Monday, 31 December 2018

ಸಾಕ್ಸ್ ಮಾರುತ್ತಿದ್ದವ, ದೊಡ್ಡ ಕಲಾವಿದನಾದ ಕಹಾನಿ!


ಮಂಜುನಾಥ ಗದಗಿನ 
ಅವು ಕಷ್ಟದ ದಿನಗಳು ದಿನ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಇಂತಹ ಸಮಯದಲ್ಲಿ ನಮ್ಮೂರಿನ ದುರ್ಗಾದೇವಿ ಭಜನಾ ಸಂಘದ ಮೂಲಕ ಜನಪದ, ಭಜನಾ ಪದಗಳನ್ನು ಹಾಡುತ್ತ ಇದ್ದೆ. ಇದೇ ಸಮಯÓÜಕ್ಕೆ ಹರಲಾಪುರದ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಎಸ್.ಎಸ್.ಹಿರೇಮಠ ಎಂಬುವವರು ನನ್ನನ್ನು ಬೀದಿ ನಾಟಕ ಮಾಡಲಿಕ್ಕೆ ಕರೆದರು. ಅಲ್ಲಿಂದ ನನ್ನ ನಟನಾ ಬದುಕು ಆರಂಭವಾಯಿತು. ನಂತರ ವಾರ್ತಾ ಇಲಾಖೆ ಮುಖಾಂತರ ರಾಜ್ಯದ ವಿವಿಧೆಡೆ ಬೀದಿ ನಾಟಕಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಾ ಬಂದೆ. ಈ ವೇಳೆ ವಾರ್ತಾ ಇಲಾಖೆಯಿಂದ ದಿನಕ್ಕೆ ಕೊಡುತ್ತಿದ್ದ 200 ನನಗ ದೊಡ್ಡ ಸಂಬಳ ಆಗಿತ್ತು.
ಹೀಗೆ ಊರೂರು ನಾಟಕ ಮಾಡಿಕೊಂಡ ಹೋದ ಸಮಯದಲ್ಲಿ ಸರಿಯಾದ ಊಟ, ನಿದ್ದೆ ಇರುತ್ತಿರಲಿಲ್ಲ. ಆ ವೇಳೆ ಊರಿನ ಅಂಗನವಾಡಿ, ದೇವಾಲಯಗಳೇ ನಮಗೆ ಆಶ್ರಯ ತಾಣಗಳಾಗಿದ್ದವು. ಇನ್ನು ಊರಿನ ಅಧ್ಯಕ್ಷರು, ಉಪಾಧ್ಯಕ್ಷ, ಕಲಾಪ್ರೇಮಿಗಳು ನೀಡುತ್ತಿದ್ದ ತುತ್ತು ಅನ್ನವೇ ನಮಗೆ ಮೃಷ್ಟಾನ್ನವಾಗಿತ್ತು. ಅದೆಷ್ಟೋ ಸಾರಿ ಸ್ನಾನವನ್ನೇ ಮಾಡದೇ ಗಬ್ಬು ವಾಸನೆ ಮೈಯಿಂದ ಊರೂರು ತಿರಗಾಡಿದ್ದೇನೆ. ಇದೇ ವೇಳೆ ಸಾವಿರಕ್ಕೂ ಅಧಿಕ ಬೀದಿ ನಾಟಕಗಳಲ್ಲಿ ನಟಿಸಿದ್ದೇನೆ. ಆ ಕಷ್ಟದ ದಿನಗಳನ್ನ ನೆನೆದರೆ ಕಣ್ಣೀರು ಕಪಾಳಕ್ಕೆ ಬರುತ್ತವೆ. ಆದ್ರೆ ಕಷ್ಟ ಪಟ್ರೆ ಸುಖ ಇದೆ ಎಂಬ ಮಾತು ನನ್ನ ಬದುಕಿನಲ್ಲಿ ನಿಜ ಆಗಿದೆ.
ನನ್ನೂರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುಲ್ತಾನಪುರ. ಬಹಳ ಚಿಕ್ಕ ಹಳ್ಳಿ. ಹೆಸರು ಸದಾನಂದ ಕಾಳಿ. ಸದ್ಯ ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ಎಂಬ ಸ್ಪರ್ಧೆಯಲ್ಲಿ ಎಲ್ಲರನ್ನು ನಕ್ಕು ನಗಿಸುತ್ತಾ ಇದ್ದೇನೆ. ಈಗಿನ ಸದಾನಂದ ಶಾಲಾದಿನಗಳಲ್ಲಿ ದಡ್ಡ ಸದಾನಂದ ಆಗಿದ್ದ. ಹೀಗಾಗಿಯೇ ಎಸ್ಸೆಸ್ಸೆಲ್ಲಿಯಲ್ಲಿ ನಾಲ್ಕು ವಿಷಯಗಳಲ್ಲಿ ಡುಮ್ಕಿ ಹೊಡೆದಿದ್ದೆ. ನಂತರ ವರ್ಷಕ್ಕ ಒಂದ್ರಂತ ಪಾಸ್ ಆದೆ. ನಂತರ ಬಿಎಡ್ ಮಾಡಿಕೊಂಡೆ. ಮುಂದೆ ಕಲಾ ಸೇವೆ ನನ್ನನ್ನು ಕೈಬೀಸಿ ಕರೆಯಿತು. ಜಾನಪದ, ಭಜನಾ ಪದ, ಬೀದಿ ನಾಟಕ ಅಂತ ರಾಜ್ಯದೆಲ್ಲೆಡೆ ಸುತ್ತಿದೆ. ಇದೇ ವೇಳೆ ನಟನೆಯಲ್ಲಿ ಇನ್ನಷ್ಟು ಪಳಗಬೇಕೆಂದು ಚಿತ್ರದುರ್ಗದ ಸಾಣೇಹಳ್ಳಿ ಶಿವಸಂಚಾರ ಮಠದಲ್ಲಿ ಒಂದು ವರ್ಷದ ನಟನಾ ತರಬೇತಿ ಪಡೆದೆ. ಈ ವೇಳೆ ಮೂರ್ನಾಲ್ಕು ನಾಟಕಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಮಲೆಗಳಲ್ಲಿ ಮದುಮಗಳು ಎಂಬ ಅದ್ಭುತ ಹಾಗೂ ದೀರ್ಘ ನಾಟಕದಲ್ಲಿ ಅಭಿನಯಿಸುವ ಭಾಗ್ಯ ನನಗೆ ದೊರೆಯಿತು. ಇದು ಬರೋಬ್ಬರಿ ಒಂಬತ್ತು ತಾಸಿನ ನಾಟಕ. ಇಂತಹ ನಾಟಕದಾಗ ನನ್ಗ 70 ವರ್ಷ ವಯಸ್ಸಿನ ವೆಂಕಟಪ್ಪ ನಾಯಕ ಎಂಬ ಪಾತ್ರ ದೊರೆಯಿತು. ಈ ನಾಟಕ ನನ್ನ ಬಣ್ಣದ ಬದುಕಿಗೆ ಚಿನ್ನದ ದಿನಗಳನ್ನಾಗಿ ಕಲ್ಪಿಸಿತು.
ಮನೆಗೆಲಸ ಮಾಡಿದ್ದೇನೆ:
ಆರಂಭದ ದಿನಗಳಲ್ಲಿ ಬೆಂಗಳೂರು ನನಗೆ ಹೊಸತು. ಇಲ್ಲಿ ಬಂದಾಗ ಎಲ್ಲವನ್ನು ಅಚ್ಚರಿಯ ಕಂಗಳಲ್ಲಿ ನೋಡುತ್ತಿದ್ದೆ. ಈ ವೇಳೆ ಹೊಟ್ಟೆ ಪಾಡಿಗಾಗಿ ಒಬ್ಬ ಶ್ರೀಮಂತರ ಮನೆಯಲ್ಲಿ ಕೆಲಸದಾಳು ಆಗಿ ದುಡಿಯುತ್ತಿದ್ದೆ. ಅವರ ಮನೆ ಕ್ಲೀನ್ ಮಾಡುವುದು. ಅವರ ಕಾರ್ ತೊಳೆಯುವುದು. ಅವರು ಕಾಲು ಒತ್ತು ಅಂದಾಗ ಕಾಲ ಒತ್ತುವುದು ಮಾಡುತ್ತಿದೆ. ಇದಷ್ಟೇ ಅಲ್ಲದೇ ಬೆಂಗಳೂರು ಮಹಾನಗರದಲ್ಲಿ ಗೊತ್ತಿಲ್ಲದ ಸಂಧಿ ಗೊಂದಿಗಳಲ್ಲಿ ತಿರುಗಾಡಿ ಹೆಲ್ಮೆಟ್, ಗ್ಲಾಸ್, ಸಾಕ್ಸ್‌ಗಳನ್ನು ಮಾರಿ ಜೀವನ ಕಂಡುಕೊಂಡಿದ್ದೇನೆ. 20 ಲೀಟರ್‌ನ ವಾಟರ್ ಕ್ಯಾನ್‌ಗಳನ್ನು ಸೇಲ್ ಮಾಡಿದ್ದೇನೆ. ಇಂದು ಅದೇ ರಸ್ತೆಯಲ್ಲಿ ಓಡಾಡುವಾಗ ಹಿಂದಿನ ದಿನಗಳು ಕಣ್ಣುಂದೆ ಬರುತ್ತವೆ. ನನ್ನ ಈ ಎಲ್ಲ ಕಷ್ಟಗಳು ನನ್ನೊಬ್ಬನಿಗೆ ಗೊತ್ತು. ಈ ನೋವುಗಳನ್ನು ಮತ್ಯಾರ ಮುಂದೆಯೂ ನಾನು ತೋಡಿಕೊಂಡಿಲ್ಲ. ಆದರೆ, ಆ ದೇವರು ನನ್ನ ಕಷ್ಟಗಳಿಗೆ ಸದ್ಯ ಉತ್ತಮ ಪ್ರತಿಫಲ ನೀಡಿದ್ದಾನೆ ಅನಿಸುತ್ತಿದೆ. 
ಮಾಸ್ಟರ್ ಆನಂದ ಕೈ ಹಿಡಿದರು:
ನನ್ನ ನಟನೆ ನೋಡಿ ಮಾಸ್ಟರ್ ಆನಂದ ತಮ್ಮ ಧಾರಾವಾಹಿ ರೋಬೋ ಫ್ಯಾಮಿಲಿಯಲ್ಲಿ ಒಂದು ಅವಕಾಶ ಒದಗಿಸಿಕೊಟ್ಟರು. ನಂತರ ದಿನಗಳಲ್ಲಿ ಮತ್ತಷ್ಟು ಅವಕಾಶಗಳು ನನ್ನನ್ನು ಅರಸಿ ಬಂದವು. ಶ್ರೀಮಾನ ಶ್ರೀಮತಿ ಮತ್ತಿತರ ಧಾರವಾಹಿಗಳಲ್ಲಿ ಅಭಿನಯಿಸಿ ನಾಡಿನ ಜನರ ಹೃದಯಲ್ಲಿ ಒಂದು ಸ್ಥಾನ ಪಡೆದ ಹೆಮ್ಮೆ ನನಗಿದೆ. ಅಷ್ಟೇ ಅಲ್ಲದೇ ಪಟಾಕಿ, ನನ್ನ ನಿನ್ನ ಪ್ರೇಮಕಥೆ, ಮಟಾಶ್, ನರಗುಂದ ಬಂಡಾಯ, ಚರಂತಿ, ಪ್ರಯಾಣಿಕರ ಗಮನಕ್ಕೆ ಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ಅವುಗಳಲ್ಲಿ ಪಟಾಕಿ, ನನ್ನ ನಿನ್ನ ಪ್ರೇಮಕಥೆ ಬಿಡುಗಡೆಯಾಗಿವೆ. ಉಳಿದ ಸಿನೆಮಾಗಳು ಬಿಡುಗಡೆಯಾಗಲು ಸನ್ನದ್ಧ ಇವೆ. ಕಲಾ ಪ್ರೇಮಿಗಳು ಇಲ್ಲಿವರೆಗೂ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲ ನೀಡಿ ಪೋಷಿಸುತ್ತಾರೆ ಎಂಬ ನಂಬಿಕೆ ನನ್ನದು.

Saturday, 29 December 2018

ಶಿಲ್ಪಕಲೆಗಳ ತೊಟ್ಟಿಲು ಹೂಲಿ



- ಮಂಜುನಾಥ ಗದಗಿನ 
ಹೂಲಿ. ಹೆಸರು ಕೇಳಿದರನೇ ಅದೇನೋ ರೋಮಾಂಚನ. ಇತಿಹಾಸ ಪುಟಗಳಲ್ಲಿ ತನ್ನದೇ ವೈಶಿಷ್ಟತೆಗಳ ಮೂಲಕ ನಾಡಿನ ಮನೆ-ಮನದ ಮಾತಾಗಿದ್ದ ಪುಟ್ಟ ಹಳ್ಳಿ.
ನೂರಾರು ದೇವಾಲಗಳು, ನೂರಾರು ಬಾವಿಗಳನ್ನು ತನ್ನೊಡಲಲ್ಲಿ ಅವಿತುಗೊಂಡು ನಾಡಿನ ಗಮನ ಸೆಳೆದ ಹಳ್ಳಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ. ಯಲ್ಲಮ್ಮನ ನಾಡು ಸವದತ್ತಿಯಿಂದ ೧೦ ಕಿಮೀ ದೂರದಲ್ಲಿದೆ ಈ ಐತಿಹಾಸಿಕ ಸ್ಥಳ. ಶಿಲ್ಪಕಲೆ, ವಾಸ್ತುಶಿಲ್ಪ, ಶಾಸನಗಳನ್ನು ಹೊಂದುವ ಮೂಲಕ ಸರ್ವಧರ್ಮ ಸಮನ್ವಯತೆ ಸಾರುವ ಇಂತಹ ಒಂದು ಸ್ಥಳ ಅದೆಷ್ಟೋ ಜನರಿಗೆ ಗೋಚರವಾಗಿಲ್ಲ. ಈ ಗ್ರಾಮದಲ್ಲಿ ಮಧನೇಶ್ವರ, ಅಂಧಕೇಶ್ವರ, ತಾರಕೇಶ್ವರ, ಬನಶಂಕರಿ, ರಾಮೇಶ್ವರ, ನಾರಾಯಣ, ವೀರಭದ್ರ, ಕಲ್ಮೇಶ್ವರ, ಕರಿಸಿದ್ಧೇಶ್ವರ, ಪಂಚಲಿಂಗೇಶ್ವರ ಸೇರಿದಂತೆ ವಾಸ್ತುಶಿಲ್ಪಗಳಿಂದ ಕೂಡಿದ ಹಲವಾರು ಪ್ರಾಚೀನ ದೇವಾಲಯಗಳನ್ನು ಕಾಣಬಹುದು. 
ಹಲವು ಹೆಸರುಗಳು:
ಹೂಲಿ ಗ್ರಾಮ ಪ್ರಾಚೀನ ಕಾಲದಲ್ಲಿ ಬೆಳವುಲ ದೇಶದ ಮಹಾರಾಜರು ಆಡಳಿತ ನಡೆಸುತ್ತಿದ್ದ ಕೇಂದ್ರವಾಗಿದ್ದು, ಹದಿನೆಂಟು ಅಗ್ರಹಾರಗಳ ಮುಕುಟ ರತ್ನದಂತಿತ್ತು ಎಂದು ವರ್ಣಿಸಲಾಗಿದೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ಗುಡ್ಡದ ಪಕ್ಕದಲ್ಲಿ ಅನೇಕ ವಿರೂಪಗೊಂಡ ದೇವಾಲಯಗಳಿವೆ. ಋಷಿಮುನಿಗಳು ಇಲ್ಲಿ ಯಜ್ಞ- ಯಾಗಾದಿಗಳನ್ನು ನಡೆಸಿದ್ದಾರೆ ಎಂಬುದಕ್ಕೆ ಕುರುಹಾಗಿ ಹಾಳಾದ ಅನೇಕ ಯಜ್ಞಕುಂಡ ಸ್ತಂಭಗಳಿವೆ. ಇದನ್ನು ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಲಚೂರಿ ರಾಜರು, ವಿಜಯನಗರದ ಅರಸರು, ಮರಾಠರು ಕಾಲಕಾಲಕ್ಕೆ ತಮ್ಮ ಆಡಳಿತಕ್ಕೆ ಬಳಸಿಕೊಂಡಿರುವುದನ್ನು ಇಲ್ಲಿ ಲಭ್ಯವಾದ ಶಾಸನಗಳು ತಿಳಿಸುತ್ತವೆ.
ರಾಜನಾದ ಕಾರ್ತವೀರ್ಯಾರ್ಜುನ ಕಾಲಾವಧಿಯಲ್ಲಿ ಇದು ರಾಜಧಾನಿಯಾಗಿತ್ತು ಎಂದು ಯಲ್ಲಮ್ಮದೇವಿ ಚರಿತ್ರೆಯಲ್ಲಿ ಉಲ್ಲೇಖಿತವಾಗಿದೆ. ಹೂಲಿಯನ್ನು ಇಲ್ಲಿ ಲಭ್ಯವಾದ ಹಲವಾರು ಶಾಸನಗಳಲ್ಲಿ ಮಹಿಸ್ಪತಿ ನಗರ, ದಕ್ಷಿಣ ಕಾಶಿ, ಪೂವಲ್ಲಿ, ಪುಲಿಪುರ, ಪುಲಿಗ್ರಾಮ, ಚೂಡಾಮಣಿ ಪೂಲಿ, ಹೂಲಿ ಎಂದೆಲ್ಲ ಕರೆಯಲಾಗಿದೆ. ಯಲ್ಲಮ್ಮನ ಚರಿತ್ರೆಯಲ್ಲಿ ಧರ್ಮವರ್ಧನ ಎಂಬ ರಾಜ ಇಲ್ಲಿ ಆಳುತ್ತಿದ್ದನಂತೆ. ಜಮದಗ್ನಿಯು ರೇಣುಕಾದೇವಿಗೆ ಅಕ್ಕಿ ಕಾಳಿನ ತೂಕದ ಬಂಗಾರ ತರಲು ಈ ರಾಜನಲ್ಲಿಗೆ ಕಳಿಸುತ್ತಾನೆ ಎಂಬ ದುಷ್ಟಾಂತವು, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಹಲವು ಪ್ರಸಂಗಗಳು ಹೂಲಿ ಮತ್ತು ಸುತ್ತ ಮುತ್ತಲಿನ ಸ್ಥಳಗಳ ಕೆಲವು ಘಟನೆಗಳ ದುಷ್ಟಾಂತಗಳಲ್ಲಿ ಉಲ್ಲೇಖಿತವಾಗುವ ಮೂಲಕ ಪುರಾಣ ಚರಿತ್ರೆಯಿಂದಲೂ ಪ್ರಸಿದ್ಧಿ ಹೊಂದಿದ ಗ್ರಾಮವಾಗಿತ್ತು ಹೂಲಿ.
ಆಕರ್ಷಕ ಪಂಚಲಿಂಗೇಶ್ವರ ದೇವಾಲಯ:
ಪಂಚಲಿಂಗೇಶ್ವರ ದೇವಾಲಯವನ್ನು ಪುರಾತತ್ವ ಇಲಾಖೆ ಸಂರಕ್ಷಿಸಿದ್ದು, ಇದೊಂದು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು ಇನ್ನುಳಿದ ದೇವಾಲಯಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಐದು ವಿಶಿಷ್ಟ ಗೋಪುರಗಳನ್ನು ಒಳಗೊಂಡ ಈ ದೇವಾಲಯವನ್ನು ಕ್ರಿ.ಶ.೧೦೪೪ರಲ್ಲಿ ಲಚ್ಚಿಯಬ್ಬರಸಿಯು ಕಟ್ಟಿಸಿದ್ದು ಪೂರ್ವಾಭಿಮುಖವಾಗಿ ಮೂರು. ದಕ್ಷಿಣ ಮತ್ತು ಉತ್ತರಕ್ಕೆ ಮುಖಮಾಡಿದ ಒಂದೊಂದು ಗರ್ಭಗೃಹಗಳನ್ನು ಈ ದೇವಾಲಯ ಒಳಗೊಂಡಿದೆ. ಈ ದೇವಾಲಯದಲ್ಲಿ ೨೦ ವಿಶಾಲವಾದ ಕಂಬಗಳ ಅಂತರಾಳವಿದೆ. ಚಾವಣಿಯಲ್ಲಿ ಕಮಲಗಳನ್ನು ಬಿಡಿಸಲಾಗಿದ್ದು ಎದುರಿನ ವಿಶಾಲವಾದ ಮುಖಮಂಟಪದಲ್ಲಿ ೫೦ ಕಂಬಗಳಿದ್ದು ಇದು ಮೂರು ದಿಕ್ಕಿನಲ್ಲಿ ಪ್ರವೇಶದ್ವಾರಗಳಿಂದ ಕೂಡಿದ ಭವ್ಯವಾದ ಮುಖ ಮಂಟಪ ಹೊಂದಿರುವುದು. ಸುಂದರ ವಿನ್ಯಾಸದ ಆಕರ್ಷಕ ಕೆತ್ತನೆ ಇದರ ವಿಶೇಷ, ಗರ್ಭಗೃಹಕ್ಕೆ ಎದುರಾಗಿ ನಂದಿ, ಅದರ ಬಲಕ್ಕೆ ವಿಷ್ಣು ಎಡಕ್ಕೆ ಗಣೇಶ ವಿಗ್ರಹಗಳಿವೆ. 
ಚಿಕ್ಕನಂದೇಶನ ಹುಟ್ಟೂರು:
ಹೂಲಿ ಗ್ರಾಮವನ್ನು ಪ್ರವೇಶಿಸಿದರೆ ಇದು ಶಿಲ್ಪಕಲಾವಶೇಷಗಳ ಸಮುಚ್ಛಯವೆನೋ ಎನಿಸುತ್ತದೆ. ಅವಶೇಷಗಳಾಗಿ ನಿಂತಿರುವ ಇಲ್ಲಿನ ದೇವಾಲಯ ಹಾಗೂ ಕೆರೆಗಳನ್ನು ನೋಡಿದರೆ ಹಿಂದೆ ಎಷ್ಟು ವೈಭವದಿಂದ ಈ ಗ್ರಾಮ ಮೆರೆದಿರಬಹುದು ಎಂದು ಊಹಿಸಬಹುದಾಗಿದೆ. ರಾಘವಾಂಕ ಕಾವ್ಯದ ಲೇಖಕ ಚಿಕ್ಕನಂದೇಶ ಈ ಗ್ರಾಮದವರಾಗಿದ್ದಾರೆ. ಇವರು ಹೂಲಿ ಗ್ರಾಮವನ್ನು ಪುವಲ್ಲಿ ಎಂದು ಬಣ್ಣಿಸಿದ್ದಾರೆ. ಇಲ್ಲಿನ ಶಾಸನಗಳು ಬಿಜ್ಜಳನ ಮಗ ಅಹವ ಮಲ್ಲದೇವ, ತ್ರಿಭುವನ ಮಲ್ಲದೇವನ ಕುರಿತದ್ದಾಗಿವೆ. 

Friday, 28 December 2018

ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಸಾಧನೆ ಶಿಖರ ಏರಿದ ಶ್ರೀಧರ!




