. ಅವಶೇಷಗಳಾಗಿ ನಿಂತಿರುವ ಇಲ್ಲಿನ ದೇವಾಲಯ ಹಾಗೂ ಕೆರೆಗಳನ್ನು ನೋಡಿದರೆ ಹಿಂದೆ ಎಷ್ಟು ವೈಭವದಿಂದ ಈ ಗ್ರಾಮ ಮೆರೆದಿರಬಹುದು ಎಂದು ಊಹಿಸಬಹುದಾಗಿದೆ. ರಾಘವಾಂಕ ಕಾವ್ಯದ ಲೇಖಕ ಚಿಕ್ಕನಂದೇಶ ಈ ಗ್ರಾಮದವರಾಗಿದ್ದಾರೆ. ಇವರು ಹೂಲಿ ಗ್ರಾಮವನ್ನು ಪುವಲ್ಲಿ ಎಂದು ಬಣ್ಣಿಸಿದ್ದಾರೆ. ಇಲ್ಲಿನ ಶಾಸನಗಳು ಬಿಜ್ಜಳನ ಮಗ ಅಹವ ಮಲ್ಲದೇವ, ತ್ರಿಭುವನ ಮಲ್ಲದೇವನ ಕುರಿತದ್ದಾಗಿವೆ.

No comments:
Post a Comment