ಮಂಜುನಾಥ ಗದಗಿನ
ನಾನು ಆರನೇ ವಯಸ್ಸಿನವನಿದ್ದಾಗ ಅಪಘಾತವಾಗಿ ಬಲಗೈ ಕಳೆಕೊಂಡೆ. ನನಗಾಗ ಅಷ್ಟೊಂದು ತಿಳಿವಳಿಕೆ ಇರಲಿಲ್ಲ. ಆದರೆ, ನನ್ನ ತಂದೆ-ತಾಯಿ ದೃತಿಗೆಡದೆ ನನ್ನ ಆರೈಕೆ ಮಾಡಿದರು. ಆರಂಭದಲ್ಲಿ ನನ್ನ ಎಲ್ಲ ಕೆಲಸಗಳನ್ನು ಅವರೇ ಮಾಡಿದರೂ, ನಂತರ ನಾನೇ ಒಂದೊಂದಾಗಿ ನನ್ನ ಕೆಲಸಗಳನ್ನು ಒಂಟಿಗೈಯಲ್ಲಿ ಮಾಡಲು ಪ್ರಯತ್ನಿಸಿ, ಅದರಲ್ಲಿ ಯಶಸ್ಸು ಸಾಧಿಸಿ ಸ್ವಾವಲಂಬಿಯಾದೆ. ಆದರೆ, ಒಂದು ಕಡೆ ಮಾತ್ರ ಭವಿಷ್ಯತನ್ನು ನೆನೆಸಿಕೊಂಡು, ನನ್ನ ಕಣ್ಣೆದುರು, ನನ್ನ ವಾರಿಗೆಯ ಹುಡುಗರು  ಆಡುತ್ತಿದ್ದನ್ನು ಕಂಡು ಜೀವನದ ಮೇಲೆ ಜಿಗುಪ್ಸೆ ಹುಟ್ಟಿಕೊಂಡು, ಊಟ ತಿಂಡಿ, ಆಟ ಪಾಠಗಳಲ್ಲಿ ನಿರಾಸಕ್ತನಾಗಿ ನನ್ನೊಳಗೆ ನಾನೇ ಕಳೆದು ಹೋಗುತ್ತಿದೆ. ಆದರೆ, ಅಪ್ಪ-ಅವ್ವನಿಗೆ ನನ್ನದೆ ಚಿಂತೆ. ಇದರೊಟ್ಟಿಗೆ ಮೂವರು ಅಕ್ಕಂದಿರ ಹೊಣೆಗಾರಿಕೆ ಬೇರೆ.
ಅದೊಂದು ದಿನ ಗೆಳೆಯರೆಲ್ಲ ಬಂದು ಒತ್ತಾಯ ಮಾಡಿದ್ದರಿಂದ ಇಲ್ಲಿಯ ಬಸವೇಶ್ವರ ಸರ್ಕಲ್ ಹತ್ತಿರದ ಈಜುಗೊಳಗೆ ಹೋದೆ, ಆದರೆ, ನನಗೆ ಈಜು ಬರುತ್ತಿರಲಿಲ್ಲ, ಹೀಗಾಗಿ ಪಕ್ಕದಲ್ಲೆ ಗೆಳೆಯರ ಮೋಜು-ಮಸ್ತಿ ನೋಡುತ್ತಾ, ಒಳ ಒಳಗೆ ಕಲ್ಪನಾ ಲೋಕದಲ್ಲಿ ಕುಳಿತ್ತಿದ್ದೆ. ನನ್ನ ತಳಮಳ ಕಂಡ  ಅಲ್ಲಿಯ ಹುಡುಗರಿಗೆ ಈಜು ಕಲಿಸುತ್ತಿದ್ದ ಮಾಸ್ತರ ಒಬ್ಬರು ಬಂದು ಯಾಕಯ್ಯ ಒಬ್ಬನೇ ಕುಳಿತ್ತಿದ್ದೀಯಾ, ನೀನು ನೀರಿಗಿಳಿತಿಯಾ ಎಂದು ಕೇಳಿದರು. ಹೌದು, ರ್ಸ ನಾನು ಕೂಡಾ ಈಜು ಕಲಿಬೇಕು, ಅವರಂತೆ ನಲಿಬೇಕು ಎಂಬ ಆಸೆ ಇದೆ..ಆದರೆ, ನಾನು ಅವರಂತಲ್ಲ, ಎಂದು ನನ್ನ ಅರ್ಧ ಕೈ ತೊರಿಸಿದೆ. ಅದ್ಕೆ ಅವರು, ಸ್ವಲ್ಪ ಯೋಚಿಸಿ ನಿನಗ ನಿಜವಾಗ್ಲು ಈಜು ಕಲಿಯುವ ಆಸೆ ಇದ್ರೆ, ನಾಳೆ ನಿನ್ನ ಪಾಲಕರನ್ನು ಕರೆದುಕೊಂಡು ಬಾ, ನಾನು ನಿನಗೆ ಈಜು ಕಲಿಸುತ್ತೇನೆ ಎಂದು ಹೇಳಿ ಕಳುಹಿಸಿದರು. ನಾನು ಕೂಡಾ ಅಪ್ಪನ ಮುಂದೆ, ನಡೆದ ಎಲ್ಲ ವಿಷಯ ಹೇಳಿದೆ, ಅದ್ಕೆ ಅಪ್ಪ ತುಸು ಯೋಚನೆ ಮಾಡಿ, ಈಜು ನಿನ್ನಿಂದ ಸಾಧ್ಯ ಎಂದು ಮರು ಪ್ರಶ್ನೆ ಹಾಕಿದರೂ, ನಾನು ಆತ್ಮ ವಿಶ್ವಾಸದಿಂದ ಹ್ಞು ಎಂದೆ, ಮರುದಿನ ನಾನು ಮತ್ತು ನನ್ನಪ್ಪ ಈಜುಗೊಳಕ್ಕೆ ಹೋಗಿ ಗುರುಗಳನ್ನು ಭೇಟಿಯಾದೇವು. ಅಪ್ಪನ ಹತ್ತಿರ ಗುರುಗಳು ಎಲ್ಲವನ್ನು ಮಾತಾಡಿ, ನೀವೆನು ಹೆದರ ಬೇಡಿ, ನಿಮ್ಮ ಮಗನನ್ನು ನನ್ನ ಮಗನಂತೆ ಕಂಡು ಈಜು ಕಲಿಸುತ್ತೇನೆ ಮಾತು ಕೊಟ್ಟು ಕಳುಹಿಸಿದರು. ಅವರೇ ಉಮೇಶ ಕಲಘಟಗಿ ಗುರುಗಳು. ನಂತರ ನಡೆದ ತರಬೇತಿಗಳು ನೆನೆದರೆ, ಈಗಲೂ ಮೈ ಜುಮ್ಮ ಅನ್ನುತ್ತವೆ. ಆದರೆ, ಗುರುಗಳ ಮಾರ್ಗದರ್ಶ ಹಾಗೂ ನನ್ನ ಆತ್ಮ ವಿಶ್ವಾಸ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಕಲಿಬೇಕು ಎಂಬ ಆಸಕ್ತಿ, ಸಾಧಿಸಬೇಕು ಎಂಬ ಛಲ ಇದ್ದರೆ, ಅಂಗವೈಕಲ್ಯ ಯಾವ ಲೆಕ್ಕಕ್ಕು ಇಲ್ಲ. ಆದರೆ, ದೃಢ ಮನಸ್ಸು ಮುಖ್ಯ ಎಂದು ಬೆಳಗಾವಿ ವಿಕಲಚೇತನ ಈಜುಪಟು ಶ್ರೀಧರ ಮಾಳಗಿ ಹೇಳುತ್ತಾರೆ.
ನಾವು  ಮೂಲತಃ ಬೈಲಹೊಂಗಲ ತಾಲೂಕಿನ ಹಣ್ಣೀಕೇರಿ ಗ್ರಾಮದವರು. ತುತ್ತು ಅನ್ನ ಅರಸಿ ಅಪ್ಪ ಬೆಳಗಾವಿಗೆ  ಬಂದರು. ಸದ್ಯ ಉದ್ಯಮ ಭಾಗದ ಒಂದು ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಅಪ್ಪ. ಅವ್ವ ಕೂಡಾ ಅವರಿವರ ಮನೆಗೆಲಸ ಮಾಡಿಕೊಂಡು ಅಪ್ಪನಿಗೆ ನೆರವಾಗಿದ್ದಾಳೆ. ಇಬ್ಬರೂ ಸೇರಿ ದುಡಿದರೂ ತಿಂಗಳಿಗೆ 10 ಸಾವಿರ ಸಂಪಾದನೆ. ಈ ಹಣದಲ್ಲೇ ಸಂಸಾರ ನಡೆಸುವ ಸಾಹಸ ಈ ನಮ್ಮದು. ಆದರೆ, ಇಲ್ಲಿವರೆಗೂ ನನ್ನ ಆಸೆ, ಆಕಾಂಕ್ಷೆಗಳಿಗೆ ಕಾವಲಾಗಿ ನಿಂತು ಉತ್ಸಾಹಕ್ಕೆ ಪ್ರೋತ್ಸಾಹ ತುಂಬುತ್ತಿದ್ದಾರೆ.

ಆರ್ಥಿಕ ಸಹಾಯ:

ನನಗೆ  2012 ರಿಂದ 2017ರವಗೆಗೂ ಬೆಳಗಾವಿ ಉದ್ಯಮ ಭಾಗ ಪೋಲಿಯೊ ಹೈಡಾನ್ ಕಂಪನಿ ಆರ್ಥಿಕ ಸಹಾಯ ನೀಡುತ್ತಾ ಬಂದಿತ್ತು. ಆದರೆ, ನನ್ನ ಪ್ರತಿಭೆ ಗುರುತಿಸಿ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಗೋ ಸ್ಪೋರ್ಟ್ಸ್ ಪೌಂಡೇಶನ್ 2017ರಿಂದ ಕ್ರೀಡಾ ವೆಚ್ಚ ಭರಿಸುತ್ತಿದೆ. ವರ್ಷಕ್ಕೆ 3 ಲಕ್ಷದವರೆಗೂ ನೀಡಿ ಪ್ರೋತ್ಸಾಹಿಸುತ್ತಿದೆ. ಸದ್ಯ ನಾನು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಕಾಮರ್ಸನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ತರಬೇತುದಾರರಾದ ರಾಘವೇಂದ್ರ ಅನ್ವೇಕರ, ರಾಜೇಶ ಶಿಂಧೆ, ಪ್ರಸಾರ ತೆಂಡೂರ್ಲ್ಕ ಇವರ ಸಹಾಯ ಇಲ್ಲದೇ ಹೋಗಿದ್ದರೆ, ನಾ ಯಾರೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇವರ ಸಹಾಯ ಎಂದಿಗೂ ಮರೆಯಲಾರದ್ದು.
ವಿಶ್ವ ಪ್ಯಾರಾ ಈಜುನಲ್ಲಿ ಭಾಗಿ:
ಜೂ. 7 ರಿಂದ 10ರವರೆಗೂ ಜರ್ಮನ ದೇಶದ ಬರ್ಲಿನ್‌ನಲ್ಲಿ ನಡೆದ ವಿಶ್ವ ಪ್ಯಾರಾ ಈಜು ಸ್ಪಧೆಯಲ್ಲಿ ಭಾಗವಹಿಸಿ 100 ಮೀರ್ಟ್ ಪ್ರೀ ಸ್ಟೈಲ್‌ನಲ್ಲಿ 1 ನಿಮಿಷ 10 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ 11ನೇ ಸ್ಥಾನ ಪಡೆದು ಕೊಂಡೆ, ಅದು ಒಂದೇ ಸೆಕೆಂಡನಲ್ಲಿ ಎರಡು ಸ್ಥಾನ ಕೈತಪ್ಪಿತು. ಬರ್ಟ ಪ್ಲೈನಲ್ಲಿ 1.16 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ 5ನೇ ಸ್ಥಾನ ಪಡೆದುಕೊಂಡು ಏಶಿಯನ್ ಗೇಮ್ಸ್‌ಗೆ ಕ್ವಾಲಿಪೈ ಆಗಿದ್ದೇನೆ. ಈ ಸ್ಪರ್ಧೆಯಲ್ಲಿ 34 ದೇಶಗಳ 30ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಇವರೆಲ್ಲೂರಿಗೂ ಕಠಿಣ ಸವಾಲೊಡ್ಡಿದ ಹೆಮ್ಮೆ ನನಗಿದೆ.

ಅದ್ಭುತ್ ಸಾಧನೆ:

ನಾನು ಮೊದಲ ಬಾರಿಗೆ 2012ರಲ್ಲಿ ಚನೈನಲ್ಲಿ ನಡೆದ 12ನೇ ಪ್ಯಾರಾ ಓಲಂಪಿಕ್ ಈಜು ಹಾಗೂ ವಾರ್ಟ ಪೋಲೋ ಸ್ಪರ್ಧೆ ಮಾಡಿದೆ. ಇಲ್ಲಿ ಅಮೋಘ ಪ್ರದರ್ಶನ ನೀಡಿ 2 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕ ಪಡೆಯುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ನನ್ನನ್ನು ನಾನು ಗುರುತಿಸಿಕೊಂಡರ. ನಂತರ 2013ರಲ್ಲಿ ಬೆಂಗಳೂರಿನಲ್ಲಿ ನಡೆದ 13ನೇ ಪ್ಯಾರಾ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಈಜು ಹಾಗೂ ವಾರ್ಟ ಪೋಲೋದಲ್ಲಿ 4 ಬೆಳ್ಳಿ ಪದಕ ಸಂಪಾದಿಸಿದೆ.. ಇನ್ನೂ ಮಧ್ಯಪ್ರದೇಶದ ಇಂದೋರದಲ್ಲಿ ನಡೆದ 14ನೇ ಅಂಗವಿಕಲ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನ, 1 ಕಂಚು, 2017ರಲ್ಲಿ ಉದಯಪುರಲ್ಲಿ ನಡೆದ 17ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ 5 ಚಿನ್ನ ನನ್ನದಾಯಿತು. 2017ರಲ್ಲಿ ದುಬೈನಲ್ಲಿ ನಡೆದ ಏಶಿಯನ್ ಯುಥ್ ಪ್ಯಾರಾ ಗೇಮ್ಸ್‌ನಲ್ಲಿ 1 ಬೆಳ್ಳಿ, 2 ಕಂಚಿಗೆ ಕೊರಳೊಡ್ಡಿದೆ. ಇದೆಲ್ಲವನ್ನು ನೋಡಿ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಪುರಸ್ಕರಿಸಿವೆ. ಮತ್ತಷ್ಟು ಸಾಧನೆ ಮಾಡಲು ಹುಮ್ಮಸ್ಸು ತುಂಬಿವೆ.
ಸಾಧನೆಗೆ ಅಂಗವೈಖಲ್ಯ ಅಡ್ಡಿಯಲ್ಲ. ನಾನು ಕೂಡಾ ಅಂಗವೈಖಲ್ಯ ಇದೇ

Thursday, 27 December 2018

ತೋರಗಲ್ ಕೋಟೆ ಕಂಡವರ‌್ಯಾರು?



ಮಂಜುನಾಥ ಗದಗಿನ ,
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಬಗ್ಗೆ ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಕೋಟೆ ಕೂಡ ಏಳು ಸುತ್ತಿನ ಕೋಟೆ ಆಗಿತ್ತು ಎಂದು ಹೇಳಲಾಗುತ್ತದೆ.
ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ ಕೋಟೆಯ ಕಥೆ. ಏಳು ಸುತ್ತಿನ ಕೋಟೆ ಇದಾಗಿತ್ತಂತೆ. ಈಗ ಐದು ಆವರಣಗಳನ್ನು ಮಾತ್ರ ಕಾಣಲು ಸಾಧ್ಯ. ನಾಲ್ಕು ದಿಕ್ಕಿನಲ್ಲೂ ಒಂದೊಂದು ಬುರುಜು (ಗೊಮ್ಮಟ) ಇದೆ. ಕೋಟೆ ಪ್ರವೇಶಕ್ಕೆ ಮೊದಲು ನಾಲ್ಕು ದ್ವಾರಗಳು ಇದ್ದವಂತೆ. ಸದ್ಯ ಪೂರ್ವದ ದ್ವಾರ ಮಾತ್ರ ಬಳಕೆಯಲ್ಲಿದೆ. ಒಳಭಾಗದಲ್ಲಿ ಕಟ್ಟೆಯಿದ್ದು, ದಣಿದು ಬಂದವರು ಅರೆಕ್ಷಣ ಕುಳಿತರೆ ಸಾಕು, ಜೋಂಪು (ನಿದ್ರೆ) ಆವರಿಸುತ್ತದೆ. ಒಳಗಿನ ಕಟ್ಟಡವೊಂದರ ಮೇಲೆ ಇಬ್ಬರು ಡುಮ್ಮಣ್ಣರ ಕೆತ್ತನೆಗಳಿವೆ. ಕೋಟೆಯ ಒಳಭಾಗ ಸುಮಾರು ನೂರು ಎಕರೆಯಷ್ಟು ವಿಸ್ತಾರವಾಗಿದೆ. ಮಧ್ಯದಲ್ಲಿರುವ ರಾಜವಾಡೆ ಪ್ರದೇಶವೇ ಐದು ಎಕರೆಗಳಷ್ಟು ದೊಡ್ಡದಾಗಿದೆ. ಪಕ್ಕದಲ್ಲೇ ಭೂತಂಕುಶ ಅರಸ ನಿರ್ಮಿಸಿದ ಭೂತನಾಥ ದೇವಾಲಯ ಇಲ್ಲಿನ ಆಕರ್ಷಣೆ. 
ಇದು ಚಾಲುಕ್ಯ ಶೈಲಿಯಲ್ಲಿದೆ. ವಿಶಾಲ ಪ್ರಾಂಗಣ, ಗರ್ಭಗುಡಿ, ಸುಖಾಸನ ಸಭಾಮಂಟಪ, 12 ಕಂಬಗಳ ನವರಂಗ, ಗರ್ಭಗೃಹದಲ್ಲಿರುವ ಶಿವಲಿಂಗ ಅದರ ಎದುರಿಗೆ ನಂದಿ, ಸುತ್ತಲಿನ ಗೋಡೆಯ ಮೇಲಿನ ಶಿಲ್ಪಕಲೆ ಮನಸೂರೆಗೊಳ್ಳುತ್ತವೆ. ಶಿವ ದೇವಾಲಯ, ದುರ್ಗಾದೇವಾಲಯ, ಗಣಪತಿ ವಿಜಯನಗರ ವಾಸ್ತು ಶೈಲಿಯ ಮಾದರಿಯಲ್ಲಿವೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ. ಈ ಕೋಟೆಯಲ್ಲಿ ಕನ್ನಡ ಹಾಗೂ ಪರ್ಶಿಯನ್ ಭಾಷೆಯ ಶಾಸನಗಳನ್ನು ಕಾಣಬಹುದಾಗಿದೆ. ಸುತ್ತಲ ಪರಿಸರವನ್ನು ಮಲಪ್ರಭೆ ಸುಂದರವನ್ನಾಗಿಸಿದ್ದಾಳೆ.
ಅಡಗುದಾಣಗಳು:
ಕೋಟೆಯ ಹೊರಗಿನ ಚಲನವಲನ ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿ 300 ಅಡಿಗಳಿಗೆ ಒಂದರಂತೆ ಅಡಗುದಾಣಗಳಿವೆ. ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ಫಿರಂಗಿಗಳನ್ನು ಅಳವಡಿಸಿದ್ದ ಕುರುಹುಗಳಿವೆ. ಎರಡು ಫಿರಂಗಿಗಳು ಕೋಟೆ ಆವರಣದಲ್ಲಿ ಈಗಲೂ ಮಣ್ಣು ತಿನ್ನುತ್ತಾ ಬಿದ್ದುಕೊಂಡಿವೆ. ಪಾಳುಬಿದ್ದ ಅರಮನೆ, ಕುದುರೆ ಲಾಯ, ನ್ಯಾಯಾಲಯ ಕಟ್ಟಡ, ನೆಲಮಹಡಿ ಗೋದಾಮುಗಳೆಲ್ಲ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿವೆ. ಮಾರುಕಟ್ಟೆಯಂತೆ ಹೋಲುವ ಭಗ್ನಾವಶೇಷವೊಂದು ಇಲ್ಲಿದ್ದು ಪ್ರಾಯಶಃ ಅದು ಆಗಿನ ಕಾಲದ ಶಸ್ತ್ರಾಗಾರ ಆಗಿದ್ದಂತೆ ತೋರುತ್ತದೆ. 
ಶಿವಾಜಿ ಸೈನ್ಯದ ಬೀಡು:
ಭೂತಾಯಶ ಎಂಬ ರಾಜ ಕ್ರಿ.ಶ.1100ರಲ್ಲಿ ತೋರಗಲ್ ಗ್ರಾಮವನ್ನು ನಿರ್ಮಾಣ ಮಾಡಿದ. ಅವರೇ ಈ ಊರಿನ ಸುತ್ತ ಬೃಹದಾಕಾರದ ಕೋಟೆಯನ್ನೂ ಕಟ್ಟಿಸಿದರು ಎಂಬ ಪ್ರತೀತಿಯಿದೆ. ಛತ್ರಪತಿ ಶಿವಾಜಿ ಮಹಾರಾಜರು ರಾಜ್ಯ ವಿಸ್ತರಣೆ ಮಾಡಲು ದಂಡಯಾತ್ರೆ ಕೈಗೊಂಡಾಗ ಅಪ್ಪಾಜಿ ಸುರೋ ಮತ್ತು ಮಾಲಾಜಿ ಮೀರಾಸಾಹೇಬ್ ಭೋಸಲೆ ಎಂಬ ಯೋಧರ ನೇತೃತ್ವದಲ್ಲಿ 12 ತುಕಡಿ ಸೈನ್ಯವನ್ನು ದಕ್ಷಿಣದ ಕಡೆಗೆ ಕಳುಹಿಸಿಕೊಟ್ಟಿದ್ದರು. ಆ ಸೈನ್ಯ ತೋರಗಲ್ ಕೋಟೆಯಲ್ಲೇ ಬಿಡಾರ ಹೂಡಿತ್ತು. ರಾಜ್ಯ ವಿಸ್ತರಣೆಗೆ ಅದನ್ನೇ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು, ನರಗುಂದ ಸಂಸ್ಥಾನವನ್ನು ತನ್ನ ಕೈವಶ ಮಾಡಿಕೊಂಡಿತ್ತೆಂದು ದಾಖಲೆಗಳು ಹೇಳುತ್ತವೆ.
ರಾಜರ ಆಳ್ವಿಕೆ:
ತೋರಗಲ್ ನಾಡು ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳ ಸಿಂಗದೇವ, ಕಲ್ಯಾಣ ಚಾಲುಕ್ಯರು, ಮರಾಠರು(ಶಿವಾಜಿ), ವೆಂಕಟಪ್ಪ, ವಿಜಾಪುರದ ಅಲಿ ಆದಿಲ್‌ಶಾಹಿ, ನವಲಗುಂದ ಸಂಸ್ಥಾನ, ಕರವೀರದ ಛತ್ರಪತಿ ಶಂಭು, ಪೇಶ್ವೆ, ಶಿಂಧೆ ಮನೆತನಗಳಿಂದ 11ನೇ ಶತಮಾನದಿಂದ 19ನೇ ಶತಮಾನದವರೆಗೂ ಆಳ್ವಿಕೆಗೆ ಒಳಪಟ್ಟಿತ್ತು. ಚಾಲುಕ್ಯ ಶೈಲಿಯ ದೇವಾಲಯಗಳನ್ನು ಹೊಂದಿದ ಇಲ್ಲಿನ ದೇವಾಲಯಗಳಲ್ಲಿ ಕ್ರಿ.ಶ.1184 ರಲ್ಲಿ ಭೂತಂಕುಶ ದೊರೆಯು ಭೂತನಾಥ ದೇವಾಲಯವನ್ನು ನಿರ್ಮಿಸಿದ್ದ. ಇತಿಹಾಸಕಾರ ಡಾ.ಪ್ಲೀಟ್ ಅವರ ಸಂಶೋಧನೆಯ ಪ್ರಕಾರ, ಬುಕ್ಕರಾರ್ಯನ ಆಳ್ವಿಕೆ ಹಾಗೂ ಚಾಲುಕ್ಯರು, ಬಿಜಾಪುರದ ಸುಲ್ತಾನರು, ವಿಜಯನಗರ ಅರಸರು, ಸೇವುಣರು, ಮರಾಠಾ ಪೇಶ್ವೆಗಳ ಆಳ್ವಿಕೆಯನ್ನು ಈ ಸ್ಥಳದಲ್ಲಿ ನಡೆಸಿದ್ದು ಏಳು ಸುತ್ತಿನ ಕೋಟೆ ಆಯಾ ಅರಸರ ಕಾಲಕ್ಕೆ ಹಂತಹಂತವಾಗಿ ಕಟ್ಟಲ್ಪಟ್ಟಿದೆ. ಮರಾಠರ ಕಾಲಕ್ಕೆ ಕೊಲ್ಲಾಪುರ ಮಹಾರಾಜ ತನ್ನ ಕುಟುಂಬದ ಸದಸ್ಯರೊಂದಿಗೆ ಇಲ್ಲಿ ವಾಸ್ತವ್ಯ ಮಾಡಿ ಶಿಂಧೆ ಮಹಾರಾಜರ ಆಳ್ವಿಕೆಯನ್ನು ಕಂಡಿತು. ಉದಯ ಸಿಂಹ ನರಸೋಜಿರಾವ್ ಎಂಬ ಕೊಲ್ಲಾಪುರದ ಮಹಾರಾಜ ಸ್ವಾತಂತ್ರ್ಯಪೂರ್ವದಲ್ಲಿ ಆಳಿದ ಕೊನೆಯ ಮಹಾರಾಜ. ಸ್ವಾತಂತ್ರ್ಯ ನಂತರ ಇವರ ಆಡಳಿತ ಅಂತ್ಯವಾಯಿತು.

Tuesday, 25 December 2018

ಬದುಕು ಗೆದ್ದ ಸಾಧಕಿಗೆ ಸಲಾಂ

ಮಂಜುನಾಥ ಗದಗಿನ 
ಮದುವೆಯಾಗಿ ಆರು ತಿಂಗಳಿಗೆ ತಾನು ಎಚ್‌ಐವಿ ಸೊಂಕಿತೆ ಎಂದು ಗೊತ್ತಾದರೂ, ಅದನ್ನು ದಿಟ್ಟತನದಿಂದ ಎದುರಿಸಿ, ಬದುಕು ಕಟ್ಟಿಕೊಂಡದ್ದು ಅಷ್ಟೇ ಅಲ್ಲದೇ ತನ್ನೊಡನೆ ಹಲವು ಎಚ್‌ಐವಿ ಸೊಂಕಿತ ಮಕ್ಕಳಿಗೆ ಆಶ್ರಯ ನೀಡಿ ‘ಮಹಾ’ತಾಯಿಯಾಗಿ ಈ ಜಗವೇ ಮೆಚ್ಚುವಂತೆ ಮುನ್ನುಗ್ಗುತ್ತಾ, ಇತರೆ ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ ಈ ಮಹಿಳೆ. 
ಹೌದು! ಇವರು ಬೆಳಗಾವಿಯ ನಾಗರತ್ನ ಸುನೀಲ ರಾಮಗೌಡ. ಇವರದ್ದು ಬಾಲ್ಯ ವಿವಾಹ. ಕೇವಲ 16 ವರ್ಷ ವಯಸ್ಸಿನಲ್ಲೆ ಮದುವೆ ಮಾಡಿಕೊಡಲಾಯಿತು. ಸಮಾಜ ಎಂದರೆ ಏನು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ತಿಳಿವಳಿಕೆ ಇಲ್ಲದ ವಯಸ್ಸು. ಇಂತಹ ವಯಸ್ಸಿನಲ್ಲೇ ಮದುವೆಯಾದ ಕಾರಣ ಜೀವನವನ್ನು ಅಷ್ಟೊಂದು ಆನಂದದಿಂದ ಕಳೆಯಲಿಲ್ಲ. ಆಗ ತಾನೇ ಮದುವೆಯಾಗಿ ಗಂಡ ಮನೆಗೆ ಹೋಗಿದ್ದ ಇವರು, ಆರು ತಿಂಗಳ ಬಳಿಕ ಯಾವುದೋ ಕಾರಣಕ್ಕೆ ವೈದ್ಯರನ್ನು ಸಂಪರ್ಕಿಸಿದರೂ, ಈ ಭೇಟಿ ಅವರ ಬಾಳಲ್ಲಿ ಬರ ಸಿಡಿಲ್ಲನೇ ತಂದೊಡ್ಡಿತು. ಹೌದು! ವೈದ್ಯರ ತಪಾಸಣೆ ನಡೆಸಿ ನಿಮಗಿಬ್ಬರಿಗೂ ಎಚ್‌ಐವಿ ಇದೆ  ಜೀವಿತಾವಧಿ ಕಡಿಮೆ ಇದೆ ಎಂದು ಹೇಳಿ ಬಿಟ್ಟರು. ವೈದ್ಯರ ಈ ಮಾತು ಕೇಳಿ ಇವರು ಆಕಾಶವೇ ಕಳಚಿ ಬಿದ್ದಂತಾಗಿತ್ತು ಎಂದು ಹೇಳುವ ನಾಗರತ್ನಾ ಅವರು, ಮುಂದೆ ಬದುಕು ಕಟ್ಟಿಕೊಂಡ ಪರಿ ಮಾತ್ರ ಅದ್ಭುತ್.  
ದೇವರ ರೂಪದಲ್ಲಿ ಸಿಕ್ಕ ವೈದ್ಯ:
ಪತಿ ಹಾಗೂ ಪತ್ನಿ ಇಬ್ಬರಿಗೂ ಎಚ್‌ಐವಿ ಇದೆ ಎಂಬ ಸಂಗತಿ ಗೊತ್ತಾದಾಕ್ಷಣ ಇಬ್ಬರು ಅದೇಷ್ಟೂ ದಿನಗಳ ಕಾಲ ಈ ಜಗತ್ತಿನ ಮುಂದೆ ಕಾಣಿಸಿಕೊಳ್ಳಲಿಲ್ಲ. ಆದರೆ, ಬದುಕ ಬೇಕಲ್ಲ ಎಂಬ ಒಂದೇ ಒಂದು ಆಸೆಯಿಂದ ಇಬ್ಬರು ಗಟ್ಟಿ ಧೈರ್ಯ ಮಾಡಿ ದುಡಿಯಲು ಆರಂಭಿಸಿದೇವು. ಹೀಗೆ ನಾಲ್ಕುಗಳು ಕಳೆದ ಬಳಿಕ ಅದೊಂದು ದಿನ ಮಗುಬೇಕೆಂದು ಒಬ್ಬ ವೈದ್ಯರನ್ನು ಸಂಪರ್ಕ ಮಾಡಿದೇವು. ಆ ವೈದ್ಯರು ಋಣಾತ್ಮಕ ಮಗು ಪಡೆಯಬಹುದು ನೀವು ಯಾವುದೇ ಕಾರಣಕ್ಕೂ ಧೈರ್ಯಗುಂದಬೇಡಿ ಎಂದು ಮತ್ತಷ್ಟು ಆತ್ಮವಿಶ್ವಾಸ ತುಂಬಿದರು. ಹೀಗೆ ಈ ವೈದ್ಯರು ನೀಡಿದ ಸಲಹೆ ನಾವು ಋಣಾತ್ಮಕ ಗಂಡು ಮಗು ಪಡೆದೇವು. ಇದಾದ ನಂತರ ಬದುಕಬೇಕು. ಮಗನಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡಬೇಕು, ಎಚ್‌ಐವಿ ತಿಳಿವಳಿಕೆ ಬಗ್ಗೆ ಈ ಸಾರಿ ಹೇಳಬೇಕೆಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಮುನ್ನುಗ್ಗುತ್ತಾ ಬಂದಿದ್ದೇನೆ. ಕಳೆದ ನಾಲ್ಕು ವರ್ಷದ ಹಿಂದೆ ನನ್ನ ಪತಿ ಇಹಲೋಕ ತ್ಯಜೀಸಿದ್ದಾರೆ. ಯಾರ‌್ಗೊ ಅಪಘಾತ ಆದಾಗ ರಕ್ತ ಕೊಡಾಕ ಹೋದಾಗ ಬೆಡ್ ಟು ಬೆಡ್ ರಕ್ತ ಹಾಕಿದ್ರಂತ. ಆವಾಗ ಈ ಕಾಯಿಲೆ ಬಂದಿತ್ತು ಎಂದು ಹೇಳುತ್ತಾರೆ ನಾಗರತ್ನ. ಈಗ ಆ ಮಗನಿಗೆ 16 ವರ್ಷ 8ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಮಹಾತಾಯಿ:
16 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ತಮ್ಮ ಎಲ್ಲ ನೋವುಗಳನ್ನು ಮರೆತು, ತಮ್ಮೊಟ್ಟಿಗೆ ಎಚ್‌ಐವಿ ಸೊಂಕಿತ 10 ಹೆಣ್ಣು ಮಕ್ಕಳನ್ನು ಆಶ್ರಯ ನೀಡಿ ಸಲಹುತ್ತಿದ್ದಾರೆ. ಈ ಮಕ್ಕಳಿಗೆ ವಸತಿ, ಊಟ, ಬಟ್ಟೆ ಅಷ್ಟೇ ಅಲ್ಲದೇ ಆಸಕ್ತಿ ಇದ್ದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ ಸದ್ಯ ಐದು ಮಕ್ಕಳು ನರ್ಸಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ. ಇನ್ನುಳಿದ ಐದು ಹೆಣ್ಣು ಮಕ್ಕಳಿಗೆ ಜೀವನೋಪಾಯ ಮಾರ್ಗಗಳನ್ನು ಕಲಿಸುತ್ತಾ, ಕರಕುಶಲ ಕಲೆಗಳನ್ನು ಕಲಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೇ ಶಾಲೆ-ಕಾಲೇಜು, ಗ್ರಾಮಗಳಿಗೆ ಹೋಗಿ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎಚ್‌ಐವಿ ಪೀಡಿತ ಮಹಿಳೆಯರಿಗಾಗಿ ಸ್ವಯಂ ಸೇವಾ ಸಂಸ್ಥೆಯೊಂದರನ್ನು ಸ್ಥಾಪಿಸಿ ಕಾರ್ಯೋನ್ಮುಕರಾಗಿದ್ದಾರೆ. ಅರ್ಚನಾ ಪದ್ಮನ್ನವರ ಹಾಗೂ ಪ್ರಮಿಳಾ ಕಂದ್ರೋಲ್ಲಿ ಅವರ ಸಹಾಯದ ಮೂಲಕ ಆಶ್ರಯ ಫೌಂಡೇಶನ್ ಸ್ಥಾಪಿಸಿ ಈ ಮೂಲಕ ನೊಂದವರ ಬಾಳಲ್ಲಿ ಬೆಳಕು ಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷ ಅಂದರೆ ಈ ಪೌಂಡೇಶನ್ ಹದಿಹರೆಯದ ಎಚ್‌ಐವಿ ಸೊಂಕಿತ ಹಾಗೂ ಎಚ್‌ಐವಿ ವಿಧವೆಯರಿಗೆ ಆರೈಕೆ ಮನೆಯಾಗಿ ಕೆಲಸ ಮಾಡುತ್ತಿದೆ. ಇಂತಹ ನೊಂದವರ, ಸಮಾಜ ತಿರಸ್ಕರಿಸಿದವರಿಗೆ ಆಶ್ರಯ ನೀಡುವ ರಾಜ್ಯದ ಏಕೈಕ ಪೌಂಡೇಶನ್ ಎಂಬ ಹೆಗ್ಗಳಿಗೆ ಆಶ್ರಯ ಪೌಂಡೇಶನ್. ಸ್ಥಳೀಯ ದಾನಿಗಳು ನೀಡವ ಹಣವೇ ಇವರಿಗೆ ಆಧಾರ ಹಾಗೂ ಇವರು ಕೆಲವು ಕಂಪನಿಗಳಿಗೆ ಸೆಮಿನಾರ್‌ಗೆ ಹೋದಾಗ ಬರುವ ಗೌರವ ಧನವೇ ಇದಕ್ಕೆಲ್ಲ ಆರ್ಥಿಕ ಬಲ. 
ಬಂದ ಪ್ರಶಸ್ತಿ:
ಇವರು ನಡೆಸುತ್ತಿರುವ ಬದುಕಿನ ಸ್ಫೂರ್ತಿಗೆ ಹಾಗೂ ಮಾಡುತ್ತಿರುವ ಸಮಾಜ ಕಾರ್ಯಕ್ಕೆ 2016ರಲ್ಲಿ ರಾಜ್ಯ ಸರ್ಕಾರದ ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯಪ್ರಶಸ್ತಿ, 2017ರಲ್ಲಿ ನ್ಯಾಶನಲ್ ಆದರ್ಶ ಮಹಿಳೆ, ಅನಾಥ ರಕ್ಷಕಿ ಪ್ರಶಸ್ತಿ, ಉತ್ತಮ ಸಮಾಜಿಕ ಕಾರ್ಯಕರ್ತೆ ಪ್ರಶಸ್ತಿ, ವಿಶೇಷ ಸಾಧಕಿ ಹೀಗೆ 40ಕ್ಕೂ ಹೆಚ್ಚು ಪ್ರಶಸ್ತಿಗಳು ಇವರನ್ನು ಅರಸಿ ಬರುವ ಮೂಲಕ ತಮ್ಮ ಮೌಲ್ಯವನ್ನು ವೃದ್ಧಿಸಿಕೊಂಡಿವೆ. ಅಷ್ಟೇ ಅಲ್ಲದೇ ಇವರ ಈ ಸೇವೆಗೆ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಪುರಸ್ಕರಿಸಿವೆ. 
ಇವರ ಈ ಹೋರಾಟದ ಬದುಕು ಇತರೆ ಮಹಿಳೆಯರಿಗೆ ಆದರ್ಶವಾಗಲಿ, ಇವರು ಇನ್ನೂ ನೂರಾರು ವರ್ಷ ಇದ್ದು, ಸಮಾಜ ಸೇವೆ ಮಾಡಲಿ ಎಂಬುವುದು ಸಮಾಜದ ಆಶಯ.

Monday, 24 December 2018

ಜಾತ್ರಿನ ಒಂದ್ ಸಂಗಮ

ಮಂಜುನಾಥ ಗದಗಿನ





ಹೌದ್, ಜಾತ್ರಿ ಅಂದ್ರ ನಮ್ಮ ಕಡೆಯಲ್ಲ ಬಾಳ್ ಖುಷಿ. ಯಾವಾಗ ಯಾವಾಗ ಜಾತ್ರಿ ಬರ್ತಾವ ಅಂತ ಕ್ಯಾಲೆಂಡರನ್ಯಾಗ ಗುರ್ತ ಹಾಕಿ. ಜಾತ್ರಿ ಹದನೈದ ದಿವಸ ಇರ್ತ ಬಿಗರಗ ಪೋನ್ ಹಾಯಿಸಿ, ನೋಡ್ರಿ ಬಿಗ್ರ ನಮ್ಮ ಊರಾಗ ಜಾತ್ರಿ ಐತಿ ತಪ್ಪಸದ ಮನ್ಯಾಗಿನ ಮಂದಿ ಸೇರಿ ಜಾತ್ರಿ ನಾಲ್ಕೈದ ದಿನ ಇರ್ತ ಬರಬೇಕ ಅಂತ ಆಮಂತ್ರಣ ಕೊಟ್ಟ ಮುಗಿಸ್ಸಾತಾರ. ಇನ್ನ ಜಾತ್ರಿ ಇರೋ ಮನ್ಯಾಗ ಬಿಗರ ಬರ್ತಾರ ಅಂತ ಖಡಕ್ ರೊಟ್ಟಿ ಗುರ್ಯಾಳ, ಸಿಂಗಾ ಚಟ್ನಿ ಮಾಡಿ ಇಟ್ಟ ಬಿಡ್ತಾರ. ಜಾತ್ರಿ ಸನಿಕ ಬಂದಾಂಗ ಮನ್ಯಾಗ ಇರೋ ಮಕ್ಳ ಮರಿಗಳು ದೊಡ್ಡ ದೊಡ್ಡ ಪಟ್ಟಿ ಮಾಡ್ಕೊಂಡ ಮನಿ ಬಂದಿಗೇಲ್ಲಾ ನನಗ ಕಾರ್ ಬೇಕ, ಬುಲ್ಡೋಜರ್ ಬೇಕ, ಅದು ದೊಡ್ಡದ ಬೇಕ ಅಂತ ಹೇಳಿ. ರಾತ್ರಿ ನಿದ್ದ್ಯಾಗೂ ಕನವರಿಸ್ಕೊಂತ ಮಕ್ಕೋತಾವ ಮಕ್ಳ. ಇನ್ನ ಜಾತ್ರಿ ಒಂದ ದಿನ ಇದ್ದಾಗ. ಬಿಗರಿಂದ ಮನಿ ತುಂಬಿ ತುಳಕ್ಯಾಡತಾವ್. ಮಕ್ಳ ಮರಿ ಸೇರಿ ತಲಿ ಬಂವ್ ಅನ್ನೊ ತರಾ ಜಗಳಾ ಮಾಡಿ, ತಲಿ ಹಾಫ್ ಮಾಡಿ ಹಾಕ್ತಾರ. ಇನ್ನ ಜಾತ್ರಿ ದಿನಾ ಅಂತು ಜಾತ್ರ್ಯಾಗಿಂತ ಮನ್ಯಾಗ ದೊಡ್ಡ ಜಾತ್ರಿ ನಡಿದರತೈತಿ. ಮನ್ಯಾಗಿಂದ ಹೆಣ್ಮಕ್ಳನ ತಯಾರ ಆಗೋ ಹೊತ್ತಗೆ ತೇರ ಎಳದ ಹೋಗಿರತೈತಿ. ಹಂಗ್ ರಡಿ ಆಗ್ತಾರ. ಜಾತ್ರಿ ಒಳಗ ಹೋದ್ರ ಮುಗಿತ ಸೂರ್ಯ ಈಕಡೆಯಿಂದ ಆ ಕಡೆ ಯಾವಾಗ ಹೋದ, ಕಿಸೆದಾಗಿಂದ್ ರೊಕ್ಕ ಎಲ್ಲಿ ಹೋದು ಎಂಬ ಯಕ್ಷ ಪ್ರಶ್ನೆ ಮಾತ್ರ ತಲೆಯಲ್ಲಿ ಗೂಡ ಕಟ್ಟಿರತೈತಿ. ಇದ ಹೊತ್ನ್ಯಾಗ್ ಅದೆಷ್ಟೋ ವರ್ಷಗಳ ಹಿಂದ್ ನೋಡಿದ ಮುಖಗಳು ಸಡನ್ ಆಗಿ ಪ್ರತ್ಯಕ್ಷ ಆಗಿ ಬಿಡ್ತಾವ್. ಎದ್ಯಾಗ ಏನೋ ಒಂದ್ ಖುಷಿ. ಒಂದಾನೊಂದ ಕಾಲದಲ್ಲಿ ಒಂದ್ ಡೆಸ್ಕನ್ಯಾಗ, ಒಂದ್ ದಾರ್ಯಾಗ, ಒಂದ್ ಟಿಫನ್ ಡೆಬ್ಬ್ಯಾಗ ಊಟ ಮಾಡಿ ಆಡಿದ ನೆನಪ ಬಂದ ಬಿಡ್ತಾವ್ ಹಂಗ್ ಸಲಿಗಿಲೇ ಏನಲೇ ದೋಸ್ಗತ, ಎಷ್ಟ ವರ್ಷ ಆತ ನೋಡಿ, ಮತ್ತ ಹೆಂಗ್ ಅದೀ ಅನ್ನೊ ಸಮಾಚಾರ ಬಂದ ಹೋಗ್ತಾವ. ಕಲಿತ ನೆನಪುಗಳ ಸರಮಾಲೆ ಸದ್ದು ಗದ್ದಲ ಮಾಡಿ ಹೋಗ್ತಾವ್. ಎದಿ ಭಾರ ಆಗಿ ಒಲ್ಲದ ಮನಸ್ಸಿನಿಂದ ಬೈ ಲೇ ಅನ್ನೊಕ್ಕೊಂತ ನಮ್ಮ ದಾರಿ ನಾವ್ ಹಿಡಿತಿವಿ. ಆದ್ರ ದೋಸ್ತ್ರ ಭೇಟ್ಟಿ ಆಗಿದ್ದ ಖುಷಿ ಮಾತ್ರ ಕೋಟಿ ರೊಕ್ಕ ಕೊಟ್ಟು ಬರಂಗಿಲ್ಲ. ಆದ್ರ ಇದ್ಕ ಕಾರಣ ಆಗಿದ್ದ ಮಾತ್ರ ಅದ ಜಾತ್ರಿ. ಅದೇಷ್ಟೋ ವರ್ಷದಿಂದ ಮನೆ ಕಡೆ ಸುಳಿಯದ ಬಿಗರ ಬಂದ ಮುಖ ತೋರಿಸಿದ್ದಕ ಕಾರ ಇದೇ ಜಾತ್ರಿ. ಪಾಗಲ ಪ್ರೇಮಿಗಳ ಮಾಜಿ ಲವರ್ ಅದೇ ಬಳಿ ಸಾಲನ್ಯಾಗ ಕಂಡದ್ದಕ ಕಾರಣ ಇದ ಜಾತ್ರಿ. ಒಟ್ಟ್ನಲ್ಲಿ ಜಾತ್ರಿ ಅಂದ್ರ ಒಂದ್ ಸಂಗಮ. ಯಾವಾಗ್ಲೋ, ಎಲ್ಲೋ, ಎಂತೋ, ಎಂದೋ, ಅದೇಷ್ಟೋ ವರ್ಷಗಳಿಂದ ನೋಡದ, ಭೇಟ್ಟಿಯಾಗದ ಮುಖಗಳ ದರ್ಶನ ಒದಗಿಸುವ ವೇದಿಕೆ. ಭಾವನೆಗಳ ಸಮ್ಮಿಳನದ ಓಂಕಾರವೇ ಈ ಜಾತ್ರಿ.
(ಗೊಡಚಿ ಜಾತ್ರಿ ಕೊಟ್ಡ ಒಂದಿಷ್ಟ ನೆನಪ ಚಂದ ಚಂದ)

Saturday, 22 December 2018

ಓ ರೈತ

ಮಂಜುನಾಥ ಗದಗಿನ

ಉತ್ತುವ ಕೈಗಳ
ಹಿಂದೆ ಬಿಚ್ಚಿ
ಹೇಳಲಾರದ ನೋವಿದೆ,
ಬತ್ತಿ ಬರಡಾಗುವ
ಮುನ್ನ ಬೆಳಕಾಗ ಬಾರದೇ
ರೈತರ ಬಾಳಲೊಮ್ಮೆ.

ಎಷ್ಟೇ ಒತ್ತಿ ಹೇಳಿದರೂ
ಬಿಚ್ಚುತ್ತಿಲ್ಲ ಸರ್ಕಾರಗಳು
ಬಾಯನ್ನು, ಭೂ ತಾಯಿ
ಮಾತ್ರ ಮರೆತಿಲ್ಲ ರೈತರನ್ನು.

ಸಾಲಕ್ಕೆ ಹೆದರಿ ಸಾಯದಿರು,
 ಸತ್ತು ಹೆಂಡತಿ, ಮಕ್ಕಳ
ಅನಾಥರನ್ನಾಗಿಸದಿರು,
ಸಾವೇ ಶಾಶ್ವತವಲ್ಲ ಕಷ್ಟಗಳಿಗೆ
ಇದ್ದು ಜಯಸು ನೀ ಕಷ್ಟಗಳ
ಕೋಟೆಗಳನೊಮ್ಮೆ.

ನೀ ಬದುಕಿ ಬೆರಗಾಗಿಸು
ನೋಡುವ ಕಣ್ಣುಗಳನೊಮ್ಮೆ.

Wednesday, 19 December 2018

ಬಡತನದಲ್ಲಿ ಅರಳಿದ ಕಲಾ ಪ್ರವೀಣ ಈ "ಚಿಲ್ಲರೆ ಮಂಜ"


ಮಂಜುನಾಥ ಗದಗಿನ
ಕಲಿಯುವ ಆಸಕ್ತಿ ಇದ್ರೆ, ಮನುಷ್ಯ ಎತ್ತರಕ್ಕೆರಬಲ್ಲ. ಸಾಧಿಸುವ ಮನಸ್ಸಿದ್ದರೆ 
ಬಡತನ ಕೂಡಾ ಸಾಥ್ ನೀಡ ಬಲ್ಲದು ಎಂಬುದಕ್ಕೆ ಇಲ್ಲೋಬ್ಬ ಕಲಾವಿದ ನಿದರ್ಶನವಾಗಿದ್ದಾರೆ.
ಹೌದು! ಅವರೇ ಹಾವೇರಿ ಜಿಲ್ಲೆಯ ಮಲಗುಂದ ಎಂಬ ಪುಟ್ಟ ಹಳ್ಳಿಯ ಮಂಜುನಾಥ ಗುಡ್ಡದವರ. ಯಾವುದೇ ಕಲಾ ತರಬೇತಿ ಇಲ್ಲದ ಆಸಕ್ತಿಯಿಂದ ಕಲಿತ ನಟನಾ ಕಲೆಯ ಮೂಲ ಇಂದು ಕಿರುತೆರೆಯ ಮೇಲೆ ನಟನೆ ಮಾಡುತ್ತಾ ನಾಡಿನ ಮನೆ-ಮನದ ಮಾತಾಗಿದ್ದಾರೆ ಮಂಜುನಾಥ ಅಲಿಯಾಸ್ ಚಿಲ್ಲರೆ ಮಂಜಾ. 
ಬಡತನ:
ಇಂದು ಮಂಜಾಭಾರತದಲ್ಲಿ ತಮ್ಮ ನಟನೆ ಮೂಲಕ ಲಕ್ಷಾಂತರ ಜನರನ್ನು ನಕ್ಕು ನಗಿಸುತ್ತಿರುವ ಇವರ ಹಿಂದೆ ಹೇಳಲಾರದಷ್ಟು ನೋವಿನಯಾತನೆ‌ ಇದೆ. ತಾಯಿ ಗಂಗಮ್ಮ. ತಂದೆ ಬಸಪ್ಪ. ಇವರಿಗೆ ನಾಲ್ಕು ಜನ ಮಕ್ಕಳು. ಮೂರು ಗಂಡು, ಒಂದು ಹೆಣ್ಣು. ಮಂಜುನಾಥ ಮೊದಲನೇ ಮಗ. ಮನೆಯಲ್ಲಿ ಬಡತನ ಇದ್ದ ಕಾರಣ ತಾಯಿ ಗಂಗಮ್ಮ ಪ್ರತಿದಿನ ಕೂಲಿನಾಲಿ‌ ಮಾಡಿ ಈ ಮಕ್ಕಳನ್ನು ಸಾಕಿ ಸಲುಹಿದ್ದಾಳೆ. ಮಂಜುನಾಥ ಅವರಿಗೆ ಚಿಕ್ಕ ವಯಸ್ಸಿನಲ್ಲೇ ನಾಟಕ,ಸಿನಿಮಾ ನೋಡುವ ಕಯಾಲಿ. ಈ ಕಯಾಲಿಯೇ ಮುಂದೊಂದು ದಿನ ದೊಡ್ಡ ನಟನಾಗಿಸಿದ್ದು ಈ ಇತಿಹಾಸ.
ಬದುಕು ಬದಲಿಸಿದ ಧಾರವಾಡಃ
ಮಂಜುನಾಥ ಅವರು ಹೆಚ್ಚಿನ ಶಿಕ್ಷಣ ಕಲಿಯಲು ಶಿಕ್ಷಣ ಕಾಶಿ ಧಾರವಾಡಕ್ಕೆ ಬಂದರು. ಇಲ್ಲಿ ಬಿಎ ಪದವಿಯಲ್ಲಿ ಓದುತ್ತಿದ್ದಾಗ. ಆಗಾಗಾ ಇಲ್ಲಿಯ ರಂಗಾಯಣಕ್ಕೆ ಭೇಟಿ ನೀಡುತ್ತಿದ್ದರೂ,ಇಂತಹ ಭೇಟಿಯಿಂದ ಇವರಿಗೆ ಹಲವು ರಂಗ ಕಲಾವಿದರ ಪರಿಚಯವಾಯಿತು. ನಂತರ ದಿನಗಳಲ್ಲಿ ಶಿಕ್ಷಣದೊಟ್ಟಿಗೆ ಹವ್ಯಾಸಿ ರಂಗ ತಂಡಗಳೊಟ್ಟಿಗೆ ಸೇರಿ ನಟನೆ ಕಲಿತು ಅದರಲ್ಲಿ ಪಾರಂಗತರಾದರು. ಮನೆಯಲ್ಲು ಬಡತನ ಇದ್ದ ಕಾರಣ ಶಿಕ್ಷಣ, ರೂಮ್ ಬಾಡಿಗೆ ಹೀಗೆ ದಿನನಿತ್ಯದ ಹತ್ತು ಹಲವು ಖರ್ಚುಗಳಿಗೆ ದುಡ್ಡು ಹೊಂದಿಸಬೇಕಾಗಿತ್ತು. ಇದಕ್ಕಾಗಿಯೇ ಮಂಜುನಾಥ ಅವರು ಶಿಕ್ಷಣ, ನಟನೆಯೊಂದಿಗೆ ಬಿಡುವಿನ ವೇಳೆಯಲ್ಲಿ ಅಲ್ಲಲ್ಲಿ ಕೆಲಸ ಮಾಡಿ ತಮ್ಮ ಖರ್ಚು ವೆಚ್ಚ ನಿಗಿಸಿಕೊಳ್ಳುತ್ತಿದ್ದರು.

ಸಕಲ ಕಲಾವಲ್ಲಭ:
ಮಂಜುನಾಥ ಸಕಲ ಕಲಾವಲ್ಲಭರು. ಶಿಕ್ಷಣ, ನಟನೆ, ಕೆಲಸ ಇದರೊಟ್ಟಿಗೆ ಇವರು ಉತ್ತಮ ಬರಹಗಾರ ಕೂಡಾ. ಇವರೊಲ್ಲೊಬ್ಬ ಕವಿ ಕೂಡಾ ಇದ್ದಾನೆ. ಇದೇ ಕಾರಣ ಇವರು ಬರೆದ ಹಲವು ಕವನ, ಲೇಖನಗಳು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಹಾಗೂ ವೆಬ್ ತಾಣಗಳಲ್ಲಿ ಪ್ರಕಟಗೊಂಡಿವೆ. ಇದೇ ಹವ್ಯಾಸದಿಂದಲೇ ಮಂಜುನಾಥ ಅವರು www.ಡಾಕ್ಟರ್.com ಎಂಬ ಹಾಸ್ಯಮಿಶ್ರಿತ ನಾಟಕವನ್ನು ರಚನೆ ಮಾಡಿದ್ದಾರೆ. ಈ ನಾಟಕವನ್ನು ರಾಜ್ಯದ ಹಲವೆಡೆ ಪ್ರದರ್ಶನ ಮಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದಾರೆ. ಈ ನಾಟಕ ೩೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

ಕೈ ಹಿಡಿದ ನಟನೆ:
ಹೀಗೆ ಯಾವುದೇ ರಂಗ ತರಬೇತಿಯೂ ಇಲ್ಲದೇ ಬರೀ ಆಸಕ್ತಿ ಹಾಗೂ ಶ್ರದ್ಧೆಯಿಂದ ಕಲಿತ ನಟನೆ ಇವರ ಬದುಕನ್ನೇ ಬದಲಾಯಿಸಿದೆ. ಅದೊಂದು ದಿನ ಹುಬ್ಬಳ್ಳಿಯಲ್ಲಿ ನಡೆದ ಮಜಾಭಾರತ ಆಡಿಷನ್ ನಲ್ಲಿ ಪಾಲ್ಗೊಂಡರು. ಇವರ ನಟನೆ ನೋಡಿ ಅಲ್ಲಿ ಜಡ್ಜ್ ಶಬ್ಬಾಶಗಿರಿ ಕೊಟ್ಟು ಸೆಲೆಕ್ಷನ್ ಮಾಡಿದರು. ನಂತರ ಇವರ ನಟನೆ ಎಷ್ಟು ಪರಿಪಕ್ವವಾಯಿತು ಎಂದರೆ, ಮಜಾಭಾರತ ೨, ಕಾಮಿಡಿ ಟಾಕೀಸ್, ಸದ್ಯ ಮಜಾಭಾರತ-೨ರಲ್ಲಿಯೂ ಉಳಿಸಿಕೊಂಡಿದ್ದಾರೆ. ಇದೇ ವೇಳೆ ಇವರ ನಟನೆ ಮೆಚ್ಚಿ ಹಲವು ಸಿನಿಮಾಗಳಿಗೆ ಅವಕಾಶಗಳು ಒದಗಿ ಬಂದಿವರ. ಆದರೆ, ಸಮಯದ ಅಭಾವ ಹಾಗೂ ಇನ್ನಷ್ಟು ನಟನೆಯಲ್ಲಿ ಫಳಗಬೇಕೆಂಬ ಆಸೆಯಿಂದ ಬಂದ ಅವಕಾಶಗಳನ್ನು ತಳ್ಳಿ ಹಾಕಿ, ನಟನೆಯಲ್ಲಿ ಮತ್ತಷ್ಟು ಪರಕಾಯ ಪ್ರವೇಶ ಮಾಡುತ್ತಿದ್ದಾರೆ. ಬೆಳ್ಳಿತೆರೆಗೆ ಬಂದು ಅಲ್ಲಿಯೂ ಕಥೆ ಹಾಗೂ ಡೈರಕ್ಷನ್ ಮಾಡಬೇಕು ಎಂಬ ಹೆಬ್ಬಕೆ ಇದೆ ಎಂದು ಹೇಳುತ್ತಾರೆ ಮಂಜುನಾಥ. ಬಡತನದಲ್ಲೇ ಪ್ರತಿಭೆಗಳಿರಿದೂ ಎಂಬ ವಾದಕ್ಕೆ ಮಂಜುನಾಥನ ಕಲಾಪ್ರತಿಭೆಯೆ ಸಾಕ್ಷಿ. ಇಂತಹ ಹಳ್ಳಿ ಹಾಗೂ ಬಡತನದಲ್ಲಿ ಬೆಳೆದ ಪ್ರತಿಭೆಗಳು ಮತ್ತಷ್ಟು ಬೆಳಕಿಗೆ ಬರಲಿ. ಮಂಜುನಾಥ ಅವರು ಮತ್ತಷ್ಟು ಮಗದಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಆಶಯ ಕಲಾಪ್ರಿಯರದ್ದು.



Tuesday, 18 December 2018

ಉಕದಲ್ಲೆ ಹೆಚ್ಚು ಸ್ವಾಗತ ಕಮಾನು ಹೊಂದಿದ ವೀರಭದ್ರೇಶ್ವರ



ಮಂಜುನಾಥ ಗದಗಿನ 
ನಾಡಿನ ಹಲವು ಧಾರ್ಮಿಕ ಕ್ಷೇತ್ರಗಳು ತಮ್ಮದೆಯಾದ ವಿಶಿಷ್ಟ, ವಿಭಿನ್ನ ಇತಿಹಾಸ, ಆಚರಣೆಗಳಿಂದ ಎಲ್ಲರ ಮನೆ-ಮನದ ಮಾತಾಗಿವೆ. ಅದೇ ರೀತಿ ಇಲ್ಲೊಂದು ಪುಣ್ಯಕ್ಷೇತ್ರ ಕೂಡಾ 11 ಸ್ವಾಗತ ಕಮಾನುಗಳನ್ನು ಹೊಂದಿದೆ. ಈ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಸ್ವಾಗತ ಕಮಾನು ಹೊಂದಿದ ಹೆಗ್ಗಳಿಕೆ ಪಾತ್ರವಾಗಿದೆ. 
ಹೌದು! ಅದುವೇ ಬೆಳಗಾವಿಯಿಂದ 80 ಕಿಮೀ ದೂರದ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ದೇವಾಲಯ. ನಾಡಿನ ಅನೇಕ ಪುಣ್ಯಕ್ಷೇತ್ರಗಳ ಪೈಕಿ ಈ ಗೊಡಚಿ ಕ್ಷೇತ್ರವು ಒಂದು. ತನ್ನದೇ ಇತಿಹಾಸ, ಪರಂಪರೆಯ ಮೂಲಕ ರಾಜ್ಯಾದ್ಯಂತ ಭಕ್ತವೃಂದವನ್ನು ಹೊಂದಿ ಗಮನ ಸೆಳೆಯುತ್ತಿದೆ. ಕಟಕೋಳ, ರಾಮದುರ್ಗ, ಸುನ್ನಾಳ, ಚಂದರಗಿ, ಮುನವಳ್ಳಿ, ಸವದತ್ತಿ, ಗೊಡಚಿಯಲ್ಲೇ ಮೂರು ಕಮಾನಗಳನ್ನು ಹೊಂದಿದೆ. ಈ ಮೂಲಕ ಉಕದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.
ವೀರಭದ್ರೇಶ್ವರ ದೇವಸ್ಥಾನದ ಮುಖ್ಯ ದ್ವಾರವು  ಪೂರ್ವದಿಕ್ಕಿಗಿದೆ. ಇದರ ಮುಂಭಾಗದಲ್ಲಿ ಹಳ್ಳವೊಂದು ಹರಿದಿದೆ. ವೀರಭದ್ರನ ದೇವಸ್ಥಾನದ ಮುಂದೆ ವಿಶಾಲವಾದ ಮೈದಾನವಿದೆ. ಈ ಮೈದಾನಕ್ಕೆ ಲಿರಣಬಾಜಿಳಿ ಪ್ರದೇಶವೆಂದು ಹಳ್ಳಕ್ಕೆ ಲಿಹಿರೇಹಳ್ಳವೆಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಶರಣರು ಯುದ್ಧ ಸಮಯದಲ್ಲಿ ವಿಜಯಶಾಲಿಗಳಗಿದ್ದರಿಂದ ಈ ಹಳ್ಳದಲ್ಲಿ ವಿಜಯಿಯಾದ ಶರಣರ ಪಾದದೂಳಿಯಿಂದ ಹರಿದು ಬಂದ ಜಲ ಪವಿತ್ರ ಪಾದೋದಕದ ಮಹಿಮೆಯನ್ನು ಹೊಂದಿದೆ ಎಂಬುವುದು ಭಕ್ತರ ನಂಬಿಕೆ. ಕಾರಣ ಈ ಕ್ಷೇತ್ರಕ್ಕೆ ಬಂದ ಭಕ್ತರೆಲ್ಲ ಈ ಜಲದಲ್ಲಿ ಮಿಂದ ಬಳಿಕವೆ ವೀರಭದ್ರನ ದರ್ಶನಕ್ಕೆ ಹೋಗುವುದು ವಾಡಿಕೆ ಇತ್ತು ಆದರೆ, ಇಂದು ಈ ಹಳ್ಳದಲ್ಲಿ ನೀರು ಇಲ್ಲದ ಕಾರಣ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ನಲ್ಲಿಗಳಲ್ಲಿ ಅಥವಾ ಸ್ನಾನ ಗೃಹಗಳಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ವೀರಭದ್ರನ ದೇವಸ್ಥಾನದ ಹಿಂದೆ ಮಡಿವಾಳ ಮಾಚಿದೇವ(ಮುದೀವೀರಣ್ಣ)ನ ದೇವಸ್ಥಾನ, ಎಡಗಡೆ ಭದ್ರಕಾಳಿ ದೇವಸ್ಥಾನ ಇರುವುದರಿಂದ ಕ್ಷೇತ್ರಕ್ಕೆ ಮತ್ತಷ್ಟು ಮೆರಗು ಬಂದಿದೆ.
ಆಗ ಶಿಕರವೀರಷಿರ:
ಗೊಡಚಿ ಕ್ಷೇತ್ರವು ಬಾದಾಮಿ ಚಾಲುಕ್ಯರ ಕೀರ್ತಿವರ್ಮನಿಂದ ಹಿಡಿದು ಕೊಲ್ಹಾಪೂರ ಸಂಸ್ಥಾನದ ಭಾಗಕ್ಕೆ ಶಿಕರವೀರಷಿರ ನಾಡೆಂದು ಹೆಸರು ಬಂದಿದೆ ಎಂದು ಗೊಡಚಿ ಗ್ರಾಮದಲ್ಲಿ ದೊರೆತ ತಾಮ್ರಪಟದಲ್ಲಿ ಶಿಕೆತ್ತಿಅರಸಷಿ ಎಂಬುವುದರಿಂದ ತಿಳಿದು ಬಂದಿದೆ ಎಂಬುದು ಇತಿಹಾಸಕಾರರ ಅನಿಸಿಕೆ. ಕೊಲ್ಹಾಪೂರ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದ ಈ ಕ್ಷೇತ್ರದಲ್ಲಿ ಕಲ್ಯಾಣದ ಕ್ರಾಂತಿಯು ನಿರಂತರವಾಗಿ ನಡೆದ ಶರಣರು ಉಳವಿ ಕ್ಷೇತರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಜ್ಜಳನ ಸೈನ್ಯ ಶರಣರನ್ನು ಪುನಃ ಬೆನ್ನಟ್ಟಿದ ಸಮಯದಲ್ಲಿ ಶರಣರು ಕತ್ತಿಹಿಡಿದು ಹೋರಾಟ ಮಾಡಿ ಬಿಜ್ಜಳನ ಸೈನ್ಯವನ್ನು ಎದುರಿಸಿದ ಸ್ಥಳ ಈ ಕ್ಷೇತ್ರದಲ್ಲಿ, ಶರಣರಿಗೆ ವಿಜಯಲಭಿಸಿದ್ದರಿಂದ ಇದನ್ನು ಶಿಕರವೀರಷಿರ ನಾಡೆಂದು ಕರೆಯಲಾಗುತ್ತಿದೆ ಎಂಬುವುದನ್ನು ಇತಿಹಾಸ ಸಾರಿ ಹೇಳುತ್ತಿದೆ.
ಗೊಡಚಿ ಹೆಸರು ಹೇಗೆ ಬಂತು:
ಗೊಡಚಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀವೀರಭದ್ರನ ದೇವಸ್ಥಾನವು ಅಂದು ಗಿಡಕಂಟೆಗಳಿಂದ ತುಂಬಿಕೊಂಡಿತ್ತು. ಅದರಲ್ಲಿಯೂ ವಿಶೇಷವಾಗಿ ಕೊಡಚಿಕಂಟೆಗಳಿಂದ ತುಂಬಿಕೊಂಡಿತ್ತು. ಅದಕ್ಕೆ ಇದು ಮೊದಲು ಕೊಡಚಿಕ್ಷೇತ್ರವೆಂದಾಯಿತು. ಕೊಡಚಿಯೇ ಇಂದು ರೂಢಿಯಲ್ಲಿ ಲಿಕಳಿಕಾರ ಮಾಯವಾಗಿ ಲಿಗಳಿಕಾರ ಆಗಮನದಿಂದಾಗಿ ಗೊಡಚಿ ಕ್ಷೇತ್ರವಾಗಿ ಮಾರ್ಪಟ್ಟಿದೆ. ಗೊಡಚಿಯ ವೀರಭದ್ರನ ಕ್ಷೇತ್ರವು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವರ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ. ಅಲ್ಲದೆ ಬಹುಜನರಿಗೆ ವೀರಭದ್ರನು ಮನೆದೇವರು, ಕುಲದೇವರು ಅಲ್ಲದೆ ಆರಾಧ್ಯ ದೇವರಾಗಿ ವೀರಭದ್ರನಿದ್ದಾನೆ.  ಉತ್ತರಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಇಲ್ಲಿ ದರ್ಶನಕ್ಕೆ ಬಂದು ಹೋಗುತ್ತಾರೆ.
ಕಟ್ಟಡದ ವೈಶಿಷ್ಟ್ಯ:
ವೀರಭದ್ರೇಶ್ವರ ದೇವಸ್ಥಾನದ ಕಟ್ಟಡವು ದ್ರಾವಿಡ ಮಾದರಿ ಹೋಲುತ್ತಿದ್ದು, ಚಾಲುಕ್ಯರ ಮಾದರಿಯ ಶಿಲ್ಪವನ್ನು ಕಾಣಬಹುದಾಗಿದೆ. ಅಲ್ಲದೆ ದೇವಸ್ಥಾನಕ್ಕೆ ಆಕರ್ಷಕ ಕಳಸವನ್ನು ಮಾಡಲಾಗಿದೆ. ಅಲ್ಲದೆ ದೇವಸ್ಥಾನದ ಒಳಾಂಗಣದಲ್ಲಿ ಕಲ್ಲಿನಿಂದ ನಿರ್ಮಾಣ ಮಾಡಿರುವ ಎತ್ತರವಾದ ದೀಪಸ್ತಂಭವನ್ನು ನೋಡಬಹುದು. ಇದೆಲ್ಲವನ್ನು ಗಮನಿಸಿದಾಗ ಈ ಕಟ್ಟಡ 17ನೇ ಶತಮಾನದಲ್ಲಿ ಕಟ್ಟಿದ ದೇವಸ್ಥಾನವೆಂದು ಪ್ರಾಚ್ಯವಸ್ತು ಸಂಶೋಧಕರ ಅಭಿಪ್ರಾಯ.
---
22 ರಿಂದು ಜಾತ್ರೆ:
ಹೊಸ್ತಲ ಹುಣ್ಣಿಮೆಯ ದಿನವಾದ ಡಿ.22ರಿಂದ ಐದು ದಿನಗಳ ಕಾಲ ಗೊಡಚಿ ವೀರಭದ್ರ ದೇವರ ಜಾತ್ರೆ ವಿಜೃಂಭನೆಯಿಂದ ನಡೆಯಲಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾಧಿಗಳು ಜಾತ್ರೆಗೆ ಆಗಮಿಸಿ ಪುನೀತರಾಗುತ್ತಾರೆ. ಜಾತ್ರೆಯ ವಿಶೇಷವೆಂದರೆ ಬೆಳವಲು(ಬಳೂಲ)ಕಾಯಿ, ಬೋರೆ (ಬಾರಿ) ಹಾಗೂ ಬಾಳೆಹಣ್ಣುಗಳ ಮಾರಾಟ ಈ ಜಾತ್ರೆಯ ವಿಶೇಷವಾಗಿದೆ. ಈ ಜಾತ್ರೆಯಲ್ಲಿ ಮಾರುವಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಜಾತ್ರೆಯಲ್ಲಿಯೂ ಈ ಹಣ್ಣುಗಳು ಮಾರಾಟವಾಗುವದಿಲ್ಲ. ಹಣ್ಣುಗಳಲ್ಲದೆ ಅಷ್ಟೇ ದೊಡ್ಡ ಪ್ರಮಾಣದಲ್ಲಿ ವಿಭೂತಿ, ರುದ್ರಾಕ್ಷಿ ಹಾಗೂ ಕುಂಕುಮದ ಮಾರಾಟ ಕೂಡಾ ಆಗುತ್ತದೆ.

Sunday, 8 April 2018

ಬಣಗುಡುತ್ತಿರುವ ಬನಶಂಕರಿ..!

ಮಂಜುನಾಥ ಗದಗಿನ

ಹುಬ್ಬಳ್ಳಿ ಇತಿಹಾಸದ ಮಜಲೂಗಳನ್ನು ಕೆದಕಿದಷ್ಟು ಗತ ಇತಿಹಾಸದೊಂದಿಗೆ ಇಲ್ಲಿನ ಕಲಾ ಸಿರಿವಂತಿಕೆ ಬಿಚ್ಚುತ್ತಾ ಸಾಗುತ್ತಿವೆ. ಆದರೆ ಇವುಗಳ ಸೂಕ್ತ ನಿರ್ವಹಣೆ ಹಾಗೂ ಪ್ರಚಾರದ ಕೊರತೆಯಿಂದ ಅವಸಾನದತ್ತ ಸಾಗುತ್ತಿರುವುದು ಕೆದಕರ ಸಂಗತಿ.
ಬಾದಾಮಿ ಚಾಲುಕ್ಯರ ಕಾಲದ 11ನೇ ಶತಮಾನದ ದೇವಾಲವೊಂದು ಹುಬ್ಬಳ್ಳಿಯಿಂದ 8 ಕಿ.ಮಿ ದೂರದ ಅಮರಗೋಳದಲ್ಲಿದೆ. ಅಮರಗೋಳ ಬಸ್ಟಾಫ್‌ಯಿಂದ ಸ್ಟೇಶನ್ ರೋಡ ಮಾರ್ಗವಾಗಿ ದಾಟಿ, ದುಂಡಿ ಬಸವೇಶ್ವರ ಗುಡಿಯ ಬಲಕ್ಕೆ ಹೋದರೆ ಮಾರುತಿ ದೇವಸ್ಥಾನ ಸಿಗುತ್ತದೆ ಇದನ್ನು ಸಾಗಿ ಮುಂದೆ ಬಂದರೆ ಮರಿಗೌಡರ ಓಣಿಯ ವಿಶಾಲ ಅಂಗಳದಲ್ಲಿ ಕಾಣ ಸಿಗುವುದೇ ಶಿಥಿಲಾವಸ್ಥೆ ತಲುಪಿರುವ ಐತಿಹಾಸಿಕ ಕಲಾ ಶ್ರೀಮಂತಿಕೆಯಿಂದ ಕೂಡಿರುವ ಬನಶಂಕರಿ ದೇವಾಲಯ.
ಅನಾಧರ, ಅನಾಥ..!
ಈ ದೇವಾಲಯ ಭಾರತೀಯ ಪುರಾತತ್ವ ಇಲಾಖೆಯ ಅಧಿನಕ್ಕೆ ಒಳಪಟ್ಟಿದೆ. ಆದರೆ ಇಲಾಖೆಯ ಅನಾಧರ ವರ್ತನೆಯಿಂದ ದೇವಸ್ಥಾನ ಅನಾಥವಾಗಿರುವುದು ಆರಂಭದಲ್ಲೇ ಗೊತ್ತಾಗುತ್ತದೆ. ಐತಿಹಾಸಿಕ ದೇವಾಲಯ ಇದೇ ಎಂಬ ಒಂದೇ ಒಂದು ಮಾರ್ಗಸೂಚಿಯಾಗಲಿ, ಫಲಕವಾಗಲಿ ಕಾಣಸಿಗುವುದಿಲ್ಲ. ಹುಬ್ಬಳ್ಳಿ-ಧಾರವಾಡ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ದಾಟಿಯೇ ಈ ದೇವಾಲಯಕ್ಕೆ ಸಾಗಬೇಕು. ಇಲ್ಲಿ ಒಂದು ಐತಿಹಾಸಿಕ ದೇವಾಲಯ ಇದೆ ಎಂದು ಫಲಕ ಹಾಕಿದ್ದರೆ, ದಿನ ನಿತ್ಯ ಓಡಾಡುವ ಲಕ್ಷ್ಯಾಂತರ ಪ್ರಯಾಣಿಕರಿಗೆ ದೇವಾಲಯ ಇರುವಿಕೆ ಗೊತ್ತಾಗುತ್ತಿತ್ತು. ಇದರಿಂದ ದೇವಾಲಯ ಪ್ರೇಕ್ಷಣಿಯ ಸ್ಥಳವಾಗುತ್ತಿತ್ತು ಎಂಬ ಮಾತಿನಲ್ಲಿ ಅನುಮಾನವಿಲ್ಲ. ಆದರೆ ಭಾರತೀಯ ಪ್ರಾಚ್ಯ ವಸ್ತು ಇಲಾಖೆಯ ನಿರ್ಲಕ್ಷದಿಂದ ಈ ದೇವಾಲಯ ಅನಾಥವಾಗಿದೆ.
ಕಣ್ಣು ಕೊರೈಸುವ ವಾಸ್ತು ಶೈಲಿ.
ಕ್ರಿ.ಶ 1120ರಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಸೌಧೂರೆ ಜಕ್ಕರಸ ದೊರೆ ನಿರ್ಮಿಸಿದ್ದಾನೆಂದು ದೇವಾಲಯದ ಒಳಗಿರುವ ಶಿಲಾಶಾಸನ ಉಲ್ಲೇಖಿಸಿದೆ.ಪೂರ್ವಾಭಿಮುಖವಾಗಿ ಮರಳುಗಲ್ಲಿನಿಂದ ಈ ದೇವಾಯಲವನ್ನು ನಿರ್ಮಿಸಲಾಗಿದೆ. ದೇವಾಲಯವು ದ್ವಿಕೂಟವಾಗಿದ್ದು, ಪೂರ್ವ ಮತ್ತು ದಕ್ಷಿಣಕ್ಕೆ ಮುಖ ಮಾಡಿದ ಗರ್ಭ ಗುಡಿಯನ್ನು ಹೊಂದಿದೆ. ಒಂದು ಗರ್ಭಗುಡಿಯಲ್ಲಿ ಬನಶಂಕರಿ, ಮತ್ತೊಂದು ಗರ್ಭಗುಡಿಯಲ್ಲಿ ಶಂಕರಲಿಂಗವನ್ನು ಕಾಣಬಹುದು. ಗರ್ಭಗೃಹದ ಬಾಗಿಲುಗಳ ಮೇಲೆ ಅರ್ಧಗಂಬಗಳ ಹಾಗೂ ಸೂಕ್ಷ್ಮ ಕೆತ್ತನೆಗಳನ್ನು ಕಾಣಬಹುದು. ಲಲಾಟಬಿಂಬದಲ್ಲಿ ಗಜಲಕ್ಷ್ಮೀಯ ಉಬ್ಬುಶಿಲ್ಪವಿದ್ದು, ಮೇಲಿನ ಶಿಲಾಫಲಕದಲ್ಲಿ ಐದು ಮಂಟಪಗಳ ಸೂಕ್ಷ್ಮ ಉಬ್ಬು ರಚನೆಗಳಿವೆ. ಮಧ್ಯದ ಮಂಟಪವು ಗಣಪತಿಯ ಉಬ್ಬು ಶಿಲ್ಪವನ್ನು ಹೊಂದಿದೆ.
ದಕ್ಷಿಣಾಭಿಮುಖವಾಗಿರುವ ಗರ್ಭಗುಡಿಯ ಮೇಲೂ ಸೂಕ್ಷ್ಮ ಕೆತ್ತನ ಕಲಾ ಕುಸುರಿಯನ್ನು ಕಾಣಬಹುದು. ಇನ್ನು ಈ ದೇವಾಲಯದ ವಿಶೇಷವೆಂದರೆ ಇದರ ನವರಂಗ ಮಂಟಪ. ಇಲ್ಲಿ ನಾಲ್ಕು ಕಂಬಗಳಿದ್ದು. ಈ ಕಂಬಗಳ ಮೇಲೆ ವಿಷ್ಣು,ನಟರಾಜ, ಗಣಪತಿ, ಭೈರವ,ಭೈರವಿ, ಶಿವ, ವರಹಾ, ಉಗ್ರನರಸಿಂಹ, ಚಂದ್ರ, ವೀರಭ್ರದ, ಮೊದಲಾದ ದೇವಾನುದೇವತೆಗಳ ಅದ್ಭುತ್ ಕೆತ್ತನೆಗಳನ್ನು ಕಾಣಬಹುದು. ನವರಂಗದ ಕಂಬಗಳ ಮೇಲೆ ಕೆತ್ತಿದ ದೇವಾಯಲಗಳು ಕಾಣ ಸಿಗುವುದು ಅಪರೂಪ.ಇನ್ನೂ ದೇವಾಲಯದ ಹೊರಭಿತ್ತಿಯು ಗೋಡೆಕಂಬ,ಅರ್ಧಕಂಬ, ಮತ್ತು ದೇವಕೊಷ್ಟಕಗಳ ಅಲಂಕಾರದಿಂದ ಕೂಡಿದೆ. ನಕ್ಷತ್ರಾಕಾರದ ತಲವಿನ್ಯಾಸವನ್ನು ಹೊಂದಿದೆ.
ಸೂಕ್ತ ರಕ್ಷಣೆಯಿಲ್ಲ..
ದೇವಸ್ಥಾನದ  ಸುತ್ತಲೂ ಬೇಲಿ ಹಾಕಲಾಗಿದೇ, ಆ ಬೇಲಿಯನ್ನು ಈಗಾಗಳೆ ಬೇಧಿಸಲಾಗಿದೆ. ಇನ್ನೂ ದೇವಸ್ಥಾನದ ಒಳಗೆ ಯಾರು ಬೇಕಾದರೂ ರಾಜಾರೋಷವಾಗಿ ಪ್ರವೇಶಿಸಬಹುದು. ಇನ್ನೂ ದೇವಸ್ಥಾನದ ಸುತ್ತಲೂ ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹೀಗಾಗಿ ಜೀರ್ಣೋದ್ಧಾರ ಸಮಯದಲ್ಲಿ ತೆಗೆದ ಕಲ್ಲುಗಳಿಗೆ ಹಾಗೂ ದೇವಸ್ಥಾನಕ್ಕೆ ಯಾವುದೇ ರಕ್ಷಣೆ ಇಲ್ಲ. ಅಷ್ಟೇ ಅಲ್ಲದೇ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಇದಕ್ಕೆ ಅರ್ಚಕರು ಸಹಿತ ಇಲ್ಲ. ಓಣಿಯ ಮಹಿಳೆಯರೆ ಈ ದೇವಸ್ಥಾನದ ಪೂಜೆ ಮಾಡುತ್ತಿದ್ದಾರೆ. ದೇವಸ್ಥಾನದ ಮೇಲೂಸ್ತುವಾರಗೆ ಸರಕಾರ ಒಬ್ಬ ನೌಕರರನ್ನು ಹಾಗೂ ಒಬ್ಬ ಕಾವಲುಗಾರರನ್ನು ನೇಮಕ ಮಾಡಲಾಗಿದೆ. ಆದರೆ ಸರಕಾರಿ ನೌಕರ ಧಾರವಾಡದಲ್ಲಿ ಇರುವುದರಿಂದ ಈ ದೇವಾಲಯ ರಕ್ಷಣೆಯ ಹೊಣೆ ಅಲಿಯ್ಲ ಕಾವಲುಗಾರನ್ನದೆ. ಅವನು ಇಲ್ಲದೇ ಇದ್ದಾಗ ಇದಕ್ಕೆ ರಕ್ಷಣೆ ನೀಡುವವರು ಯಾರು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಉತ್ಸವ ಸಾರ್ಥಕತೆ 

ಲಕ್ಷಾಂತರ ಹಣ ಖರ್ಚು ಮಾಡಿ ಪ್ರತಿ ವರ್ಷ ಜಿಲ್ಲಾಡಳಿತ ಜಿಲ್ಲಾ ಉತ್ಸವವನ್ನು ಗಾರ್ಡ್‌ನ್‌ಗಳು , ರಂಗಮಂದಿರಗಳಲ್ಲಿ, ಕೆಸಿಡಿ ಕಾಲೇಜು, ಮಠಗಳಲ್ಲಿ ಮಾತ್ರ ಆಯೋಜಿಸುತ್ತಿದೆ. ಇತಿಹಾಸ ಬಂಬಿಸುವ ಚಂದ್ರಮೌಳೇಶ್ವರ, ಭವಾನಿ ಶಂಕರ,ಬನಶಂಕರೀ ದೇವಾಲಯ ಸೇರಿದಂತೆ ಹಲವು ಐತಿಹ್ಯದ ದೇವಾಲಯಗಳನ್ನು ಆಯ್ಕೆ ಮಾಡಿ ಸುಸಜ್ಜಿತ ಕಾರ್ಯಕ್ರಮ ಆಯೋಜಿಸಿದರೆ ಉತ್ಸವ ಸಾರ್ಥಕತೆ





Saturday, 7 April 2018

ಹೊಟ್ಟೆಯ ಹಿಟ್ಟಿಗಾಗಿ ಕಟ್ಟಿಗೆ ಹೊರುವ ಕಸರತ್ತು.


ಮಂಜುನಾಥ ಗದಗಿನ

  ಆಧುನಿಕ ಜೀವನ ಶೈಲಿಗೆ ಕಾಲಿಕಟ್ಟಿಕೊಂಡು ಯಾವ ದಿಕ್ಕು ದೆಸೆಯು ಗೊತ್ತಿಲ್ಲದೆ ಕೇವಲ ದುಡ್ಡು ಸಂಪಾದನೆಗಾಗಿ, ಜೀವನದ ಅಮೂಲ್ಯ ಕ್ಷಣಗಳನ್ನು ಯಾಂತ್ರಿಕ ವಸ್ತುಗಳೊಂದಿಗೆ ನಮ್ಮದೇ ಹಮ್ಮು-ಬಿಮ್ಮಿನಲ್ಲಿ ಕಳೆಯುತ್ತಿದ್ದೇವೆ. ಆದರೆ ಕೆಲವೊಂದಿಷ್ಟು ಜನರು ಯಾಂತ್ರಿಕ ಬದುಕಿನಿಂದ ದೂರವೇ ಇದ್ದು ತಮ್ಮದೇ ಪುಟ್ಟ ಪ್ರಪಂಚದಲ್ಲಿ ಆಸೆ, ಆಕಾಂಕ್ಷೆಗಳೊಂದಿಗೆ ಹೊಟ್ಟೆಯ ಹಿಟ್ಟಿಗಾಗಿ, ದಿನನಿತ್ಯ ಕಟ್ಟಿಗೆ ಹೊರುವ ಕೆಲಸವನ್ನು ಮಾಡುತ್ತಿದ್ದಾರೆ.
  ಸೂರ್ಯ ಹುಟ್ಟುವುದಕ್ಕೂ ಮುನ್ನ, ಎದ್ದು ಮನೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಟ್ಟು. ತಮ್ಮ ಹೊಟ್ಟೆಗೆ ಸ್ಪಲ್ಪ ಬುತ್ತಿಕಟ್ಟಿಕೊಂಡು ಹೋಗುವ ಈ ಮಹಿಳೆಯರು ಮತ್ತೆ ಮನೆ ಸೇರುವುದು ಅದೇ ಸೂರ್ಯನೊಂದಿಗೆ. ಈ ಮಹಿಳೆಯರದ್ದು ದಿನನಿತ್ಯದ ಕಾಯಕವೇ ಇದು.
 ಬದುಕಿನ ಬಡತನ ಎಂತಹ ಕೆಲಸಕ್ಕಾದರು ಪ್ರೇರೆಪಿಸುತ್ತದೆ ಎಂಬುದಕ್ಕೆ ಅಂದು ದಾರಿಯಲ್ಲಿ ಕಂಡ ಈ ಮಹಿಳೆಯರೇ ಜ್ವಲಂತ ಸಾಕ್ಷಿಯಾಗಿದ್ದರು. ತುತ್ತು ಅನ್ನಕ್ಕಾಗಿ ಸುಡು ಬಿಸಿಲನ್ನು ಲೆಕ್ಕಿಸದೇ ಕಾಣದ ಯಾವುದೋ ಒಂದು ದಾರಿಗುಂಟ ಅದೇಷ್ಟೋ ಕೀ.ಮಿಗಳನ್ನು ನಡೆದುಕೊಂಡು ಕಟ್ಟಿಗೆ ತರುತ್ತಿದ್ದರು. ಮಾಸಿದ ಬಟ್ಟೆ, ಅವರ ಕಾಲಲ್ಲಿನ ಚಪ್ಪಲಿಗಳು ಅವರ ಬದುಕಿನ ಬಡತನವನ್ನು ಅಣಕಿಸುತ್ತಿದ್ದವು.
ಇವರ ಆ ಗಟ್ಟಿತನ ಅದೆಂತಹ ಗಂಡೆದೆಯನ್ನು ಗದರಿಸುವಂತಿತ್ತು.
  ನಾವುಗಳು ಮನೆಯಲ್ಲಿ ಇದ್ದಾಗ ಒಂದು ಕಡ್ಡಿಯನ್ನು ತೆಗೆದು ಈ ಕಡೆಯಿಂದ ಆ ಕಡೆಗೆ ಹಾಕುವುದಿಲ್ಲ. ಒಂದು ವೇಳೆ ಹಾಕಿದ್ರು ಆ ಮೇಲೆ ಸೊಂಟನೋವು ಎಂದು ಹಾಸಿಗೆ ಹಿಡಿಯುವುದು ಗ್ಯಾರಂಟಿ. ಹೌದು! ಇದು ನಮ್ಮ ಆಧುನಿಕ ಜೀವನ ಶೈಲಿಯ ಯಾಂತ್ರಿಕ ಬದುಕಿನ ಬಹು ದೊಡ್ಡ ಉಡುಗರೆ ಎಂದರೆ ತಪ್ಪಾಗಲಾರದು. ಇಂತಹ ಪರಸ್ಥಿಯಲ್ಲಿ ಈ ಮಹಿಳೆಯರು ದಿನ ನಿತ್ಯ ತಮಗೆ ತಿಳಿಯದಷ್ಟು ದೂರವನ್ನು ಸಾಗಿ, ಭಾರವಾದ ಕಟ್ಟಿಗಳನ್ನು ಕಡೆದುಕೊಂಡು, ಅವುಗಳನ್ನು ವ್ಯವಸ್ಥಿತವಾಗಿ ಕಟ್ಟಿಕೊಂಡು, ತಲೆಯ ಮೇಲೆ ಹೊತ್ತುಕೊಂಡು ಬರುತ್ತಾರಲ್ಲಾ! ಅವರ ಗಟ್ಟಿತನಕ್ಕೆ ಗಟ್ಟಿಯಾಗಿ ಕೂಗಿ ಹೇಳಲೇ ಬೇಕು ಶಬ್ಬಾಸ್ ಎಂದು.
   ನಾವ್ ಏನ ಮಾಡೋನ್ರಿ, ಈಗಿನ್ ಸಿಲಿಂಡರ ತಗೋಳಾಕ್ ನಮ್ಮ ಹತ್ರ ದುಡ್ಡಿಲ್ಲ. ತುತ್ತು ಅನ್ನ ತಿನ್ನಬೇಕಂದ್ರೆ ದಿನನಿತ್ಯ ಕಟ್ಟಿಗೆ ಹೊರಲೇ ಬೇಕು. ಇದನ್ನ ಮಾಡದೇ ಹೋದ್ರ ಹೊಟ್ಟೆಗೆ ತಣ್ಣಿರ ಬಟ್ಟೆನೆಗತಿ. ಇನ್ನ ಸರಕಾರ ನಮ್ಗ ಚುಮಣಿ ಎಣ್ಣೆ ಬಂದ್ ಮಾಡಿದೆ. ಹೀಂಗಾದ್ರ ನಮ್ಮ ಜೀವನ ಹೇಂಗ್ ನಡೆಸೋದು ಎಂದು ಮಲ್ಲವ್ವ ತನ್ನ ಅಳಲನ್ನು ತೊಡಿಕೊಂಡಳು.
  ಅಷ್ಟೂ ದೂರ ಹೋಗಿ, ತ್ರಾಸಪಟ್ಟು ತಂದರು ಒಂದು ಹೋರೆಗೆ ಸಿಗುವುದು ಕೇವಲ್ 30-40 ರೂ.ಗಳು ಮಾತ್ರ. ಇನ್ನೂ ಕೆಲವೊಂದಿಷ್ಟು ಸಾರಿ ಆ ಕಟ್ಟಿಗಳು ಮಾರದೇ ಹೋದ್ರೆ ಅವರು ಪಟ್ಟ ಶ್ರಮ ಹೋಳೆಯಲ್ಲಿ ಹುಣಸೆ ಹಣ್ಣು ತೋಳೆದ ಹಾಗೆ ಆಗುತ್ತೆ. ಇದರ ಜತೆ ಅವರ ಮನೆಯ ಒಲೆಗೂ ಇದೇ ಕಟ್ಟಿಯನ್ನು ಒಳಸುತ್ತಾರೆ. ಈ ದೃಶ ನೋಡಿದಾಕ್ಷಣ ನಮ್ಮ ಊರು ನನ್ಗೆ ನೆನಪಾಯಿತು. ನಮ್ಮ ಅವ್ವ ಕೂಡಾ ಕಟ್ಟಿಗೆ ತರಲು ಗುಡ್ಡಕ್ಕೆ ಹೋಗುತ್ತಿದದ್ದು ನೆನೆದು ಜೀವ ಹಿಂಡಿದಾಂತಾಯಿತು. ಇವರ ಈ ಕಾಯಕಕ್ಕೆ ಬೆಲೆ ಸಿಗುವುದು ಯಾವಾಗ? ಇವರ ಬದುಕು ಹಸನಾಗುವುದು ಯಾವಾಗ? ಎಂಬುದು ನಮ್ಮೆಲ್ಲರ ಪ್ರಶ್ನೆ.



Thursday, 29 March 2018

ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳು..!


 ಮಂಜುನಾಥ ಗದಗಿನ


ಎದೆಯಾಳದಲ್ಲಿ ಇಳಿದ ನೆನಪುಗಳೇ ಹಾಗೆ, ಬೇಡವೆಂದರೂ, ಕೆದಕಿ, ಕೆಣಕಿ, ಕಾಡುತ್ತವೆ, ಕೆರಳಿಸುತ್ತವೆ. ಧೋ..ಎಂದು ನೆನಪಿನ ಮಳೆಯನ್ನೆ ಸುರಿಸಿ, ಕಣ್ಣಂಚನ್ನು ಒದ್ದೆಯಾಗಿಸುತ್ತವೆ. ಅಂತಹ ನೆನಪೊಂದು ಸದ್ದಿಲ್ಲದೇ ಎದೆಯಾಳದಲ್ಲಿ ಸರಿದಾಡುತ್ತಿದೆ, ನೆನಪುಗಳೊಂದಿಗೆ ಸರಸವಾಡುತ್ತಾ, ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳನ್ನು ಎಳೆಎಳೆದು ಹೊಸ ಮನ್ಮಂತರವನ್ನು ಸೃಷ್ಠಿಸುತ್ತಿದೆ.
ನಾನು ನನ್ನ ಕೆಲಸ ಎಂದು ನನ್ನದೆ ಲೋಕದಲ್ಲಿ ಹೊರ ಜಗತ್ತಿನ ಗಂಧ ಗಾಳಿಯು ಗೊತ್ತಿಲ್ಲದೆ ಇದ್ದ ಹಳ್ಳಿ ಹೈದನಾಗಿದ್ದೆ. ನನಗಾಗ ಧಾರವಾಡ  ಹೊಸ ಪ್ರಪಂಚ. ನಮ್ಮ ಊರಿನಿಂದ ಅಲ್ಲಿಗೆ ಕಲಿಯಲು ಹೋದವರು, ಆವಾಗ ಆವಾಗ ಊರಿಗೆ ಬಂದು ಧಾರವಾಡ ಎಂಬ ಹೊರ ಜಗತ್ತಿನ ಬಗ್ಗೆ ರೋಚಕ ಹಾಗೂ ಸ್ವಾರಸ್ಯಕರ ವಿಷಯಗಳನ್ನು ಹೇಳುತ್ತಿದ್ದರು. ಆಗ್ಲೆ ನನ್ಗೆ ಗೊತ್ತಾಗಿದ್ದು, ಧಾರವಾಡ ಎಂಬ ಸುಂದರ ನಗರಿಯ ತುಸು ಮಾಹಿತಿ. ವಿದ್ಯಾಕಾಶಿ, ನಿವೃತ್ತರ ಸ್ವರ್ಗ, ಕವಿಗಳ ನಾಡು ಎಂಬಿತ್ಯಾದಿ ಹೆಸರುಗಳನ್ನು ಕೇಳುತ್ತಿದ್ದೆ. ಇದೇ ಕಾರಣಕ್ಕೆ ಧಾರವಾಡ ಎಂದರೆ, ಅದೇನೋ ಮೈ-ಮನ ಫುಳಕಿತ್ತವಾಗುತ್ತಿದ್ದವು, ಅದನ್ನು ನೋಡಬೇಕು ಎಂಬ ಆಸೆ  ಹೆಮ್ಮರವಾಗಿ ಬೆಳೆದಿತ್ತು.
   ಇದೇ ಸಮಯಕ್ಕೆ ಪಿಯುಸಿ ಮುಗಿಯಿತು. ರೋಗಿ ಬಯಸಿದ್ದು, ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ. ನನ್ನ ಕನಸಿನ ಧಾರಾವಾಡದಲ್ಲಿ ಉನ್ನತ ಶಿಕ್ಷಣ ಕಲಿಯಲು ಅವಕಾಶ ದೊರೆಯಿತು. ಹೊಸ ಕನಸು, ಹೊಸ ಭರವಸೆ, ಹೊಸ ಉತ್ಸಾಹ, ಹೊಸ ಛಲಗಳೊಂದಿಗೆ ಧಾರವಾಡ ಎಂಬ ಮೋಹಕ ನಗರಿಗೆ ಪುಟ್ಟ ಮಗುವಾಗಿ ಅಂಬೆಗಾಲಿಟ್ಟೆ. ದಿಟ್ಟ ಹಜ್ಜೆಗಳ ಅಡಿಯಲ್ಲಿ ಧಾರವಾಡವನ್ನು ಅಚ್ಚರಿಯ ಕಣ್ಗಳಲ್ಲಿ ಆಶ್ವಾಧಿಸಲು ಪ್ರಾರಂಭಿಸಿದೆ. ಇಷ್ಟು ಬೇಗ ಧಾರವಾಡ ನನ್ನನ್ನು ತನ್ನೊಡಲಿನ ಮಗುವಾಗಿ ಸ್ವೀಕರಿಸುತ್ತದೆ ಎಂಬ ಕಲ್ಪನೆ ಕೂಡಾ ನನಗೆ ಇರಲಿಲ್ಲ. ಆವಾಗ್ಲೆ ಗೊತ್ತಾಗಿದ್ದು ಧಾರವಾಡಕ್ಕೆ ಎಲ್ಲವನ್ನೂ, ಎಲ್ಲರನ್ನೂ ಒಗ್ಗಿಸಿ, ತಗ್ಗಿಸುವ ತಾಕತ್ತಿದೆ ಎಂದು.
ಧಾರವಾಡದ ಮಳೆ, ಆ ಹಚ್ಚ ಹಸಿರು, ಎಳೆ ಬಿಸಿಲು, ಖಡಕ್ ರೊಟ್ಟಿ, ಜುಬ್ಲಿ ಸರ್ಕಲ್, ಬೇಂದ್ರೆ ಅಜ್ಜನ ಸಾಧನಕೇರಿ, ಶಾಲ್ಮಲೆಯ ಒಡಲು, ಶ್ರೀನಗರ ಸರ್ಕಲ್, ರೈಲ್ವೆ ಟ್ರ್ಯಾಕ್ ಮೇಲೆ ತೆಗೆಸಿದ ಸೆಲ್ಪಿ, ಒಂದೇ ಎರಡೆ ಧಾರಾನಗರಿಯ ನೆನಪುಗಳು, ಬಿಚ್ಚಿಟ್ಟು ಹಂಚಿಕೊಳ್ಳಲಾಗದಷ್ಟು ಎದೆಯಾಳದಲ್ಲಿ ಆಳವಾದ ಕಂದಕವನ್ನು ಸೃಷ್ಠಿಸಿವೆ. 
ನಾವು ಯಾವುದೇ ಒಂದು ಸ್ಥಳದಲ್ಲಿ ಇದ್ದಾಗ, ಆ ಸ್ಥಳದ ಮಹಿಮೆ ಗೊತ್ತಾಗುವುದಿಲ್ಲ. ಇದ್ದಾಗ ’ಅಲ್ಲೆನ ಐತಿ ಬಿಡ್’ ಎಂಬ ಉದಾಸೀನ ಮನೋಭಾವನೆಯಿಂದ ಎಲ್ಲವನ್ನು ಅಲಗಳೆಯುತ್ತೆವೆ. ನಾವು ಆ ವಸ್ತು ಅಥವಾ ಸ್ಥಳ ನಮ್ಮನ್ನು ಬಿಟ್ಟು ದೂರ ಹೋದಾಗಲೇ, ಅದರ ನೈಜ ಮಹತ್ವ ಅರಿವಾಗುವುದು. ಇದು ನನ್ನನೊಬ್ಬನ ಮಾನಸಿಕ ಸ್ಥಿತಿ ಅಲ್ಲ. ಇದು ಪ್ರತಿಯೊಬ್ಬ ಮನುಷ್ಯನ ನೈಜ ಸ್ಥಿತಿಯಾಗಿದೆ. ಈಗ ಆಗಿರುವುದು ಅದೇ, ಧಾರವಾಡದಲ್ಲಿ ಇದ್ದಾಗ ಎಲ್ಲವನ್ನು ಉದಾಸಿನ ಮಾಡುತ್ತಾ, ಬರೀ ವಿನಾಃಕಾರಣ ಕಾಲಹರಣ ಮಾಡಿ ವಿದ್ಯಾರ್ಥಿ ಜೀವನ ಮುಗಿಸಿದೆ.
ಇದ್ದ ಅಷ್ಟು ದಿನಗಳು ಧಾರವಾಡ, ಸುಂದರ ಅನುಭವಗಳನ್ನು, ಬದುಕಿನ ಪಾಠವನ್ನು, ಸಮಾಜ ಎದುರಿಸುವ ರೀತಿಗಳನ್ನು ಕಲಿಸಿಕೊಟ್ಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಗೆಳೆಯಂತೆ, ನಿಂತು ನನ್ನ ತಪ್ಪು-ಒಪ್ಪುಗಳಿಗೆ ಸಲಹೆ ಸೂಚನೆ ನೀಡುತ್ತಾ. ನನ್ನನ್ನು ತಿದ್ದಿ, ತಿಡಿ ಪೋಷಿಸಿದೆ. ಅವ್ವನಂತೆ ಸಾಕಿದೆ, ಅಪ್ಪನಂತೆ ಬೇಕು ಬೇಡಗಳನ್ನು ಆಲಿಸಿ, ಸರಿದಾರಿಯಲ್ಲಿ ಸಾಗುವಂತೆ ಎಚ್ಚರಿಕೆ ನೀಡಿದೆ. ಏನೆಂದು, ಹೇಳಲ್ಲಿ ನನ್ನ ಧಾರಾನಗರಿಯ ಬಗ್ಗೆ. ಏಷ್ಟು ಹೇಳಿದರೂ, ಅದೊಂದು ಮುಗಿಯದ ಕಥೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ, ಊರು ಬಿಟ್ಟು ಬಂದಾಗ ನನ್ನನ್ನು ಸಾಕಿ ಸಲುಹಿದ್ದು ಇದೇ ನನ್ನ ಧಾರವಾಡ. 
      ಜೀವನದಲ್ಲಿ ಎಡವದಂತೆ ಎಚ್ಚರಿಸಿದ ಆ ಕಿತ್ತೋದ ರಸ್ತೆಗಳು, ಸದಾ ಹಸಿರು ಹೊದ್ದು ಮಲಗಿ, ಮನಕ್ಕೆ ತಂಪು ನೀಡುತ್ತಿದ್ದ ಕ್ಯಾಂಪಸ್‌ನ ಸಸ್ಯಶಾಲ್ಮಲೆ, ಮೈ-ಕೈಗೆ ಚಳಿ ಬೀಡಿಸಿದ ಆ ಪತ್ರಿಕೋದ್ಯಮದ ದಾರಿ, ಉತ್ಸಾಹ ಮತ್ತು ಪ್ರೋತ್ಸಾಹ ತುಂಬಿದ ಗೆಳೆಯರು, ವೃತ್ತಿ ಬದುಕಿನ ಪಾಠ ಕಲಿಸಿದ ಗುರುಗಳು, ಎಲ್ಲವೂ ಧಾರಾನಗರಿ ಕಟ್ಟಿಕೊಟ್ಟ ಬದುಕಿನ ಅವಿಸ್ಮರಣಿಯ ಕ್ಷಣಗಳು. ಮೊನ್ನೆ ಜಿಟಿ ಮಳೆಗೆ ಹುಡಿಯದ್ದ ಆ ಮಣ್ಣಿನ ಸುವಾಸನೆಯಲ್ಲಿ ಧಾರವಾಡದ ನೆನಪು ಕೂಡಾ ತೇಲಿ ಬಂತು. ಅದು ನನ್ನವಳ ನೆನಪಿನ ಹಾಗೆ. 




Saturday, 24 March 2018

ಆಟಗಳು ಉಂಟು ಲೆಕ್ಕಕ್ಕಿಲ್ಲ..!


ಮಂಜುನಾಥ ಗದಗಿನ

 ಆಟದೊಂದಿಗೆ ಪಾಠ ಕೇಳುತ್ತಿದ್ದರೆ, ಅದೆನೋ, ಹರುಷ. ಮತ್ತಷ್ಟು ಕಲಿಬೇಕು, ತಿಳಿದುಕೊಳ್ಳಬೇಕು ಎಂಬ ಹಂಬಲ ವ್ಯಕ್ತಿಗತವಾಗಿ ಪರಕಾಯ ಪ್ರವೇಶ ಮಾಡುತ್ತಿತ್ತು. ಅದರಲ್ಲೂ ಚಿನ್ನಿ-ದಾಂಡು, ಲಗೋರಿ, ಬುಗುರಿ, ಕಣ್ಣಾಮುಚ್ಚಾಲೆ ಆಟಗಳ ಜೀವನದ ಅವಿಬಾಜ್ಯ ಅಂಗಗಳಾಗಿ ಬಾಲ್ಯದ ದಿನಗಳಲ್ಲಿ ಪಾರಮ್ಯ ಮೆರೆದಿದ್ದವು. ಆದರೆ ಇಂದು ಈ ಆಟಗಳೆಲ್ಲಾ, ಕಂಪ್ಯೂಟರ್, ಮೊಬೈಲ್, ವಿಡಿಯೋ ಗೇಮ್‌ಗಳಲ್ಲಿ ಕಳೆದು ಹೋಗಿರುವದು ಮನುಕುಲದ ಯಾಂತ್ರಿಕ ಬದುಕನ್ನು ಅನಾವರಣಗೊಳಿಸುತ್ತವೆ.

ಬೇಕಾದ್ದು, ಬೇಡವಾದದ್ದನ್ನು ಬೆನ್ನಿಗೆ ಕಟ್ಟಿಕೊಂಡು,ದಿನಗಳನ್ನು ಆರಂಭಿಸುವ ಇಂದಿನ ನಾಗರಿಕ ಪ್ರಜೆಗಳಿಗೆ ಆಟ ಆಡಲು ಎಲ್ಲಿಂದ ಬರಬೇಕು ಪುರಸೋತ್ತು. ತಮ್ಮ ಮಕ್ಕಳಿಗೆ ಎಲ್ಲಿಲದ್ದ ಕಾಯ್ದೆ,ನಿಯಮ ಎಂಬ ಕಟ್ಟಳೆಗಳಲ್ಲಿ ಬಂದಿಸಿ, ಹೊರಗಡೆಯ ಪ್ರಪಂಚಕ್ಕೆ ಅಪರಿಚಿತರನ್ನಾಗಿ ಮಾಡುತ್ತಿದ್ದಾರೆ. ತಮ್ಮ ಮಕ್ಕಳು, ಕೇಳಿದ್ದೇಲ್ಲವನ್ನ ಮನೆಯಲ್ಲಿಯೇ ತಂದುಕೊಟ್ಟು, ಅವರನ್ನು ನಾಲ್ಕು ಗೋಡೆಗಳ ಮಧ್ಯ ಬಂದಿಸಿದ್ದಾರೆ. ಹೀಗಿರುವಾಗ ಮಕ್ಕಳು ಹೊರ ಜಗತ್ತಿನೊಂದಿಗೆ ಬೇರೆತು, ಸ್ವಚ್ಚಂದಾಗಿ ಆಡುವದು ದೂರದ ಮಾತಾಯಿತು. ಹೀಗಿರುವಾಗ ನಮ್ಮ ಗ್ರಾಮೀಣ ಕ್ರೀಡೆಗಳು, ಬೆಳೆಯುವದು ಯಾವಾಗ? ಕೈಯಲ್ಲೊಂದು ಜಗತ್ತಿನ್ನು ಒಳಗೊಂದ ಮೊಬೈಲ್ ಇದ್ದರೆ ಸಾಕು, ಹೆತ್ತವರನ್ನು ಹೇಡೆಮುರಿಕಟ್ಟಿ ಬೀಡುತ್ತಾರೆ ಇಂದಿನ ಮಕ್ಕಳು. 
ಮೊನ್ನೆ ರಜೆಗೆಂದು ಊರಿಗೆ ಹೋದಾಗ, ಗೆಳೆಯರ ಜೊತೆ ಓಣಿಯ ಸಂಧಿ-ಗೊಂದಿಗಳಲ್ಲಿ ಲೋಕಾಭಿರಾಮವಾಗಿ ಮಾತಾಡುತ್ತಾ ಸುತ್ತಾಡುತ್ತಿದ್ದೆ. ಅಲ್ಲೆ ಪಕ್ಕದಲ್ಲೆ ಒಂದಿಷ್ಟು ತಮ್ಮಂದಿರು ಚಿನ್ನಿ-ದಾಂಡುಗಳನ್ನು ಹಿಡಿದುಕೊಂಡು, ಬೀಸಿ ಹೊಡೆಯುತ್ತಿರುವುದ ಕಂಡು, ಬಾಲ್ಯ ನೆನಪುಗಳು ಸ್ಮತಿಪಟಲಗಳ್ಲಿ ನಲಿದಾಡಲು ಶುರು ಮಾಡಿದವು. ನಾವುಗಳು ಕೂಡಾ, ಅವರ ಹಾಗೆಯೇ ದಿನ ಬೆಳಗಾದ್ರೆ ಚಿನ್ನಿ-ದಾಡು, ಕಿಸೆಯಲ್ಲೊಂದಿ ಗೋಲಿಯನ್ನು ಇಳಿಸಿಕೊಂಡು ಬರುತ್ತಿದ್ದೇವು. ಚಿನ್ನಿ-ದಾಂಡು ಆಡುತ್ತಿದಬೇಕಾದ್ರೆ ಕಾಲು ಗೆದರಿಕೊಂಡು ಗೆಳೆಯರ ಜೊತೆ ಗುದ್ದಾಡಿದ್ದು, ರಸ್ತೆಯಲ್ಲಿ ಓಡಾಡುವ ಮುದಕರಿಗೆ ಬಡಿದಾಗ, ಅವರು ಲೋ..ಬಾಡ್ಯಾ ನಿನಗ್ ಬ್ಯಾರೇ ಯಾರು ಸಿಗಲಿಲ್ಲೇನೋ..ಎಂದು ಬೈದದ್ದು, ಸೋತಾಗ ಮಾರುದ್ದ ದೂರದಿಂದ ಕೋಳಿಯ ಹಾಗೆ ಕುಕ್ಕುಕ್ಕೂ..ಎಂದು ಕೂಗುತ್ತಾ ಓಡಿದ್ದು ಎಲ್ಲವು ನೆನಪಾಗಿ, ಕಣ್ಣಾಲಿಗೆಗಳು ತೇವಗೊಂಡವು. ನಾವುಗಳು ಕೂಡಾ, ಅವರ ಜೊತೆ ಒಂದ ಕೈ ಚಿನ್ನಿ-ದಾಂಡು ಆಡಿ ಖುಷಿಪಟ್ಟೆವು.
ಈ ಆಟಗಳನ್ನು ಆಡುವುದರಿಂದ ಮೊದಲೆಲ್ಲಾ ಮಕ್ಕಳಿಗೆ ವ್ಯಾಯಾಮವಾಗುತಿತ್ತು. ಬುದ್ದಿ ಚುರುಕಾಗುತ್ತಿತ್ತು. ಇದೇ ಕಾರಣಕ್ಕೆ ಈ ಆಟಗಳನ್ನು ಋತುಮಾನಕ್ಕನುಗುಣವಾಗಿ ಆಡಲಾಗುತ್ತಿತ್ತು. ಆದರೆ ಇಂದು ದಿನ ಬೆಳಗಾದ್ರೆ ಸಾಕು ಬ್ಯಾಟು, ಚಂಡು ಹಿಡಿದು ಹೊರಟು ಬಿಟ್ಟರೇ, ಯಾರದಾದ್ರು ತಲೆನೋ..ಕೈಯೋ ಮುರಿಯೋ ವರೆಗೂ ಆಡಿ, ಜಗಳದೊಂದಿಗೆ ಮನೆಗೆ ಮರಳುತ್ತಿದ್ದಾರೆ. ಆಟಗಳು ಮನುಷ್ಯನ ಮನಸ್ಸನ್ನ ಉಲ್ಲಸಿತನ್ನಾಗಿಸುತ್ತವೆ. ಅಂತಹ ಆಟಗಳಲ್ಲಿ ಚಿನ್ನಿ-ದಾಂಡು, ಲಗೋರಿ ಆಟಗಳು ಮಹತ್ತರವಾಗಿವೆ. ಆದರೆ ಇಂದಿನ ಮಕ್ಕಳಿಗೆ ಚಿನ್ನಿ-ದಾಂಡು, ಲಗೋರಿ, ಬುಗುರಿ ಎಂದರೆ ಹಾಗೆಂದ್ರೆ ಏನು? ಎಂದು ಕೇಳುವ ಪರಸ್ಥಿತಿ ನಿರ್ಮಾಣವಾಗಿದೆ.
ತಾಯಿಯಾದ್ಳು ಆಡಿ ಬಾ ಏನ ಕಂದ, ಅಂಗಾಲ ತೊಳೆದೇನ, ತೆಂಗಿನ ಕಾಯಿ ತಿಳಿನೀರ ತಕ್ಕೊಂದು ಬಂಗಾರದ ಮೊರೆ ತೊಳೆದೇನು ಎಂದು ಆಡಿ ದಣಿದು ಬಂದ ತನ್ನ ಮಗನನ್ನು ಉಪಚರಿಸುತ್ತಿದ್ದಳು. ಆದರೆ ಈಗನ ತಾಯಂದಿರು ಧೋಳ್‌ಲ್ಲಿ ಆಡಬ್ಯಾಡ, ಕೇಸರಲ್ಲಿ ನಡಿಬ್ಯಾಡ ನನ್ನ ಮಗನ, ಆಡಿದ್ದು ಗೊತ್ತಾದ್ರ ಕೈಕಾಲ ಮುರಿತಿನ ಎಂದು ಮಕ್ಕಳನ್ನು ಗಧರಿಸುತ್ತಿದ್ದಾರೆ. ಹೀಗಾದ್ರ ನಮ್ಮ ಮಕ್ಕಳು ಈ ಆಟಗಳನ್ನು ಆಡುವುದು ಯಾವಾಗ? ಈ ಆಟಗಳು ಉಳಿಯೋದು ಹೇಗೆ? ಒಂದು ವೇಳೆ ಇಂತಹ ಆಟಗಳು ಇದ್ದಾವೇ, ಎಂದು ನಮ್ಮ ಮಕ್ಕಳಿಗೆ ತಿಳಿಸಬೇಕಾದರೆ, ಸಾಹಿತ್ಯ ಸಮ್ಮೇಳನದ ಹಾಗೆಯೋ, ಕ್ರಿಕೇಟನ ಟೋರ್ನಾಮೆಂಟಗಳ ಹಾಗೆ ಟೋರ್ನಿ ಕರೆದು ಅವುಗಳಿಗೂ ಪಂದ್ಯ ಏರ್ಪಡಿಸಿ, ಪರ್ದಶಿಸಿದರೆ ನಮ್ಮ ಯುವ ಜನಾಂಗಕ್ಕೆ ಇವುಗಳ ಬಗ್ಗೆ ಮನವರಿಕೆ ಆದರೂ ಆದಿತು.



Saturday, 17 March 2018

ಬಾಳಿಗೊಂದು ಯುಗಾದಿ!

ಮಂಜುನಾಥ ಗದಗಿನ


ಹೊಸತನ-ವಿನೂತ ಬಾಳಿಗೊಂದು ಹಿರಿತನ ತಂದುಕೊಡುವುದೇ, ಈ ಯುಗಾದಿ. ಅದಕ್ಕೆಂದೇ ಭಾರತೀಯರಾದ ನಾವು ಇದನ್ನು ಹೊಸವರುಷ ಎಂದು ಸಂಭ್ರಮ, ಸಡಗರದಿಂದ ಆಚರಿಸುತ್ತೇವೆ. ಅದೇ ಯುಗಾದಿ ನನ್ನ ಜೀವನದಲ್ಲೂ ಹೊಸತನ ತರುತ್ತಿತ್ತು.
   ಹೌದು! ಯುಗಾದಿ ಹೊಸತನದ ಸಂಕೇತ, ಈ ಹೊಸತನಕ್ಕಾಗಿ ನಾನು ಮತ್ತು ನನ್ನಕ್ಕ ಕ್ಯಾಲೆಂಡರನ್ನು ತಿರುವಿ ಹಾಕುತ್ತಾ ಪದೇ ಪದೇ ಯುಗಾದಿ ಹಬ್ಬ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ದಿನಗಳನ್ನು ಕಳೆಯುತ್ತಿದ್ದೇವು. ಯಾಕೆಂದ್ರೆ ಯುಗಾದಿ ಹಬ್ಬ ಬಂತೆಂದ್ರೆ  ನಮ್ಮಪ್ಪ ನಮ್ಗೆಲ್ಲಾ ಹೊಸ ಬಟ್ಟೆ ಕೊಡಿಸುತ್ತಿದ್ದ. ನಾವು ಕೂಡಾ ಯುಗಾದಿ ಒಂದು ತಿಂಗಳು ಇರುವಾಗಲೇ  ಯಪ್ಪಾ ಯಪ್ಪಾ ಹೊಸ ಅರ‌್ವಿ ಕೊಡ್ಸಾ ಎಂದು ಗಂಟು ಬಿಳುವುದು ಮಾಮೂಲಾಗಿತ್ತು.
  ಯುಗಾದಿ ಸಮೀಪಿಸುತ್ತಿದ್ದಂತೆ ನಮ್ಮ ಆಸೆಗಳಿಗೆ ರೆಕ್ಕೆ-ಪುಕ್ಕಗಳು ಬಂದು ಹಾರಾಡುತ್ತಿದ್ದವು. ನಮ್ಮ ಗೆಳೆಯರಿಗೆಲ್ಲಾ  ಲೇ ನಮ್ಮಪ್ಪ ಈ ಸಾರಿ ಯುಗಾದಿಗೆ ಜರ್ಬದಸ್ತ್ ಅಂಗಿ-ಚಡ್ಡಿ ಕೊಡಿಸ್ತಾನಂತ ಎಂದು ಓಣಿಯ ಗೆಳೆಯರಿಗಿಲ್ಲಾ ಹೇಳಿ ವರ್ಚಸ್‌ಮೆಂಟ ಮಾಡುತ್ತಿದ್ದೆ.
  ಮಿರ, ಮಿರ್ ಮಿಂಚುವ ಬಣ್ಣದ ತೋಳಂಗಿ, ಸಣಕಲು ಕಾಲುಗಳಿಗೆ ದಪ್ಪ ಜಿನ್ಸ ಪ್ಯಾಂಟು, ಅದಕ್ಕೊಪ್ಪುವ ಬೂಟುಗಳು, ವ್ಹಾ! ಏನ್ ಸ್ಟೈಲ್, ಏನ್ ಲುಕ್, ಅಂತಾ ಇರೋ ಗೆಳೆಯರು. ಅಷ್ಟರಲ್ಲೇ ನಮ್ಮವ್ವಾ ಏಳ್ಲಾ, ಇನ್ನ ಟೈಮ್ ಆತು, ಎಂದು ಗೊಣಗುವದು ನೋಡಿ ನನಗೆ ಎಚ್ಚರವಾಗಿ ಬಿಡುತ್ತಿತ್ತು. ಎದ್ದು ಕುಂತು ಇದು ಕನಸಾ! ಎಂದು ಪೆಚ್ಚು ಮೊರೆಹಾಕಿಕೊಳ್ಳುತ್ತಿದ್ದೆ. ಏಸ್! ಯುಗಾದಿ ಸುತ್ತ ಇಂತಹ ಕನಸುಗಳು ಸಾಮಾನ್ಯವಾಗಿ ಬಿಟ್ಟಿದ್ದವು.
  ಒಂದು ವಾರ ಮುಂಚಿತವಾಗಿಯೇ, ಅಪ್ಪ ಅಂಗಿ ತರಲು ಹೋಗುತ್ತಿದ್ದ, ಆದರೆ ಅವನಿಗೆ ನಮ್ಮನ್ನು ಬಿಟ್ಟು ಹೋಗುವ ಖಯಾಲಿ. ಹೇಗಾದ್ರು ಮಾಡಿ ಇವರನ್ನು ಬಿಟ್ಟು ಹೋಗಬೇಕೆಂದುಕೊಳ್ಳುತ್ತಿದ್ದ, ಆದರೆ ಅದು ಅಸಾದ್ಯವಾದ ಕೆಲಸವಾಗಿತ್ತು. ಏಕೆಂದರೆ ನಮ್ಮಪ್ಪ ನಮ್ಮನ್ನು ಬಿಟ್ಟು ಮಾರುದ್ದು ದೂರ ಹೋದಾಗ, ನಾನು ನಮ್ಮಕ್ಕ ಯಾವುದೇ ಸಂಧಿಯಿಂದ ಅಪ್ಪನನ್ನು ಹಿಂಭಾಲಿಸಿ ಬಿಡುತ್ತಿದ್ದೆವು. ಈ ರೀತಿಯಾಗಿ ಅಪ್ಪನ ದುಂಬಾಲು ಬಿದ್ದು ನಮ್ಮಗೆ ಇಷ್ಟವಾದ ಅಂಗಿಗಳನ್ನು ಖರೀದಿ ಮಾಡಿಕೊಂಡು ಬರುತ್ತಿದ್ದೇವು. ಆದರೆ ಆ ಹೊತ್ತಿದೆ ನಮ್ಮಪ್ಪನ ಕಿಸೆ ಖಾಲಿ-ಖಾಲಿಯಾಗುತ್ತಿತ್ತು.
  ಇನ್ನೂ ಯುಗಾದಿ ದಿನಾ, ಸೂರ್ಯ ಹುಟ್ಟುವ ಮುನ್ನವೇ ಎದ್ದು ಬೇವಿನ ಮರ ಹುಡುಕಿಕೊಂಡು ಅಲೆಯುತ್ತಿದ್ದೇವು. ಅದೆಲ್ಲೂ ಮರ ಕಂಡಿತೆಂದ್ರ ದಾವಂತ ಹೊಡಿಹೋಗುತ್ತಿದ್ದೇವು. ಅಷ್ಟರಲ್ಲಾಗಲೆ ಜನ ಬಂದು ಹೋಗುತ್ತಿದ್ದರು. ನಮ್ಗೆ ಗಿಡ ಹತ್ತಲು ಬರುತ್ತಿರಲಿಲ್ಲ. ಆದ್ದರಿಂದ ಅಲ್ಲೇ ಇದ್ದ ಜನಕ್ಕೆ  ಅಣ್ಣಾರ ನಮ್ಮಗು ಸ್ವಲ್ಪ ಹರದಕೊಡ್ರಿ ಎಂದು ಬೇಡಿಕೊಳ್ಳುತ್ತಿದ್ದೇವು. ಅವ್ರ ಪಾಪಾ ಅಂತಾ ಕಿತ್ತು ಕೊಡುತ್ತಿದ್ದರು. ಹೀಗೆ ತಂದ ಬೇವನ್ನು ನಮ್ಮವ್ವನ ಕೈಯಲ್ಲಿ ಕೊಟ್ಟಾಗ ಅವಳು ಅದನ್ನು, ನೀರಿಗೆ ಹಾಕಿ ಕಾಯಿಸುತ್ತಿದ್ಳು. ಯಾಕ ಹಾಕ್ತಿ ಬೇ.. ಅಂತಾ ಕೇಳಿದರೆ  ಬೇವನ್ನು ಹಾಕಿ ಸ್ನಾನ ಮಾಡಿದ್ರ  ಯಾವುದೇ ರೋಗಾ-ರುಜಿನಾ ಬರೋದಿಲ್ಲ ಅಂತಾ ಹೇಳುತ್ತಿದ್ದಳು. ಅದರಿಂದ ನಾವು ಖುಷಿಯಾಗಿ ಹಾಕಬೇ ಇನ್ನಷ್ಟ ಹಾಕ ಎಂದು ಹೇಳುತ್ತಿದೇವು.
 ಸ್ನಾನವಾದ ನಂತರ ತಂದೆ-ತಾಯಿ ಮತ್ತು ನಮ್ಮಕ್ಕನ ಕಾಲುಗಳಿಗೆ ಬಿದ್ದು ಆರ್ಶಿವಾದ ಪಡೆಯುತ್ತಿದ್ದೆ ಹಾಗೂ ಬೇವು-ಬೆಲ್ಲ ತಿನ್ನಿಸುತ್ತಿದ್ದೆ. ಆ ಪ್ರತಿವರ್ಷ ನಮ್ಮವ್ವ ಒಂದು ಮಾತು ಹೇಳುತ್ತಿದ್ದಳು  ಮಗಾ ಇವತ್ತ ಯಾರ ಕೂಡಾನು ಜಗ್ಲಾ ಮಾಡಬೇಡಾ ಎಂದು ತಪ್ಪದೇ ಹೇಳಿ ಕಳುಹಿಸುತ್ತಿದ್ದಳು.  ನಂತರ ದೇವರು, ದಿಂಡ್ರು ಅಂತಾ ಕಂಡ ಕಂಡ ದೇವರಿಗೆಲ್ಲಾ ಹೋಗಿ ನಮಸ್ಕಾರ ಮಾಡುತ್ತಿದ್ದೇನು.  ಈ ರೀತಿ ಯುಗಾದಿ ನನ್ನ ಜೀವನದಲ್ಲಿ ಕಹಿಗಿಂತ ಸಿಹಿಯನ್ನೆ ಹೆಚ್ಚಾಗಿ ನೀಡಿದೆ.


Friday, 16 March 2018

ಯುವ ಪರಿಸರ ಪ್ರೇಮಿ ಲಿಂಗರಾಜ ನಿಡುವಣಿ

 
ಯಾವುದೇ ಫಲಾಪೇಕ್ಷೆಗಳು ಇಲ್ಲದೇ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜನತರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೊರಟ್ಟಿದ್ದಾರೆ ಗ್ರಾಮೀಣ ಪ್ರದೇಶದ ಯುವ ಪರಿಸರ ಪ್ರೇಮಿ ಲಿಂಗರಾಜ ನಿಡುವಣಿ.
  ಮೂಲತಃ ಶೇರವಾಡ ಗ್ರಾಮದವರಾದ ಲಿಂಗರಾಜ ಕೃಷಿ ಕುಟುಂಬದಿಂದ ಬಂದವರು. ಇವರ ಅಜ್ಜನವರು ಗಿಡ ಮೂಲಿಕೆಗಳಿಂದ ಔಷದಿ ತಯಾರಿಸಿ ಜನರಿಗೆ ನೀಡುತ್ತಿದ್ದರು. ಔಷಧಿಗಾಗಿ ಮನೆಯಲ್ಲಿ ನಾನಾ ನಮೂನೆಯ ಗಿಡಗಳನ್ನು ಬೆಳೆಸುತ್ತಿದ್ದರು. ಈ ಗಿಡಗಳ ರಕ್ಷಣೆಯ ಹೊಣೆಯನ್ನು ಲಿಂಗರಾಜರವರಿಗೆ ವಹಿಸುತ್ತಿದ್ದರು.  ಇದೇ ಕಾರಣಕ್ಕೆ ನಿಂಗರಾಜರವರಲ್ಲೂ ಪರಿಸರ ಬಗ್ಗೆ ಆಸಕ್ತಿ ಹುಟ್ಟಿತು. ಈ ಹವ್ಯಾಸವನ್ನು ಮುಂದುವರೆಸಿಕೊಂಡು ಹೊರಟ್ಟಿದ್ದಾರೆ.
ಸಂಘ-ಸಂಸ್ಥೆಗಳ ಸ್ಥಾಪನೆ.
 ಇಷ್ಟು ಚಿಕ್ಕ ವಯಸ್ಸಿನಲ್ಲೇ ಅನೇಕ ಅಂದೋಲನಗಳನು ಸಂಘಟಿಸುವದರ ಮೂಲಕ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.  ಪರಿಸರ ಹಾಗೂ ಸಮಾಜಮುಖಿ ಪರಿವರ್ತನೆಗಾಗಿ, ವಿನೂತನ, ಮಾರುತಿ ಯುವಕ ಮಂಡಳ ಹಾಗೂ ಪರಿವರ್ತನ ಯುವಕ ಮಂಡಳ ಎಂಬ ಎರಡು ಸಂಸ್ಥೆಗಳನ್ನು ಹುಟ್ಟು ಹಾಕಿ, ಇವುಗಳ ಮೂಲಕ ಪರಿಸರ ಜಾಗೃತಿಗಳನ್ನು ಮೂಡಿಸುತ್ತಿದ್ದಾರೆ. ಈ ಸಂಸ್ಥೆಗಳನ್ನು ನಡೆಸಲು ಯಾರ ಸಹಾಯ, ಸಹಕಾರವನ್ನು ಪಡೆಯದೇ ತಮ್ಮ ಸ್ವಂತ ಹಣದಿಂದಲ್ಲೇ ನಡೆಸುತ್ತಿದ್ದಾರೆ. ಈ ಸಂಸ್ಥೆಗಳ ಮೂಲಕ ಚಿಕ್ಕ ಮಕ್ಕಳಿಗೆ ಪರಿಸರದ ಬಗ್ಗೆ ಭಾಷಣ, ಚಿತ್ರಕಲೆ, ಕ್ವಿಜ್, ಹಾಗೂ ಸಾಕ್ಷ್ಯಚಿತ್ರಗಳನ್ನು ತೊರಿಸುವದರ ಮೂಲಕ ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಪ್ರತಿಯೊಂದು ಆಂದೋಲನಗಳ ಹಿಂದೆ ಈ ಯುವಕ ಮಂಡಳಗಳ ಸಹಾಯ ಇದ್ದೆ ಇರುತ್ತದೆ.
ಹೊಸ ಆಂದೋಲನಗಳ ಹರಿಕಾರ
ಪವಿತ್ರ ಪಂಚವಟಿ ಆಂದೋಲನ(ಬೇವು, ಬನ್ನಿ, ಅರಳಿ, ಹತ್ತಿ, ಪತ್ರಿ ಪ್ರಾಣವಾಯು ವೃದ್ದಿಸುವ ಗಿಡಗಳು), ಉಣಕಲ್ ಕೆರೆ ಸ್ವಚ್ಚತಾ ಅಭಿಯಾನ, ಕಸ, ಪ್ಲಾಸಿಕ ಮತ್ತು ಹಂದಿಗಳ ಮುಕ್ತ ಆಂದೋಲನ( ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಕಳುಹಿಸಿದ್ದಾರೆ), ಪರಿಸರ ಸ್ನೇಹಿ ಆಂದೋಲನ, ಶೌಚಾಲಯ ಸಮರ, ಸಸ್ಯಗಳ ದಾಖಲಿಕರಣ, ಗಿಡಗಳಿಗೆ ರಾಖಿ ಕಟ್ಟುವುದರ ಮೂಲಕ, ವಿಶಿಷ್ಟವಾಗಿ ರಕ್ಷಾಬಂಧನವನ್ನು ಆಚರಿಸಿದರು ಹಾಗೂ ಧಾರವಾಡದ ಶೇರೆವಾಶಡದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ, ಶಾಲೆಯ ಆವರಣದಲ್ಲಿ 125 ಕ್ಕೂ ಹೆಚ್ಚಿನ ಜಾತಿಯ ಗಿಡಗಳನ್ನು ನೆಟ್ಟು, ಆ ಗಿಡಗಳ ಪ್ರಯೋಜನದ ಬಗ್ಗೆ ಜನರಿಗೆ ತಿಳಿಹೇಳುತ್ತಿದ್ದಾರೆ. ಈ ಕಾರ್ಯಕ್ರಮದಕ್ಕೆ ಮಾಜಿ ಸಚಿವ ಬಸವರಾಜ ಹೊರಟ್ಟಿಯವರು ಸ್ವಪ್ರೇರಣೆಯಿಂದ ಬಂದು ಗಿಡ ನಟ್ಟಿದ್ದರು.
ಸಮಾಜಮುಖಿ ಕಾರ್ಯಗಳು
   ನಿಂಗರಾಜ ನಿಡುವಣಿ ಪರಿಸರ ಪ್ರೇಮಿ ಅಷ್ಟೇ ಅಲ್ಲದೇ , ಒಬ್ಬ ಸಮಾಜಿಕ ಕಾರ್ಯಕರ್ತರಾಗಿ ದುಡಿಯುತ್ತಾ ನೊಂದವರ ಬಾಳಿಗೆ ಬೆಳಕಾಗಿದ್ದಾರೆ. ಜನಸಂಖ್ಯೆ ಬಗ್ಗೆ ತಿಳುವಳಿಕೆ ನೀಡಲು ಜನಸಂಖ್ಯಾ ಆಂದೋಲನ, ಮತಧಾನದ ಜಾಗೃತಿ, ಮಕ್ಕಳ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಗ್ರಾಮೀಣ ಕ್ರೀಡಾಕೂಟಗಳ ಆಯೋಜನೆ ಹಾಗೂ ಗರ್ಭೀನಿಯರಿಗೆ ಉಡಿತುಂಬುವ ಕಾರ್ಯಕ್ರಮದ ಮೂಲಕ, ಗರ್ಭೀನಿಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮತ್ತು ಗ್ಲೋಬಲ್ ಹ್ಯಾಂಡವಾಷ ಡೇ ದಿನದಂದು, ಶಾಲಾ ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಆಂದೋಲನ ಹಮ್ಮಿಕೊಂಡಿದ್ದರು. ಈ ಆಂದೋಲನವನ್ನು ಗಮನಿಸಿದ ಯುನೆಸೆಫ ಇವರ ಈ ಆಂದೋಲನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ, 25 ಸಾವಿರ ಹ್ಯಾಂಡಗ್ಲೋಸ್‌ಗಳನ್ನು ನೀಡಿದೆ.
    ಇವೇಲ್ಲದರ ಜೊತೆಗೆ ಪ್ಯಾಮಿಲಿ ಪ್ಲಾನಿಂಗ್ ಅಸೋಶಿಯಸ್‌ನ ಧಾರವಾಡದ ಕಾರ್ಯಕಾರಣಿ ಸಮಿತಿಯ ಏಕೈಕ ಯುವ ಸದಸ್ಯರಾಗಿ, ಭಾರತ ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಯುವದಳದ ಸ್ವಯಂ ಸೇವಕರಾಗಿ ಪರಿಸರ ಹಾಗೂ ಸಮಾಜಿಕ ಕಾರ್ಯಕ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೋಂಡಿದ್ದಾರೆ.
   ಇವರ ಈ ಸಾಧನೆಗಳನ್ನು ಗಮನಿಸಿದ ನಾಡಿನ ಪ್ರತಿಷ್ಠಿತ ಪ್ರತಿಕೆಯೊಂದು ಇವರನ್ನು ಪರಿಸರ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೇ ಆಕಾಶವಾಣಿಯಲ್ಲಿ ಪರಿಸರ ಬಗ್ಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಇನ್ನೂ ಸಾಲುಮರದ ತಿಮಕ್ಕ ಲಿಂಗರಾಜರವರ ಪರಿಸರ ಪ್ರೀತಿಗೆ ಬೇಷ್ ಎಂದಿದ್ದಾರೆ.
ನಿಂಗರಾಜ ನಿಡುವಣಿ ಅನಿಸಿಕೆ:-
   ನಾವು ಪರಿವರ್ತನೆ ಬಯಸುವುದಾರೆ, ಅದು ನಮ್ಮಿಂದಲೇ, ಪ್ರಾರಂಭವಾಗಬೇಕು, ಅಂದಾಗ ಮಾತ್ರ ನಮ್ಮ ಸುತ್ತ-ಮುತ್ತಲಿನ ಪರಿಸರ ಉಳಿಯಲು ಸಾಧ್ಯ ಯುವಕರು ಹೆಚ್ಚು ಹೆಚ್ಚಾಗಿ ಪರಿಸರ ರಕ್ಷಣೆಯಲ್ಲಿ ತೊಡಗಬೇಕು.

-ಮಂಜುನಾಥ ಗದಗಿನ

Saturday, 10 March 2018

ಕುರಿ ಕಾಯೋ ಹುಡ್ಗ ಈಗ ಪಿಎಸ್ಐ!


ಮಂಜುನಾಥ ಗದಗಿನ
ಇದು ಕುರಿ ಕಾಯೋ ಹುಡಗನೊಬ್ಬ ತನ್ನ ಛಲದಿಂದ ಪಿಎಸ್ಐ ಆದ ಛಲದ ಕಥೆ. ಸಾಧನೆಗೆ ಬಡತನ ಅಡ್ಡಿಯಾಗದು. ಸಾಧಿಸಬೇಕು, ಗುರಿಮುಟ್ಟಬೇಕು ಎಂಬ ಛಲವಿದ್ದರೆ ಸಾಕು ಎಂತಹ ಬಡತನಕ್ಕೂ ಸೆಡ್ಡು ಹೊಡೆದು ಮುನ್ನಗ್ಗಬಹುದು ಎಂಬುದಕ್ಕೆ ಈ ಮಾದರಿಯಾಗಿದ್ದಾನೆ. ನನಗಾಗದು ಎಂದು ಕೈಕಟ್ಟಿ ಕುಳಿತ ಅದೇಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾನೆ. ಇದೀಗ ಪಿಎಸ್ಐ ಪರೀಕ್ಷೆ ಇದೆ ಪಾಸ್ ಆಗಿ ಎಲ್ಲರಿಗೂ ಸ್ಫೂರ್ತಿ ಆಗಿದ್ದಾನೆ. ಪಿಸ್ತ ಇನ್ ಸರ್ವಿಸನಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್, ಒಟ್ಟಾರೆ ರಾಜ್ಯಕ್ಕೆ 76ನೇ ರ್ಯಾಂಕ್ ಇದೆ.  ಎಲ್ಲರಿಗೂ ಸ್ಫೂರ್ತಿ.

ಆತನದ್ದು ತೀರಾ ಬಡ ಕುಟುಂಬ. ಇದ್ದದ್ದರಲ್ಲಿ ಎಲ್ಲವನ್ನು ಕಾಣುವ ಸರಳ ಕುಟುಂಬ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತಿಗೆ ಕಟಿಬದ್ಧರಾಗಿ ನಡೆಯುತ್ತಿದ್ದ. ಯಾವತ್ತು ತನ್ನ ಎಲ್ಲೆಯನ್ನು ಮೀರಿ ದಾಟಿ ಮತ್ತೊಬ್ಬರಿಗೆ ನೋವು ಕೊಟ್ಟವನಲ್ಲ. ಇದ್ದ ಬಡತನದಲ್ಲೇ ತಾನು ಕೂಲಿನಾಲಿ ಮಾಡಿಕೊಂತ. ತಾನು ಓದುತ್ತಾ, ತಮ್ಮ, ತಂಗಿಯರನ್ನು ಓದುತ್ತಾ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾನೆ.
ಶಾಲೆಯಲಿ ಇತ ನಂ ಒನ್. ಹೀಗಾಗಿ ಈತ ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದ. ಪ್ರತಿದಿನ ಶಾಲೆಗೆ ಬರುತ್ತಿದ್ದ. ಎಲ್ಲರಂತೆ ಕಲಿಯುತ್ತಿದ್ದ. ಆದರೆ, ಶಾಲೆ ಬಿಟ್ಟ ಮೇಲೆ ಅಜ್ಜನ ಆಸ್ತಿಯಾಗಿದ್ದ ಕುರಿಗಳನ್ನು ಹೊಡೆದುಕೊಂಡು ಅದೇಲೋ ದೂರದ ಗುಡ್ಡಕ್ಕೆ ಹೋಗಿ ಮೆಯಿಸಿಕೊಂಡು ಬರುತ್ತಿದ್ದ. ಇದರೊಟ್ಟಿಗೆ ಕೈಯಲ್ಲೊಂದು ಪುಸ್ತಕ ಹೊತ್ತುಕೊಂಡು ಕಲಿಯುತ್ತಿದ್ದ. ಆ ಕಡೆ ಕುರಿಗಳು ತಮ್ಮ ಪಾಡಿಗೆ ತಾವುಗಳು ಮೆಯ್ಯುತ್ತಿರುತ್ತೇವೆ. ಓದಿನಲ್ಲಿ ಮಗ್ನನಾಗಿ ಬಿಡುತ್ತಿದ್ದ. ಹೀಗಾಗಿ ಈತ ಆಟ, ಪಾಠದಲ್ಲಿ ಮುಂದಿದ್ದ. ಪ್ರತಿದಿನ ಆಡು ಕಾಯುವುದೇ ಈತನ ಕಾಯಕವಾಗಿತ್ತು. ಬಿಡುವಿನ ಸಮಯದಲ್ಲಿ ಗೆಳೆಯರೊಟ್ಟಿಗೆ ನಗುವಿನ ಹರಟೆ.
ಇಷ್ಟೇ ಶಾಲೆಯ ರಜೆಗಳಲ್ಲಿ ಈತ ತನ್ನ ಶಾಲೆಯ ಖರ್ಚು ಸರಿದೂಗಿಸಲು ಮದುವೆ ಪೆಂಡಾಲ್‌ಗಳನ್ನು ಹಾಕಲು ಹೋಗುತ್ತಿದ್ದ. ಈ ಸಮಯದಲ್ಲಿ ಗಳಿಸಿದ ಹಣವೇ ಆತನ ಶಿಕ್ಷಣಕ್ಕೆ ಆಧಾರವಾಗಿತ್ತು. ಹಾಗೋ ಹೀಗೋ ಆಡು ಕಾಯುತ್ತಾ, ಮದುವೆ ಪೆಂಡಾಲ್ ಹಾಕುತ್ತ, ಪಿಯುಸಿ ಮುಗಿಸಿದ. ನಂತರ ಬಿಕಾಂ ಅಲ್ಲಿಯೂ ಇದೆ ಸ್ಥಿತಿ. ಕಾಲೇಜಿಗೆ ಹೋಗಿದ್ದಕ್ಕಿಂತ ಕುರಿ ಕಾಯುವುದು, ಪೆಂಡಾಲ್ ಹಾಕುವುದು. ಆದರೆ, ಇದೆ ಸಮಯಕ್ಕೆ ಏನಾದರೂ ಸಾಧಿಸಬೇಕು ಎಂಬ ಛಲ ಆತನಲ್ಲಿ ಮೂಡಿತು. ಇದೇ ಕಾರಣಕ್ಕೆ ಕುದಿಯುತ್ತಿದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶುರು ಮಾಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಇರುವಾಗಲೇ, ಡಿಗ್ರಿ ಕೂಡ ಮುಗಿತು.
ಇನ್ನೇನು ಮನೆಯಲ್ಲಿ ಇದ್ದ ಒಂದು ಕೋಣೆಯಲ್ಲಿಯೇ ತನ್ನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳತೊಡಗಿದ. ಇದಕ್ಕೆ ಒಂದು ಟೈಂ ಟೇಬಲ್ ತಯಾರಿಸಿ ಓದಿದೆ. ಇದರೊಟ್ಟಿಗೆ ಕುರಿ ಕಾಯುವ ಕೆಲಸ ಬೇರೆ. ಈತನ ಈ ಪರಿಶ್ರಮಕ್ಕೆ ಒಂದೆ ಸಲ್ಲಕ್ಕೆ ಎರಡು ಸರ್ಕಾರಿ ನೌಕರರು ಅರಸಿ ಬಂದವು. ಕೆಎಸ್‌ಐಎಸ್‌ಎಫ್ ಹಾಗೂ ಕೆಎಸ್‌ಆರ್‌ಪಿ. ಇದರಲ್ಲಿ ಸೇರಿದ್ದು ಕೆಎಸ್‌ಆರ್‌ಪಿ. ನೌಕ್ರಿ ಹಿಡಿದು ಬೆಂಗಳೂರು. ಈತನ ಛಲ ಇಷ್ಟಕ್ಕೇ ನಿಲ್ಲಲಿಲ್ಲ. ಅಲ್ಲಿದ್ದು ಮತ್ತೇ ಓದಿದ ಇದರ ಪರಿಣಾಮವಾಗಿ ಇಲಾಖೆಯಲ್ಲಿ ಪರೀಕ್ಷೆಯಲ್ಲಿ ಪಾಸಾದ. ಆದರೆ, ಅನಿವಾರ್ಯ ಕಾರಣಗಳಿಂದ ಈ ಹುದ್ದೆಗೆ ಸೇರಲಾಗುವುದಿಲ್ಲ. ಹೀಗೆ ಎಸ್ಡಿಎ ಪರೀಕ್ಷೆ ಬರೆದ ಅಲ್ಲಿಯೂ ಯಶ ಕಂಡ. ಆದರೆ, ನ್ಯಾಯಾಲಯದಲ್ಲಿ ಕ್ರಿ.ಶ. ಮತ್ತೇ ಸಿವಿಲ್ ಕಾನ್ಸಸ್ಟೇಬಲ್ ಪರೀಕ್ಷೆ ಬರೆದಿದ್ದಾರೆ. ಇದರಲ್ಲೂ ಯಶಸ್ಸು ಸಾಧಿಸಿದ. ಸದ್ಯ ಕುಂದಾನಗರಿಯಲ್ಲಿ ಆರಕ್ಷಕ ಹುದ್ದೆಯಲ್ಲಿ ಜನರ ರಕ್ಷಣೆ ಮಾಡುತ್ತಿದ್ದಾರೆ. ಹೌದು! ಅವನೆ ಕಟಕೋಳ ಗ್ರಾಮದ ಕರೆಪ್ಪ ಕುರುವಿನಕೊಪ್ಪ. ಇತನ ಛಲ ಹಾಗೂ ಸಾಧಿಸಬೇಕೆಂಬ ಒಂದೇ ಒಂದು ದೃಢತೆ ಇತನ ಸಾಧನೆಗೆ ಕಾವಲು. ಇತನ ಸಾಧನೆ ಇಷ್ಟಕ್ಕೆ ಮುಗಿದಿಲ್ಲ. ಈ ಪಿಎಸ್‌ಐ ಆಗಬೇಕು ಹಿರಿಯಾಸೆ, ಅಚಲ ಗುರಿಯೊಂದಿಗೆ ನಿರಂತರ ಓದಿನಲ್ಲಿ ಮಗ್ನನಾಗಿದ್ದಾನೆ. ಇಂದು ನಾಳೆ ಇದರಲ್ಲೂ ಯಶ ಸಾಧಿಸುತ್ತಾನೆ ಎಂಬ ನಂಬಿಕೆಯೇ ಆತನದ್ದು. ಏನೇ ಆಗಲಿ ನನ್ನಿಂದ ಆಗದು ಎಂಬ ಯುವಕರಿಗೆ ಈ ಸ್ಪೂರ್ತಿ. ಇದೇ ಕಾರಣಕ್ಕೆ ಐದು ನೌಕ್ರಿ ಪಡೆದು, ಮತ್ತಷ್ಟು ಉನ್ನತ ಹುದ್ದೆಗೇರಬೇಕೆಂದು ಮುನ್ನುಗ್ಗುತ್ತಿದ್ದಾನೆ. ಇತನ ಎಲ್ಲ ಕನಸುಗಳು, ನೂರಾಸೆ ಕನಸುಗಳು. ಮತ್ತಷ್ಟು ಮಗದಷ್ಟು ಜನಕ್ಕೆ ಇದು ಮಾದರಿಯಾಗಲಿ ಎಂಬ ಎಲ್ಲರ ಆಶಯ.
-
ಮಂಜುನಾಥ ಗದಗಿನ

Saturday, 3 March 2018

ರಂಗೇರಿದ ರಂಗಿನ ನೆನಪು..


ಪ್ರಕೃತಿ ಸಂಪೂರ್ಣ ಸೊರಗಿರುತ್ತದೆ, ಉದುರಿದ ಎಲೆಗಳು, ಬಾಡಿದ ಬಳ್ಳಿಗಳು, ಬೆತ್ತಲಾಗಿ ನಿಂತ ಮರಗಳು ಮತ್ತೆ ಮರು ಜೀವ ಪಡೆಯಲು ಕಾತರಿಸುತ್ತಿರುತ್ತವೆ. ಇಂತಹ ಸಮಯದಲ್ಲೆ ಬಣ್ಣಗುಂದಿದ ನಮ್ಮ ಬದುಕಿನಲ್ಲಿ ಬಣ್ಣ ತುಂಬಲು ರಂಗನ್ನು ಹೋದ್ದು, ಬಂದೇ ಬೀಡುತ್ತದೆ, ರಂಗಿನ ಹಬ್ಬ ಹೋಳಿ. ಇಂತಹ ರಂಗಿನ ನೆನಪುಗಳು ರಂಗಾಗಿ ರಂಗೇರಿ ಗರಿ ಬಿಚ್ಚಿ ನಲಿದಾಡುತ್ತಿವೆ.
ಮಹಾ ಶಿವರಾತ್ರಿ ಮುಗಿದ ಕೂಡಲೇ, ನಮ್ಮ ರಂಗಿನಾಟಗಳು ಶುರುವಾಗುತ್ತಿದ್ದವು. ಅಟ್ಟದ ಮೇಲೆ ಬೆಚ್ಚಗೆ ಮಲಗಿದ್ದ ಹಲಗೆಗಳು ಈ ವೇಳೆ ಧೂಳಗೊಡವಿ ಮೇಲೆಲುತ್ತಿದ್ದವು. ಓಣಿ ತುಂಡಹೈಕ್ಳುಗಳು ಒಂದು ಕಡೆ ಹಲಗೆ ಬಾರಿಸುತ್ತಿದ್ದರೆ, ಹೋಗೋ,ಬರೋರು ಹಾ..ಹಾ..ಶುರುವಾಯಿತ್ತಪ್ಪ ಈ ಕಪ್ಪಿಯಾಟಗಳು ಎಂದು ಗೋಣಗುತ್ತಾ ಹೋಗುತ್ತಿದ್ದರು. ಮತ್ತೊಂದಿಷ್ಟು ಜನರು ಅಯ್ಯೋ..!ಪಾಪಾ ಕಣ್ರಿ ಮಕ್ಳಾದ್ರು ಯಾವಾಗ ಹಲಗೆ ಬಾರಿಸ್ಬೇಕು ಎಂದು ಕನಿಕರ ಪಟ್ಟುಕೊಳ್ಳುತ್ತಿದ್ದರು.
ಹೀಗೆ ಶುರುವಾದ ನಮ್ಮ ಹೋಳಿಯ ಸಂಭ್ರಮ, ದಿನದಿಂದ ದಿನಕ್ಕೆ ವಿಭಿನ್ನ ಆಯಾಮಗಳನ್ನು ಪಡೆದುಕೊಂಡು ರಂಗೆರುತ್ತಿತ್ತು. ಕೆಲವೊಂದಿಷ್ಟು ಸಾರಿ ನಮ್ಮ ಹಲಗೆಯ ಸದ್ದಿಗೆ ಓಣಿಯ ಹಿರಿಯರು ಮಂಗಳಾರತಿ ಮಾಡುತ್ತಿದ್ದರು. ಈ ಹೋಳಿ ಹುಣ್ಣಿಮೆಯ ಹೈಲೈಟ್ಸ್‌ಗಳಾದ ತಮಟೆ ಪಡೆಯುವುದು, ಬಣ್ಣದಲ್ಲಿ ಮಿಂದೆಳುವು ಇದರೊಟ್ಟಿಗೆ ಹೊಯ್ಕೋಳೋದು. ಹೌದು! ಹೋಳಿ ಶುರುವಾದ್ರೆ ಹೊಯ್ಕೋಂಡವರ ಬಾಯಿಗೆ ಹೋಳಿಗೆ ಎನ್ನುತ್ತಾ, ಸಾಮೂಹಿಕವಾಗಿ ನಾಲ್ಕು ಮಂದಿಗೆ ಕಿರಿಕಿರಿಯಾಗುವ ಹಾಗೆ ಹೊಯ್ಕೋಳ್ತಾಯಿದ್ವಿ.
ಮಹಾಶಿವರಾತ್ರಿ ಮುಗಿತಾ, ಇದ್ದಂತೆ ನಮ್ಮ ಓಣಿಯ ಮಾಸ್ಟರ ಮೈಂಡಗಳು ಕಾರ್ಯಪ್ರವೃತ್ತವಾಗುತ್ತಿದ್ದವು. ಓಣಿಯಲ್ಲಿ ಯಾವ ರೀತಿಯಾಗಿ ಕಟ್ಟಿಯನ್ನು ಕಳ್ಳತನ ಮಾಡ್ಬೇಕು, ಯಾರು ಮಾಡಬೇಕು, ಹೇಗೆ ಮಾಡ್ಬೇಕೆಂಬ ಗುಸು-ಗುಸು,ಪಿಸು,ಪಿಸು ಮಾತುಗಳ ಭರಾಟೆ ಜೋರಾಗಿ ನಡೆಯುತ್ತಿದ್ದವು. ನಮ್ಮ ಮಾಸ್ಟರ ಪ್ಲಾನಗಳಿಗೆ ಸಂಧಿ,ಗೊಂದಿಯಲ್ಲಿ ಬಚ್ಚಿಟ ಕಟ್ಟಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಕಾಮಣ್ಣನ ಬೀದಿ ಸೇರುತ್ತಿದ್ದವು. ಅವತ್ತೊಂದು ದಿನ ನಮ್ಮ ಓಣಿಯ ಹುಡುಗರೆಲ್ಲ ಸೇರಿ ರಾತ್ರಿ ವೇಳೆಯಲ್ಲಿ ಕಟ್ಟಿಗೆ ಕಳ್ಳತನ ಮಾಡಲು ಹೋದಾಗ, ಸಿಕ್ಕಿ ಹಾಕಿಕೊಂಡು, ಹೊಡೆತ ತಿಂದಿದ್ವಿ, ನಮ್ಮ ಓಣಿಯಲ್ಲಿ ನಾವೆಲ್ಲರೂ ಕಟ್ಟಿಗೆ ಕಳ್ಳರೆಂದೆ ರಾತ್ರೋ ರಾತ್ರಿ ಪ್ರಸಿದ್ದಿ ಪಡೆದುಕೊಂಡಿದ್ದೆವು.
ಬೀದಿ ಕಾಮಣ್ಣನನ್ನು ಸುಡುವುದಕ್ಕೂ ಮುನ್ನಾದಿನ, ನಮ್ಮ ಕಡೆ ಮನೆ ಕಾಮಣ್ಣನನ್ನು ಸುಡುವುದು ವಾಡಿಕೆ ಇದೆ. ಈ ಸಮಯದಲ್ಲಿ ಓಣಿಯ ಹುಡುಗರೆಲ್ಲ ತಮ್ಮ ಹಲಗೆಯನ್ನು ತಂದು ಬಾರಿಸುತ್ತಿದ್ದರು. ಈ ಸಮಯದಲ್ಲಿ ಗೊಬ್ಬರಿ ಚೂರೊಂದನ್ನು ಕಾಮಣ್ಣನಿಗೆ ಹಾಕಲಾಗುತ್ತದೆ. ಈ ಗೊಬ್ಬರಿ ಚೂರಿಗಾಗಿ ನಮ್ಮ ಹುಡುಗರು ಜಿದ್ದಿಗೆ ಬಿದ್ದು ಅದನ್ನು ಪಡೆದುಕೊಳ್ಳುತ್ತಿದ್ದರು. ಯಾರಿಗೆ ಆ ಗೊಬ್ಬರಿ ಸಿಗುತ್ತದೆಯೋ..ಅವರು ಗೊಬ್ಬರಿಯ ಕರಿ ಮಸಿಯಿಂದ ಇತರೆ ಹುಡುಗರಿಗೆ ಮೀಸೆ ಕೊರೆಯುತ್ತಿದ್ದರು. ಹೀಗೆ ಮಾಡುವುದರಿಂದ ಬೇಗ ಮೀಸೆ ಚಿಗುರತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.
ಕಾಮಣ್ಣನ ದಹನದ ದಿನ  ಅಪ್ಪ, ನೀರ ಬಣ್ಣ ಮಾಡಿ ಕೊಡುತ್ತಿದ್ದ. ನಾ ಅದನ್ನು ತುಂಬಿಕೊಂಡು ಹೋಗೋ,ಬರೋರಗೆ ಮಾರುದ್ಧ ದೂರದಿಂದಲೇ ಪಿಚಕಾರಿಯಿಂದ ಹೊಡೆಯುತ್ತಿದೆ. ಈ ಸಂದರ್ಭದಲ್ಲಿ ಯಾರಾದ್ರು ನನಗೆ ಬಣ್ಣ ಹಚ್ಚಲು ಬಂದ್ರೆ, ನಮ್ಮಪ್ಪ ಅವರನ್ನು ಗದರಿಸಿ ಕಳುಹಿಸುತ್ತಿದ್ದ. ರಂಗಿನಾಟ ಮುಗಿದ ಮೇಲೆ ಅವ್ವ ಮೂರು ಗುಂಡೆ ನೀರು ಕಾಯಿಸಿ, ಬಣ್ಣ ಹೋಗೋವರೆಗೂ ಸ್ನಾನ ಮಾಡಿಸುತ್ತಿದ್ಳು. ನಂತರ ಬಿಸಿ ಬಿಸಿ ಹೋಳಿಗೆ ಮಾಡಿ ತಿನ್ನಿಸುತ್ತಿದ್ದಳು.
ಈ ರೀತಿಯಾಗಿ ಬಾಲದ್ಯ ರಂಗಿನಾಟ ಬಲು ಮೋಜಿನಿಂದ ಕೂಡಿತ್ತು.

Wednesday, 7 February 2018

ಬಿಳಿ ಆನೆ ಹುಡುಕುತ್ತಾ..!!

ಮಂಜುನಾಥ ಗದಗಿನ
   ಜೀವನದಲ್ಲಿ ಮೂರ್ಖ ಆಗೋದು ಎಷ್ಟೋಂದು ಸುಲಭ ಅಲ್ವಾ! ಸಮಯ ಸಂದರ್ಭಗಳು ನಮ್ಮನ್ನು ಮೂರ್ಖರನ್ನಾಗಿಸಿದ್ರೆ, ಮತ್ತೊಂದಿಷ್ಟು ಸಾರಿ ನಮ್ಮ ಮಹಾನ ಬುದ್ದಿಮತ್ತೆಯಿಂದ ಮಹಾನ ಮೂರ್ಖರಾಗಿರುತ್ತೇವೆ. ಅದರಲ್ಲೂ ಮೂರ್ಖರಲ್ಲಿ ನಾನಾ ಮೂರ್ಖರಿದ್ದಾರೆ. ಮೂರ್ಖ, ಶತಮೂರ್ಖ, ಅಡ್ಡ್ನಾಡಿಮೂರ್ಖ, ಹೀಗೆ ಮೂರ್ಖತನದ ಆಳವನ್ನು ಬಗೆದಷ್ಟು ನಾವೇ ಮೂರ್ಖರಾಗುತ್ತೇವೆ. ನಮ್ಮ ಮೂರ್ಖತನವನ್ನು ನೆನೆಸಿಕೊಳ್ಳಲೆಂದೆ ಏ.1 ನ್ನು ಮೂರ್ಖರ ದಿನವನ್ನಾಗಿ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಳಿ ಆನೆಯ ಮೂರ್ಖತನ ನೆನಪಿಗೆ ಬಂದು ಮುಖದಲ್ಲಿ ಕಿರು ನಗೆಯನ್ನ ಹೊಮ್ಮಿಸುತ್ತಿದೆ.

ನಾನಾಗ ಆರನೇ ತರಗತಿಯ ವಿದ್ಯಾರ್ಥಿ. ಆ ಸಮಯಕ್ಕೆ ಹೊರ ಪ್ರಪಂಚದ ಅರಿವೇ ಇಲ್ಲದ ಹಸುಗೂಸಾಗಿದ್ದೆ. ಶಾಲೆ, ಶಾಲೆ ಬಿಟ್ರೆ, ಮನೆ ಇವೆರಡೆ ನನ್ನ ಲೋಕವಾಗಿದ್ದವು. ಯಾರು ಏನೇ! ಹೇಳಿದ್ರು ಮೂಕ ಬಸವಣ್ಣನ ಹಾಗೆ ತಲೆ ಅಲ್ಲಾಡಿಸುತ್ತಾ, ನನ್ನ ಪಾಡಿಗೆ ನಾನಿರುತ್ತಿದ್ದೆ. ಅದೊಂದು ದಿನ ಶಾಲೆ ಮುಗಿಸಿಕೊಂಡು, ಸ್ನೇಹತರ ಒಟ್ಟಿಗೆ ಮನೆಗೆ ಬರುತ್ತಿದೆ. ಆವಾಗ ನಮ್ಮ ಓಣಿಯ ಹಿರಿಯಣ್ಣ, ಲೋ, ಮಂಜ್ಯಾ ಬಾರೋ ಇಲ್ಲಿ ಎಂದು ಕರೆದು.  ನಿನ್ಗೊಂದ ವಿಷಾ ಗೊತ್ತಾ! ಇವತ್ತು ನಮ್ಮ ಬಜಾರನಲ್ಲಿ ಬಿಳಿ ಆನೆ ಬಂದಿದೆ ಅಂತೆ, ಎಲ್ಲರ‌್ರು, ಅಲ್ಲಿ ಹೋಗಿ ನೋಡ್ಕೊಂಡ ಬಂದಿದ್ದಾರೆ. ಈ ಕರಿ ಆನೆ ಇದೆಯಲ್ಲಾ, ಅದಕ್ಕಿಂತ ಭಯಂಕರವಾಗಿದೆ ಎಂದು ಹೇಳ್ತಾಯಿರ‌್ಬೇಕಾದ್ರೆ, ಅಲ್ಲೆ ಪಕ್ಕದಲ್ಲೆ ಕುಳಿತ್ತಿದ್ದ ಮತ್ತೋಬ್ಬರು ಹೌದು! ನಾವು ನೋಡ್ಕೊಂಡ ಬಂದ್ವಿ ಎಂದು, ಅವರ ಮಾತಿಗೆ ಪುಷ್ಠಿ ನೀಡಿದ್ರು.
ಹ್ಞೂ! ಅವರ ಹೇಳೋದು, ಕೇಳಿ ನಮಗೆ ಕುತೂಹಲ ತಡೆಯಲು ಆಗಲಿಲ್ಲಾ. ಅಷ್ಟಕ್ಕೂ ಆ ವಯಸ್ಸಿಗೆ ಬಿಳಿ ಆನೆಗಳು ಇರೋದಿಲ್ಲ ಎಂಬ ವಿಚಾರವು ನಮಗಿರಲಿಲ್ಲ. ಮನೆಗೆ ಹೋದಾವ್ರ, ಪಾಟಿಚೀಲಾ, ಇಟ್ಟು ಬಜಾರ ಕಡೆ ಓಡಿದ್ವಿ..ಓಡಿದ್ವಿ..ಓಡಿ ಬಜಾರನ ಸಂಧಿ ಗೊಂದಿಗಳೆಲ್ಲಾ ತೀರವಿಹಾಕಿ, ಬಿಳಿ ಆನೆ ಹುಡುಕಿದ್ವಿ. ಆದ್ರ ಬಿಳಿ ಆನೆ ಸುಳಿವೇ ಸಿಗಲಿಲ್ಲಾ. ಮನೆಗೆ ಬಂದು ನಮ್ಮ ಅಪ್ಪಾನ ಮುಂದೆ ನಡೆದ ವಿಷಯವನ್ನ ಹೇಳಿದಾಗ, ಅಪ್ಪ ಸಹಿತ ನಗೋದಕ್ಕೆ ಶುರು ಮಾಡಿದಾ. ಯಾಕೆ ಅಂತ ಕೇಳಿದಕ್ಕೆ, ನಿಮ್ಮ ಟೀಚರ್ ಚಲೋ ಸಾಲಿ ಕಲ್ಸಿದ್ದಾರ ಬೀಡು ಎಂದು ಹೊರಟು ಹೋದಾ.
ಬಿಳಿ ಆನೆಯ ಇದೇ, ಎಂದು ಹೇಳಿದ ಆ ಅಣ್ಣ ಮತ್ತೆ ಸಿಕ್ಕ, ಆವಾಗ ಅವ್ನ ಕೇಳಿದ್ವಿ.  ಅಣ್ಣಾ ನಾವ್ ಹೋಗಿದ್ವಿ ಅಲ್ಲಿ ಎಲ್ಲೂ ಬಿಳಿ ಆನೆ ಕಾಣಿಸ್ಲೆ ಇಲ್ಲಾ ಎಂದು ಒಟ್ಟಾಗಿ ಹೇಳಿದ್ವಿ. ಅದಕ್ಕ ಅವನು ಏಪ್ರಿಲ್ ಫೂಲ್! ಏಪ್ರಿಲ್ ಫೂಲ್ ಎಂದನು. ನಮಗೆ ಆಗ ಏಪ್ರಿಲ್ ಫಸ್ಟ್ ಏಪ್ರಿಲ್ ಫೂಲ್ ದಿನಾಚರಣೆ ಅಂತಾ ಗೊತ್ತೆ ಇರಲಿಲ್ಲಾ. ಆ ಅಣ್ಣಯ್ಯಾ, ತಿಳಿಸಿದ ಮೇಲೆ ನಮ್ಗೆ ಗೊತ್ತಾಗಿದ್ದು. ಹಿಂಗು ತಿಂದ ಮಂಗನ ಹಾಗೆ ಅಲ್ಲಿಂದ ಹೊರಟು ಬಂದ್ವಿ. ನಂತರ ನಾವು ಕೂಡಾ ಸಿಕ್ಕವರ‌್ನ ಏಪ್ರಿಲ್ ಫೂಲ್ ಮಾಡಲು ಶುರು ಮಾಡಿದ್ವಿ.
ಏಪ್ರಿಲ್ ಫಸ್ಟ್ ಬಂತು ಅಂದ್ರೆ ನನ್ಗೆ ಬಿಳಿ ಆನೆ ಹಾಗೂ ನಮ್ಮ ಓಣಿಯ ಅಣ್ಣ ನೆನಪಿಗೆ ಬರುತ್ತಾರೆ. ನನ್ನ ಮೂರ್ಖತನಕ್ಕೆ ಒಂದು ಸುಂದರ ನೆನಪನ್ನ ಒದಗಿಸಿದ ನನ್ನ ಓಣಿಯ ಅಣ್ಣಿಗೆ ನಾನು ಏಫ್ರಿಲ್ ಫೂಲ್ ಮಾಡಲು ಕಾತುರನಾಗಿದ್ದೇನೆ. ನೀವು ಕೂಡಾ ನಿಮ್ಮ ನೆಚ್ಚಿನವರನ್ನು ಯಾವ ರೀತಿಯಾಗಿ ಮೂರ್ಖರನ್ನಾಗಿಸ್ಬೇಕು ಎಂಬುದನ್ನ ಈಗಲೇ ಪ್ಲಾನ ಮಾಡಿ.

8050753148


ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...